ETV Bharat / bharat

ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಯೋಧ ದೆಹಲಿಯಲ್ಲಿ ಸೆರೆ

author img

By PTI

Published : Feb 6, 2024, 3:49 PM IST

key-conspirator-of-kupwara-terror-module-arrested-in-new-delhi
ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಯೋಧ ದೆಹಲಿಯಲ್ಲಿ ಸೆರೆ

ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪಾಕಿಸ್ತಾನದ ಎಲ್​ಇಟಿ ಉಗ್ರ ಸಂಘಟನೆಯ ನಂಟು ಹೊಂದಿದ್ದ ಮಾಜಿ ಯೋಧ ರಿಯಾಜ್​ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರಿಯಾಜ್​ ಅಹ್ಮದ್​ ಬಂಧಿತನಾಗಿದ್ದು, ಈತ ಮಾಜಿ ಯೋಧ. 2023ರ ಜನವರಿಯಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಜನವರಿ 27ರಂದು ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದನಾ ಘಟಕವೊಂದನ್ನು ಭೇದಿಸಲಾಗಿತ್ತು. ಈ ವೇಳೆ, ಐವರನ್ನು ಬಂಧಿಸಿ, ತಲಾ ಐದು ಎಕೆ ರೈಫೆಲ್ಸ್​ಗಳು, ಮ್ಯಾಗಜೀನ್​ಗಳು, 15 ಗುಂಡುಗಳು ವಿವಿಧ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವುಗಳನ್ನು ಪಾಕಿಸ್ತಾನದ ಎಲ್​ಇಟಿ ಉಗ್ರ ಸಂಘಟನೆಯು ರವಾನಿಸಿತ್ತು. ಈ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಮಂಜೂರ್​​ ಅಹ್ಮದ್​ ಶೇಖ್, ಶಂಕೂರ್​ ಅಲಿಯಾಸ್​ ಖಾಜಿ ಮೊಹಮ್ಮದ್​ ಖುಶಾಲ್ ಎಂಬವರು ಗಡಿಯುದ್ದಕ್ಕೂ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬ ಮಾಹಿತಿ ಬಯಲಾಗಿತ್ತು.

ಇದೇ ಸಂದರ್ಭದಲ್ಲಿ ಈ ಭಯೋತ್ಪಾದನಾ ಘಟಕದ ಪ್ರಮುಖ ಸಂಚುಕೋರ ಎನ್ನಲಾದ ರಿಯಾಜ್​ ಅಹ್ಮದ್​ ತಲೆಮರೆಸಿಕೊಂಡಿದ್ದ. ಈ ಬಗ್ಗೆ ತನಿಖೆ ಮುಂದುವರೆಸಿದ್ದ ಅಧಿಕಾರಿಗಳಿಗೆ ಈತ ದೆಹಲಿಗೆ ಪಲಾಯನಗೊಂಡಿದ್ದ ವಿಷಯ ಲಭ್ಯವಾಗಿತ್ತು. ಅಂತೆಯೇ, ಜಮ್ಮು ಮತ್ತು ಕಾಶ್ಮೀರದ ತನಿಖಾಧಿಕಾರಿಗಳು ದೆಹಲಿಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ, ಫೆಬ್ರವರಿ 4ರಂದು ದೆಹಲಿ ರೈಲ್ವೆ ನಿಲ್ದಾಣಕ್ಕೆ ರಿಯಾಜ್​ ಅಹ್ಮದ್ ತಲುಪಿದ್ದ ಮಾಹಿತಿ ಲಭ್ಯವಾಗಿತ್ತು. ಅದರಂತೆ, ಇನ್ಸ್​ಪೆಕ್ಟರ್​​ ವಿಶ್ವನಾಥ್ ಪಾಸ್ವಾನ್​, ಸಬ್​ ಇನ್ಸ್​ಪೆಕ್ಟರ್​ ನಸೀಬ್​ ಸಿಂಗ್​ ನೇತೃತ್ವದ ಪೊಲೀಸ್​ ಸಿಬ್ಬಂದಿ ತಕ್ಷಣವೇ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಬೆಳಗಿನ ಜಾವ ಉಗ್ರ ರಿಯಾಜ್​ ಅಹ್ಮದ್​​ನನ್ನು ಬಂಧಿಸಿದ್ದಾರೆ.

ಈ ಕುರಿತು ರೈಲ್ವೆ ಪೊಲೀಸ್ ಉಪ ಆಯುಕ್ತ ಕೆ.ಸಿ.ಎಸ್​.ಮಲ್ಹೋತ್ರಾ ಪ್ರತಿಕ್ರಿಯಿಸಿ, ''ಆರೋಪಿ ರಿಯಾಜ್​ ಅಹ್ಮದ್​​ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರ ತಂಡ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿತ್ತು. ಜನ ಗುಂಪಿನ ಮಧ್ಯೆ ಗೇಟ್​ ನಂಬರ್​ 1ರ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ. ನಂತರದ ವಿಚಾರಣೆಯಲ್ಲಿ ರಿಯಾಜ್​ ತನ್ನ ಸ್ನೇಹಿತ ಅಲ್ತಾಫ್​ ಎಂಬಾತನೊಂದಿಗೆ ಮಧ್ಯಪ್ರದೇಶದ ಜಬಲ್ಪುರ್​ನಿಂದ ಮಹಾಕೌಶಲ್​ ಎಕ್ಸ್​ಪ್ರೆಸ್​ ರೈಲಿನ ಮೂಲಕ ಹಜರತ್​​ ನಿಜಾಮುದ್ದೀನ್​ ರೈಲ್ವೆ ನಿಲ್ದಾಣಕ್ಕೆ ಜನವರಿ 3ರಂದು ಮಧ್ಯಾಹ್ನ 3 ಗಂಟೆಗೆ ತಲುಪಿದ್ದ. ಅಲ್ಲಿಂದ ಆಟೋದಲ್ಲಿ ದೆಹಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ. ನಂತರ ಮತ್ತೊಂದೆಡೆ ಹೋಗಿ ತಲೆಮರೆಸಿಕೊಳ್ಳಲು ಮುಂದಾಗಿದ್ದ ಎಂಬುದಾಗಿ ತಿಳಿದು ಬಂದಿದೆ'' ಎಂದು ವಿವರಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ''ಬಂಧಿತ ರಿಯಾಜ್ ಅಹ್ಮದ್​ ಮತ್ತು​ ಈತನ ಸ್ನೇಹಿತ ಅಲ್ತಾಫ್ ಇಬ್ಬರೂ ಭಾರತೀಯ ಸೇನೆಯ ಮಾಜಿ ಸಿಬ್ಬಂದಿಯಾಗಿದ್ದು, 2023ರ ಜನವರಿ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು. ಸದ್ಯಕ್ಕೆ ಬಂಧಿತನ ಮೊಬೈಲ್​, ಸಿಮ್​ ಕಾರ್ಡ್​​ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ತನಿಖಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ'' ಎಂದರು.

ಇದನ್ನೂ ಓದಿ: ಕಳ್ಳನನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟ ಗೂಗಲ್​ ಮ್ಯಾಪ್​; ಹೇಗಿತ್ತು ಗೊತ್ತಾ ಆ ಕಾರ್ಯಾಚರಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.