ETV Bharat / bharat

ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಭಯೋತ್ಪಾದಕರ ಬಂಧನ; ಬಿಜೆಪಿ-ಟಿಎಂಸಿ ಕೆಸರೆರಚಾಟ - Cafe Blast Case

author img

By PTI

Published : Apr 12, 2024, 9:39 PM IST

Rameshwaram Cafe blast: NIA arrests two key accused from Bengal; BJP, TMC trade barbs
ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಭಯೋತ್ಪಾದಕರ ಬಂಧನ; ಬಿಜೆಪಿ-ಟಿಎಂಸಿ ಕೆಸರೆರಚಾಟ

Rameshwaram Cafe case: ಪಶ್ಚಿಮ ಬಂಗಾಳವು ಭಯೋತ್ಪಾದಕರ ಸುರಕ್ಷಿತ ತಾಣವನ್ನಾಗಿ ಮಾಡಿದೆ ಎಂದು ಬಿಜೆಪಿ ದೂರಿದೆ. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ, ರಾಜ್ಯ ಪೊಲೀಸರ ತ್ವರಿತ ಕ್ರಮದಿಂದಾಗಿಯೇ ಆರೋಪಿಗಳ ಬಂಧನವಾಗಿದೆ ಎಂದು ತಿಳಿಸಿದೆ.

ನವದೆಹಲಿ/ಕೋಲ್ಕತ್ತಾ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಾಂಬರ್ ಮುಸ್ಸಾವಿರ್ ಹುಸೇನ್​, ಇದರ ರೂವಾರಿ ಅಬ್ದುಲ್ ಮಥೀನ್ ತಾಹಾ ಬಂಧನ ವಿಷಯ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಟಿಎಂಸಿಯು ಪಶ್ಚಿಮ ಬಂಗಾಳವನ್ನು ಭಯೋತ್ಪಾದಕರ ಸುರಕ್ಷಿತ ತಾಣವನ್ನಾಗಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದರೆ, ನಮ್ಮ ರಾಜ್ಯ ಪೊಲೀಸರ ತ್ವರಿತ ಕ್ರಮದಿಂದಾಗಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಾರ್ಚ್​ 20ರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ತಾಹಾ, ಮುಸ್ಸಾವಿರ್ ಹುಸೇನ್ ಶಾಜೆಬ್​ನನ್ನು 43 ದಿನಗಳ ಬಳಿಕ ರಾಷ್ಟ್ರೀಯ ತನಿಖಾ ದಳ (ಎಎನ್​ಐ) ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೋಲ್ಕತ್ತಾದ ಸಮೀಪದ ಗುರುತು ಬದಲಿಸಿಕೊಂಡು ಅಡಗಿದ್ದ ಈ ಭಯೋತ್ಪಾದಕರನ್ನು ಪತ್ತೆ ಹಚ್ಚಿ ಸೆರೆಹಿಡಿಯಲಾಗಿದೆ. ಕೇಂದ್ರದ ವಿವಿಧ ಸಂಸ್ಥೆಗಳು, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎನ್​ಐಎ ಹೇಳಿದೆ.

ಉಗ್ರರ ಬಂಧನವಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವೀಯ, ''ರಾಮೇಶ್ವರಂ ಕೆಫೆ ಸ್ಫೋಟದ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹಚರ ಅಬ್ದುಲ್ ಮಥೀನ್ ಅಹ್ಮದ್ ತಾಹಾನನ್ನು ಕೋಲ್ಕತ್ತಾದಲ್ಲಿ ಎನ್‌ಐಎ ವಶಕ್ಕೆ ಪಡೆದಿದೆ. ಇಬ್ಬರೂ ಕರ್ನಾಟಕದ ಶಿವಮೊಗ್ಗದಲ್ಲಿರುವ ಐಸಿಸ್ ಘಟಕಕ್ಕೆ ಸೇರಿರುವ ಸಾಧ್ಯತೆ ಇದೆ. ದುರದೃಷ್ಟವಶಾತ್ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಪಶ್ಚಿಮ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ'' ಎಂದು ಆರೋಪಿಸಿದ್ದಾರೆ. ಬಿಜೆಪಿಯ ಈ ಆರೋಪದ ಬಗ್ಗೆ ಟಿಎಂಸಿ ತಕ್ಷಣವೇ ತಿರುಗೇಟು ನೀಡಿದೆ.

ಕೂಚ್ ಬಿಹಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ''ಬಿಜೆಪಿಯು ರಾಜ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಬಂಗಾಳ ಸುರಕ್ಷಿತವಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಆದರೆ, ಪೊಲೀಸರು ತಕ್ಷಣದ ಸ್ಪಂದನೆ ಮೇರೆಗೆ ಆರೋಪಿಗಳನ್ನು ಎರಡೇ ಗಂಟೆಗಳಲ್ಲಿ ಬಂಧಿಸಲಾಗಿದೆ. ನೀವು (ಬಿಜೆಪಿ) ಅಧಿಕಾರದಲ್ಲಿರುವ ರಾಜ್ಯಗಳ ಪರಿಸ್ಥಿತಿಯೇನು?, ಉತ್ತರ ಪ್ರದೇಶ ಮತ್ತು ಗುಜರಾತ್ ಸುರಕ್ಷಿತವೇ'' ಎಂದು ಪ್ರಶ್ನಿಸಿದ್ದಾರೆ. ಟಿಎಂಸಿ ನಾಯಕ ಕುನಾಲ್ ಘೋಷ್ ಕೂಡ ಮಾಳವೀಯ ವಿರುದ್ಧ ವಾಗ್ದಾಳಿ ನಡೆಸಿ, ಪಶ್ಚಿಮ ಬಂಗಾಳ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಪಶ್ಚಿಮ ಬಂಗಾಳ ಪೊಲೀಸ್​ ಇಲಾಖೆ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ. ''ಅಸತ್ಯವು ಅತ್ಯಂತ ಕೆಟ್ಟದ್ದು!. ಅಮಿತ್ ಮಾಳವೀಯ ಮಾಡಿದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಮತ್ತು ವಾಸ್ತವವೆಂದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರನ್ನು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪುರ್ಬಾ ಮೇದಿನಿಪುರದಲ್ಲಿ ಬಂಧಿಸಲಾಗಿದೆ. ಈ ವಿಷಯದಲ್ಲಿ ಪಶ್ಚಿಮ ಬಂಗಾಳ ಪೊಲೀಸರ ಪೂರ್ವಭಾವಿ ಪಾತ್ರವನ್ನು ಕೇಂದ್ರೀಯ ಏಜೆನ್ಸಿಗಳು ಅಧಿಕೃತವಾಗಿ ಒಪ್ಪಿಕೊಂಡಿವೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿರಲಿಲ್ಲ. ರಾಜ್ಯ ಪೊಲೀಸರು ಜನರನ್ನು ದುಷ್ಟ ಚಟುವಟಿಕೆಗಳಿಂದ ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆಯನ್ನು ಮುಂದುವರಿಸುತ್ತಾರೆ'' ಎಂದು ರಾಜ್ಯ ಪೊಲೀಸ್​ ಇಲಾಖೆಯ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: ಕೋಲ್ಕತ್ತಾದ ಲಾಡ್ಜ್‌ನಲ್ಲಿ ಗುರುತು ಬದಲಿಸಿಕೊಂಡು ಅಡಗಿದ್ದ ಉಗ್ರರು - Cafe Blast Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.