ETV Bharat / bharat

ಮೇಡಾರಂ ಸಮ್ಮಕ್ಕ ಸರಳಮ್ಮ ಜಾತ್ರೆ: ಗಿರಿಜನರ ಬೃಹತ್ ಜಾತ್ರೆಗೆ ಸಕಲ ಸಿದ್ಧತೆ - ವಿಶೇಷತೆ ಏನು ಗೊತ್ತಾ?

author img

By ETV Bharat Karnataka Team

Published : Feb 20, 2024, 10:40 AM IST

medaram-sammakka-saralamma-jathara
ಮೇಡಾರಂ ಸಮ್ಮಕ್ಕ ಸರಳಮ್ಮ ಜಾತ್ರೆ: ಗಿರಿಜನರ ಬೃಹತ್ ಜಾತ್ರೆಗೆ ಸಕಲ ಸಿದ್ಧತೆ- ವಿಶೇಷತೆ ಏನು ಗೊತ್ತಾ?

ನಾಳೆಯಿಂದ ನಾಲ್ಕು ದಿನಗಳ ಕಾಲ ಸಮ್ಮಕ್ಕ -ಸರಳಮ್ಮ ಜಾತ್ರೆ ನಡೆಯಲಿದೆ. ಸುಮಾರು 2 ಕೋಟಿ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಮೆಡಾರಂ(ತೆಲಂಗಾಣ): ಮೇಡಾರಂ ಮಹಾ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಡೊಳ್ಳು ಬಾರಿಸುವ ಸಡಗರದ ನಡುವೆ ಪಗಿದ್ದರಾಜು (ಸಮ್ಮಕ್ಕನ ಪತಿ) ಮೇಡಾರಂ ತಲುಪಲಿದ್ದಾರೆ. ಜಾತ್ರೆ ನಿಮಿತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಹಾ ಜಾತ್ರೆಗೆ ತೆಲಂಗಾಣ ಸಾರಿಗೆ ನಿಗಮ ವಿಶೇಷ ಬಸ್​ಗಳನ್ನ ಬಿಟ್ಟಿದೆ. ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯಗಳನ್ನು ಬಿಂಬಿಸುವ ತೆಲಂಗಾಣ ಕುಂಭ ಮೇಳ ಮೇಡಾರಂ ಮಹಾ ಜಾತ್ರೆ ಬುಧವಾರದಿಂದ ಆರಂಭವಾಗುತ್ತಿದೆ. ಎರಡು ವರ್ಷಕ್ಕೊಮ್ಮೆ ಮಾಘ ಮಾಸದ ಹುಣ್ಣಿಮೆಯಂದು ಈ ಜಾತ್ರೆ ನಡೆಯುವುದು ಸಂಪ್ರದಾಯ. ಕಳೆದ ಬುಧವಾರ ಮಂದಮೇಳಿಗೆ ಉತ್ಸವದೊಂದಿಗೆ ಜಾತ್ರೆ ಉದ್ಘಾಟನೆಗೊಂಡಿದೆ. ಕಾಡು ತೊರೆದು ಬರುವ ವನದೇವತೆಗಳ ಆಗಮನದೊಂದಿಗೆ ನಿಜವಾದ ಮಹಾ ಜಾತ್ರೆ ಆರಂಭವಾಗುತ್ತದೆ.

ಲಕ್ಷಾಂತರ ಜನರ ಮಧ್ಯೆ ಸಮ್ಮಕ್ಕ ಸರಳಮ್ಮ, ಪಗಿದ್ದರಾಜು ಗೋವಿಂದರಾಜರ ಆಗಮನವಾಗಲಿದೆ. ಬುಧವಾರದಿಂದ ಆರಂಭವಾಗುವ ಜಾತ್ರೆಗೆ ಮೆಹಬೂಬಾಬಾದ್ ಜಿಲ್ಲೆಯ ಗಂಗಾರಾಂ ಮಂಡಲದ ಪೂನುಗೊಂಡಾಲದ ಪಗಿದ್ದರಾಜು ಅವರು ಇಂದು ಡೊಳ್ಳು ಬಾರಿಸುವವರೊಂದಿಗೆ ಶಿವಸಟ್ಟುಲು(ಭಕ್ತರ) ಕುಣಿತದ ನಡುವೆ ಮೇಡಾರಂಗೆ ತೆರಳಲಿದ್ದಾರೆ. ದೇವಸ್ಥಾನದಿಂದ ಆರಂಭವಾದ ಸ್ವಾಮಿಯ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗಿತು. ಕಾಡಿನ ಹಾದಿಯಲ್ಲಿ 70 ಕಿಲೋಮೀಟರ್ ನಡೆದು ನಾಳೆ ಸಂಜೆ ಮೆಡಾರಂಗೆ ತಲುಪಲಿದ್ದಾರೆ. ಆ ವೇಳೆಗೆ ಕನ್ನೆಪಲ್ಲಿಯಿಂದ ಸರಳಮ್ಮ ಹಾಗೂ ಏತೂರು ನಗರಂ ಮಂಡಲದ ಕೊಂಡಾಯಿಯಿಂದ ಗೋವಿಂದರಾಜ್ ಸಿಂಹಾಸನ ಏರಲಿದ್ದಾರೆ.

50 ಲಕ್ಷ ಭಕ್ತರಿಂದ ಈಗಾಗಲೇ ದರ್ಶನ: ಜಾತ್ರೆಯ ಎರಡನೇ ದಿನವಾದ ಗುರುವಾರ ಸಮ್ಮಕ್ಕನ ಆಗಮನವಾಗಿದೆ. ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಸಮ್ಮಕ್ಕ ಗದ್ದುಗೆಯಿಂದ ಕೆಳಗಿಳಿಯಲಿದ್ದಾರೆ. ಜಾತ್ರೆಯ ಮೂರನೇ ದಿನದಂದು ಎಲ್ಲಾ ದೇವತೆಗಳು ಗದ್ದುಗೆ ಏರುತ್ತಾರೆ. ಈ ವೇಳೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ಶನಿವಾರ ರಾತ್ರಿ ದೇವರ ದರ್ಶನದೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಖರ್ಚು-ವೆಚ್ಚದ ಲೆಕ್ಕವಿಲ್ಲದೇ ದೂರದ ಊರಿನಿಂದ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಮೆಡಾರಂಗೆ ಬರುತ್ತಿದ್ದಾರೆ. ಜಂಪಣ್ಣವಾಗಲಿನಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ. ಇಷ್ಟಾರ್ಥಗಳನ್ನು ಈಡೇರಿಸುವ ದೇವಿಯರ ದರ್ಶನ ಪಡೆದು ಭಕ್ತರು ಪುಳಕಿತರಾಗುತ್ತಿದ್ದಾರೆ.

ಜಾತ್ರೆಗೆ 1-2 ಕೋಟಿ ಭಕ್ತರ ಆಗಮನ: ಆ ನಾಲ್ಕು ದಿನಗಳಲ್ಲಿ ಒಂದೂವರೆಯಿಂದ ಎರಡು ಕೋಟಿಗೂ ಅಧಿಕ ಭಕ್ತರು ಜಾತ್ರೆಗೆ ಭೇಟಿ ನೀಡಲಿದ್ದಾರೆ. ಜಾತ್ರೆಗೆ ಸರ್ಕಾರ 110 ಕೋಟಿ ವೆಚ್ಚದಲ್ಲಿ ಸಕಲ ವ್ಯವಸ್ಥೆ ಮಾಡಿದೆ. ಡಿಜಿಪಿ ರವಿಗುಪ್ತ, ಗುಪ್ತಚರ ಹೆಚ್ಚುವರಿ ಡಿಜಿ ಶಿವಧರ್ ರೆಡ್ಡಿ ಅವರೊಂದಿಗೆ ಮೇಡಾರಂಗೆ ಭೇಟಿ ಎಲ್ಲ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಉತ್ಸವಕ್ಕೆ ಎಲ್ಲ ಭದ್ರತೆ ಒದಗಿಸುವಂತೆ ಹಾಗೂ ಲೋಪ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಆದೇಶ ಕೂಡಾ ನೀಡಿದ್ದಾರೆ.

ಇದನ್ನು ಓದಿ: ಉದ್ಘಾಟನೆಗೆ ಸಜ್ಜಾದ ವಿಶ್ವದ ಮೊದಲ ವೈದಿಕ ಗಡಿಯಾರ; ಇದರ ವೈಶಿಷ್ಟ್ಯತೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.