ETV Bharat / bharat

ಟೂರಿಸ್ಟ್​ಗಳ ಸೋಗಿನಲ್ಲಿ ಸುತ್ತಾಟ; ಸಿಮ್​ ಇಲ್ಲದೇ ಮೊಬೈಲ್​ ರಿಪೇರಿಗೆ ಹೋಗಿದ್ದ ಉಗ್ರರು: ಸುಳಿವು ನೀಡಿದ ಆ ಒಂದು​ ಕಾಲ್​!? - Rameshwaram Cafe Blast

author img

By ETV Bharat Karnataka Team

Published : Apr 13, 2024, 8:13 PM IST

Rameswaram cafe blast
ಕೆಫೆ ಸ್ಫೋಟ ಪ್ರಕರಣ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಾಂಬರ್​ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ರೂವಾರಿ ಅಬ್ದುಲ್ ಮಥೀನ್ ತಾಹಾ ಕಳೆದ 28 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಸುತ್ತಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಂಧಿತ ಇಬ್ಬರು ಉಗ್ರರ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಕಳೆದ 28 ದಿನಗಳಿಂದಲೂ ಪಶ್ಚಿಮ ಬಂಗಾಳದಲ್ಲೇ ಸುತ್ತಾಡಿದ್ದರು. ಈ ವೇಳೆ ಕೋಲ್ಕತ್ತಾದ ನಗರ ವ್ಯಾಪ್ತಿಯಲ್ಲಿರುವ ಮೂರು ಹೋಟೆಲ್​ಗಳು, ಮೊಬೈಲ್ ರಿಪೇರಿ ಅಂಗಡಿಗೂ ಭೇಟಿ ನೀಡಿದ್ದು ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೋಟೆಲ್​ವೊಂದರಲ್ಲಿ ಉಗ್ರರು ರಿಜಿಸ್ಟರ್‌ನಲ್ಲಿ ಹೆಸರು ಬರೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಮಾರ್ಚ್​ 20ರಂದು ಕೆಫೆಯಲ್ಲಿ ಬಾಂಬ್​ ಸ್ಫೋಟಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಹಿಸಿಕೊಂಡಿದೆ. 43 ದಿನಗಳ ನಂತರ ಕೆಫೆಯಲ್ಲಿ ಐಇಡಿ ಇರಿಸಿದ್ದ ಬಾಂಬರ್​ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಈ ಪಿತೂರಿಯ ಹಿಂದಿನ ರೂವಾರಿ ಮತ್ತು ಸ್ಫೋಟವನ್ನು ಯೋಜಿಸಿದ್ದ ಅಬ್ದುಲ್ ಮಥೀನ್ ತಾಹಾನನ್ನು ಶುಕ್ರವಾರ ಕೋಲ್ಕತ್ತಾದಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ.

ವಿವಿಧ ಹೋಟೆಲ್​, ಮೊಬೈಲ್ ಅಂಗಡಿಗೆ ಭೇಟಿ: ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಈ ಇಬ್ಬರು ಉಗ್ರರು ಕಳೆದ 28 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಸುತ್ತಾಡುತ್ತಿದ್ದರು. ಈ ಅವಧಿಯಲ್ಲಿ ಕೋಲ್ಕತ್ತಾದ ವಿವಿಧ ಹೋಟೆಲ್‌ಗಳಲ್ಲಿ ತಂಗಿದ್ದರು. ಇದರ ನಡುವೆ ನಗರದ ಚಾಂದಿನಿ ಚೌಕ್‌ನ ಹೃದಯಭಾಗದಲ್ಲಿರುವ ಮೊಬೈಲ್ ರಿಪೇರಿ ಅಂಗಡಿಗೆ ಓರ್ವ ಉಗ್ರ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ.

ಸಿಮ್​ ಇಲ್ಲದೇ ಮೊಬೈಲ್​ ರಿಪೇರಿಗೆ: ಇಬ್ಬರ ಪೈಕಿ ಓರ್ವ ಮಾತ್ರ ಮೊಬೈಲ್ ರಿಪೇರಿ ಅಂಗಡಿಗೆ ಫೋನ್ ತೆಗೆದುಕೊಂಡು ಹೋಗಿದ್ದ. ಆದರೆ, ಈ ವೇಳೆ, ಫೋನ್‌ನಲ್ಲಿ ಸಿಮ್​ ಕಾರ್ಡ್ ಇರಲಿಲ್ಲ. ಫೋನ್ ಸರಿಪಡಿಸುವಾಗ ಫೋನ್ ರಿಪೇರಿ ಮಾಡಿದ ಅಂಗಡಿಯವರು ತಮ್ಮ ಸಿಮ್​ಅನ್ನು ಫೋನ್‌ನಲ್ಲಿ ಬಳಸಿದ್ದಾರೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಉಗ್ರರ ಸುಳಿವು ನೀಡಿದ ಒಂದು ಕಾಲ್​?: ಮೊಬೈಲ್ ಅಂಗಡಿಯಲ್ಲಿ ಫೋನ್​ ಸರಿಪಡಿಸಲಾಗಿದೆಯೇ ಎಂದು ಆ ಉಗ್ರ ಅಲ್ಲಿಯೇ ಪರಿಶೀಲಿಸಿದ್ದಾನೆ. ಇದಕ್ಕಾಗಿ ಆ ಫೋನ್‌ನಿಂದಲೇ ಒಬ್ಬ ವ್ಯಕ್ತಿಗೂ ಕರೆ ಮಾಡಲಾಗಿತ್ತು. ಈ ಒಂದು ಫೋನ್​ ಕಾಲ್​ ಆಧಾರದ ಮೇಲೆ ಎನ್​ಐಎ ಅಧಿಕಾರಿಗಳು ಅಂಗಡಿಯನ್ನು ಪತ್ತೆಹಚ್ಚಿದ್ದರು. ಅಲ್ಲದೇ, ಅಂಗಡಿಯವರ ಹೇಳಿಕೆಯನ್ನು ತನಿಖಾ ಅಧಿಕಾರಿಗಳು ದಾಖಲಿಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ಹೋಟೆಲ್​ನಲ್ಲಿ ಟೂರಿಸ್ಟ್​ಗಳೆಂದು ಬರೆದಿದ್ದರು: ಅಷ್ಟೇ ಅಲ್ಲ, ಮಾರ್ಚ್ 13ರಂದು ಕೋಲ್ಕತ್ತಾದ ಹೋಟೆಲ್‌ವೊಂದಕ್ಕೆ ಇಬ್ಬರು ಉಗ್ರರು ಹೋಗಿದ್ದರು. ಈ ಸಮಯದಲ್ಲಿ ಹೋಟೆಲ್‌ನ ರಿಜಿಸ್ಟರ್‌ನಲ್ಲಿ ತಮ್ಮ ಹೆಸರನ್ನು ಸಹ ಬರೆದಿದ್ದರು. ಆದರೆ, ಎರಡನೇ ಆರೋಪಿಯ ಹೆಸರಲ್ಲಿ ವಿಶೇಷ ಹೆಸರು ಬರೆದು ಅಳಿಸಿ ಹಾಕಿರುವುದು ಕಂಡು ಬಂದಿದೆ. ಉಗ್ರನನ್ನು ಆ ಹೆಸರಿನಿಂದಲೂ ಕರೆಯಲಾಗುತ್ತದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಅದಕ್ಕಾಗಿಯೇ ಅವರು ಆ ಹೆಸರನ್ನು ಬರೆದು ಅದನ್ನು ಹೊಡೆದು ಹಾಕಿದ್ದ. ಆಗ ಆ ಉಗ್ರ ಆಯ್ಕೆ ಮಾಡಿಕೊಂಡ ಹೆಸರು ವಿಘ್ನೇಶ್ ಎಂದು. ಆದರೆ, ಆಗ ನಿಜವಾಗಿ ವಿಘ್ನೇಶ್ ಎಂಬಾತ ಇದ್ದ. ಅದಕ್ಕೆ ಈ ಹೆಸರು ಬರೆದ ಮೇಲೂ ಅಳಿಸಿದ್ದ. ಹೋಟೆಲ್​ ರಿಜಿಸ್ಟರ್‌ನಲ್ಲಿ ಈ ಇಬ್ಬರು ತಮ್ಮನ್ನು ಪ್ರವಾಸಿಗರು ಎಂದು ನೊಂದಾಯಿಸಿಕೊಂಡಿದ್ದರು. ಡಾರ್ಜಿಲಿಂಗ್‌ನಿಂದ ಬರುತ್ತಿರುವುದಾಗಿ ಹೋಟೆಲ್​ನವರಿಗೆ ತಿಳಿಸಿ, ಇಲ್ಲಿಂದ ಚೆನ್ನೈಗೆ ಹೋಗುತ್ತಿರುವುದಾಗಿ ಹೇಳಿದ್ದರು. ಆದರೆ, ಒಂದು ದಿನ ಇಬ್ಬರೂ ಯಾವ ಸುಳಿವೂ ಇಲ್ಲದೆ, ಈ ಹೋಟೆಲ್‌ನಿಂದ ಹೊರಟು ಹೋಗಿದ್ದರು. ಜೊತೆಗೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ತಂಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಾಂಬ್ ಸ್ಫೋಟ ಪ್ರಕರಣ: ಬಂಧಿತರನ್ನ 10 ದಿನಗಳ ಕಾಲ ಎನ್​​ಐಎ ವಶಕ್ಕೆ ನೀಡಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.