ETV Bharat / bharat

ಶಿವಸೇನೆ v/s ಶಿವಸೇನೆ: ಮಹಾರಾಷ್ಟ್ರ ಸ್ಪೀಕರ್​ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

author img

By ETV Bharat Karnataka Team

Published : Feb 13, 2024, 10:49 AM IST

ಶಿವಸೇನೆ v/s ಶಿವಸೇನೆ
ಶಿವಸೇನೆ v/s ಶಿವಸೇನೆ

ಶಿವಸೇನೆಯಿಂದ ಬಂಡೆದ್ದ ಸಿಎಂ ಏಕನಾಥ್​ ಶಿಂಧೆ ಬಣದ ಪರವಾಗಿ ಮಹಾರಾಷ್ಟ್ರ ಸ್ಪೀಕರ್​ ನೀಡಿದ ತೀರ್ಪನ್ನು ಪ್ರಶ್ನಿಸಿ ಉದ್ಧವ್​ ಠಾಕ್ರೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಮುಂದೂಡಿದೆ.

ನವದೆಹಲಿ: ಶಿವಸೇನೆಯಿಂದ ಬಂಡೆದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ವಜಾಗೊಳಿಸಿದ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿರ್ಧಾರವನ್ನು ಪ್ರಶ್ನಿಸಿ, ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸಮಯದ ಕೊರತೆಯಿಂದಾಗಿ ಸೋಮವಾರ ನಡೆಸಬೇಕಾಗಿದ್ದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಅಂದು ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿದೆ.

ಠಾಕ್ರೆ ಬಣದ ಶಾಸಕ ಸುನಿಲ್​ ಪ್ರಭು ಅವರು, ಸ್ಪೀಕರ್​ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದು ಸುಪ್ರೀಂಕೋರ್ಟ್​, ಸಿಎಂ ಏಕನಾಥ್​ ಶಿಂಧೆ ಮತ್ತು ಅವರ ಗುಂಪಿನ 38 ಶಾಸಕರಿಗೆ ನೋಟಿಸ್ ನೀಡಿತ್ತು. ಈ ಮಧ್ಯೆ ಉದ್ಧವ್​ ಠಾಕ್ರೆ ಗುಂಪನ್ನು ಅನರ್ಹಗೊಳಿಸಲು ಸ್ಪೀಕರ್​ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಿಂಧೆ ಬಣ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಉತ್ತರಿಸುವಂತೆ ಸೂಚಿಸಿ ಠಾಕ್ರೆ ಬಣಕ್ಕೆ ನೋಟಿಸ್​ ರವಾನಿಸಲಾಗಿದೆ.

ನಿಜವಾದ ಶಿವಸೇನೆ ಯಾವುದು?: ಶಿಂಧೆ ಮತ್ತು ಅವರ ಗುಂಪನ್ನು ಅನರ್ಹಗೊಳಿಸದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿದ್ದಲ್ಲದೇ, ಠಾಕ್ರೆ ಬಣವು ಜೂನ್ 2022 ರಲ್ಲಿ ಬಂಡೆದ್ದ ನಂತರ ಶಿಂಧೆ ಬಣವನ್ನು 'ನಿಜವಾದ ಶಿವಸೇನೆ' ಎಂದು ಸ್ಪೀಕರ್ ಆದೇಶಿಸಿದ್ದಾರೆ. ಠಾಕ್ರೆ ಬಣದ ಗುಂಪು ನಿಜವಾದ ಶಿವಸೇನೆಯಾಗಿದೆ. ಈ ಬಗ್ಗೆಯೂ ಆದೇಶ ನೀಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.

ಸ್ಪೀಕರ್​ ನಾರ್ವೇಕರ್​ ಅವರು ಜನವರಿ 10 ರಂದು ಪಕ್ಷಾಂತರ ವಿರೋಧಿ ಕಾಯ್ದೆ ಅನುಸಾರ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ನ್ಯಾಯ ನಿರ್ಣಯ ನೀಡಿದ್ದರು. ಬಂಡಾಯವೆದ್ದು ಪಕ್ಷದಿಂದ ಹೊರಹೋಗಿರುವ ಶಿಂಧೆ ಮತ್ತವರ ಗುಂಪಿನ ಪರವಾಗಿ ಬಂದ ಈ ಆದೇಶದ ವಿರುದ್ಧ ಠಾಕ್ರೆ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸ್ಪೀಕರ್ ಅವರ ಏಕಪಕ್ಷೀಯ ನಿರ್ಧಾರ ಮತ್ತು ಅಧಿಕಾರದ ದುರುಪಯೋಗ ಎಂದು ಆರೋಪಿಸಿತ್ತು.

ಬಂಡೆದ್ದ ಶಾಸಕರ ಪರವಾಗಿ ಸ್ಪೀಕರ್ ತೀರ್ಪು ನೀಡಿದ್ದಾರೆ. ಶಾಸಕಾಂಗ ಪಕ್ಷವನ್ನು ರಾಜಕೀಯ ಪಕ್ಷದೊಂದಿಗೆ ಸಮೀಕರಿಸಿದ್ದಾರೆ. ಇದು ಸುಭಾಷ್ ದೇಸಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನಿನ ವಿರುದ್ಧವಾಗಿದೆ. ಶಾಸಕಾಂಗ ಪಕ್ಷವು ಕಾನೂನು ಘಟಕವಲ್ಲ ಎಂದು ವಾದಿಸಿದೆ.

ಸ್ಪೀಕರ್ ನಿರ್ಧಾರವು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿವೆ. ಇದು ಪಕ್ಷಾಂತರವನ್ನು ಅಡೆತಡೆಯಿಲ್ಲದೇ ಮಾಡಲು ಅವಕಾಶ ನೀಡುತ್ತದೆ. ಬಹುಪಾಲು ಶಾಸಕರು ಬಂಡೆದ್ದು, ಗುಂಪು ಕಟ್ಟಿಕೊಂಡು ಪಕ್ಷವೇ ತಮ್ಮದು ಎಂದು ಹೇಳುವ ಪರಿಪಾಠ ಬೆಳೆಯಲಿದೆ. ಪಕ್ಷಾಂತರ ಮಾಡಿದ ಶಾಸಕರನ್ನು ಶಿಕ್ಷಿಸುವ ಬದಲು, ಇಂತಹ ತೀರ್ಪು ನೀಡಿದರೆ ಪಕ್ಷಾಂತರಿಗಳಿಗೆ ಇನ್ನಷ್ಟು ಅವಕಾಶಗಳು ನೀಡಿದಂತಾಗುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ: ಶಿವಸೇನೆ ಬಿಕ್ಕಟ್ಟು: ಸಿಎಂ ಏಕನಾಥ್​ ಶಿಂಧೆ ಬಣಕ್ಕೆ ನೋಟಿಸ್​ ನೀಡಿದ ಸುಪ್ರೀಂಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.