ETV Bharat / bharat

ದೇಶದ ಬಡತನ ಶೇಕಡಾ 5ಕ್ಕಿಂತ ಕಡಿಮೆ, ಅಭಿವೃದ್ಧಿಯತ್ತ ಹಳ್ಳಿಗಳು: ಸಮೀಕ್ಷೆ

author img

By ETV Bharat Karnataka Team

Published : Feb 26, 2024, 9:12 AM IST

ನ್ಯಾಷನಲ್​ ಸ್ಯಾಂಪಲ್​ ಸರ್ವೇ ಆಫೀಸ್​ ಗೃಹಬಳಕೆದಾರರ ವೆಚ್ಚ ಸಮೀಕ್ಷೆಯ ನಡೆಸಿದ್ದು, ಉತ್ತಮ ಅಂಶಗಳನ್ನು ಅದು ಹೊರ ತಂದಿದೆ.

ದೇಶದ ಬಡತನ
ದೇಶದ ಬಡತನ

ನವದೆಹಲಿ: ದೇಶದಲ್ಲಿ ಬಡತನ ಪ್ರಮಾಣ ಶೇಕಡಾ 5 ಕ್ಕಿಂತ ಕೆಳಗೆ ಇಳಿದಿದೆ. ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಜನರು ಕೂಡ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಆರ್ಥಿಕ ಅಸಮಾನತೆ ಇಳಿಮುಖವಾಗುತ್ತಿದೆ ಎಂಬ ಸಂತಸದ ವರದಿಯೊಂದು ಹೊರಬಿದ್ದಿದೆ.

ನ್ಯಾಷನಲ್​ ಸ್ಯಾಂಪಲ್​ ಸರ್ವೇ ಆಫೀಸ್​ (ಎನ್​ಎಸ್​ಎಸ್​ಒ) ಶನಿವಾರ ತಡರಾತ್ರಿ ಬಿಡುಗಡೆ ಮಾಡಿರುವ ಗೃಹಬಳಕೆದಾರರ ವೆಚ್ಚ ಸಮೀಕ್ಷೆಯಲ್ಲಿ ಈ ಅಂಶಗಳು ಇವೆ. ದೇಶ ನಿಧಾನವಾಗಿ ಬಡತನ ರೇಖೆಯಿಂದ ಹೊರಬರುತ್ತಿದೆ. ಜನರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ಈ ವರದಿ ಉಲ್ಲೇಖಿಸಿದೆ.

ಈ ಬಗ್ಗೆ ವಿಶ್ಲೇಷಿಸಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು, 2011-12ಕ್ಕೆ ಹೋಲಿಸಿದರೆ ತಲಾ ಗೃಹಬಳಕೆಯ ಮಾಸಿಕ ವೆಚ್ಚ 2022-23ರಲ್ಲಿ ದ್ವಿಗುಣಗೊಂಡಿದೆ. ಸರ್ಕಾರ ಕೈಗೊಂಡಿರುವ ಬಡತನ ನಿರ್ಮೂಲನೆ ಕ್ರಮಗಳು ಯಶಸ್ಸು ಪಡೆಯುತ್ತಿವೆ ಎಂಬುದು ಕೂಡ ಇಲ್ಲಿ ವಿಧಿತವಾಗುತ್ತಿದೆ. ದೇಶದ ಬಡತನ ಪ್ರಮಾಣವು ಶೇಕಡಾ 5ಕ್ಕಿಂತ ಕಡಿಮೆಗೆ ಕುಸಿದಿದೆ ಎಂದರು.

ಅಭಿವೃದ್ಧಿ ಪಥದಲ್ಲಿ ಹಳ್ಳಿಗಳು: ನಗರ ಪ್ರದೇಶಗಳ ಜೊತೆಗೆ ಹಳ್ಳಿಗಾಡಿನ ಜನರೂ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಸಮಾಜದಲ್ಲಿನ ಜನರನ್ನು 20 ವಿವಿಧ ವರ್ಗಗಳನ್ನಾಗಿ ವಿಂಗಡಿಸಿ ಸಮೀಕ್ಷೆ ನಡೆಸಲಾಗಿದೆ. ವರದಿ ಪ್ರಕಾರ, ಎಲ್ಲ ವರ್ಗಗಳ ಸರಾಸರಿ ತಲಾದಾಯ ಗ್ರಾಮೀಣ ಪ್ರದೇಶದಲ್ಲಿ 3,773 ರೂಪಾಯಿ ಇದ್ದರೆ, ನಗರ ಪ್ರದೇಶಗಳಲ್ಲಿ 6,459 ರೂಪಾಯಿ ಇದೆ ಎಂದು ನಮೂದಿಸಿದೆ. ನಗರಗಳಲ್ಲಿ ಹೆಚ್ಚಿನ ದರ ನಿಗದಿ ಮಾಡಿದ್ದರೂ, ಗ್ರಾಮೀಣರು ಹಿಂದೆ ಉಳಿದಿಲ್ಲ ಎಂಬುದನ್ನು ಸಮೀಕ್ಷೆ ಗುರುತಿಸುತ್ತದೆ ಎಂದು ವಿಶ್ಲೇಷಿಸಿದರು.

ಅತಿ ಕಡಿಮೆ ತಲಾದಾಯ ಗುರುತಿಸಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಅದು ರೂಪಾಯಿ 1,373 ಮತ್ತು ನಗರ ಪ್ರದೇಶಗಳಲ್ಲಿ 2,001 ರೂಪಾಯಿ ಇದೆ ಎಂದು ನಿಗದಿಪಡಿಸಲಾಗಿದೆ. ಬಡತನದ ಪ್ರಮಾಣವನ್ನು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಇಂದಿನ ದರಕ್ಕೆ ಹೋಲಿಸಿದರೆ, ಶೇಕಡಾ 0-5 ಸರಾಸರಿಯಷ್ಟು ಕಾಣುತ್ತೇವೆ. ಇದರರ್ಥ, ದೇಶದಲ್ಲಿ ಬಡತನ 0 ದಿಂದ 5 ಪ್ರತಿಶತದ ಒಳಗೆ ಇದೆ ಎಂಬುದು ತಿಳಿಯುತ್ತದೆ ಎಂದು ನೀತಿ ಆಯೋಗದ ಸಿಇಒ ತಿಳಿಸಿದರು.

1.55 ಲಕ್ಷ ಗ್ರಾಮೀಣ ಕುಟುಂಬಗಳು ಮತ್ತು 1.07 ಲಕ್ಷ ನಗರ ಕುಟುಂಬಗಳಿಂದ ನೀಡಿದ ಮಾಹಿತಿಯನ್ನು ಆಧರಿಸಿ ಎನ್​ಎಸ್​ಎಸ್​ಒ ಈ ವರದಿಯನ್ನು ತಯಾರಿಸಿದೆ. ಇನ್ನು, ಯಾವುದೇ ವಸ್ತುಗಳ ಬಳಕೆಯ ವಿಚಾರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 2.5 ಪಟ್ಟು ಹೆಚ್ಚಾಗಿದೆ. ಅದರಲ್ಲೂ ನಗರಕ್ಕಿಂತ ಹಳ್ಳಿಗಳಲ್ಲೇ ಅತಿ ಹೆಚ್ಚಿನ ಬಳಕೆ ದರ ಇದೆ. ನಗರ - ಗ್ರಾಮೀಣ ಅಸಮಾನತೆಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಸುಬ್ರಹ್ಮಣ್ಯಂ ಹೇಳಿದರು.

ಇದನ್ನೂ ಓದಿ: ಒಂದು ಕುಟುಂಬದ ಉದ್ಧಾರಕ್ಕಾಗಿ ದುಡಿದ ಕಾಂಗ್ರೆಸ್​: ಪ್ರಧಾನಿ ಮೋದಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.