ETV Bharat / bharat

ಮೈತ್ರಿ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ: ಅಣ್ಣಾಮಲೈ v/s ಪಳನಿಸ್ವಾಮಿ, ತಮಿಳುನಾಡಿನಲ್ಲಿ ಯಾರಾಗಲಿದ್ದಾರೆ 'ಕಿಂಗ್​'

author img

By ETV Bharat Karnataka Team

Published : Mar 19, 2024, 7:58 PM IST

2024 ರ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟ (ಕಾಂಗ್ರೆಸ್​, ಡಿಎಂಕೆ ಇತರ ಪಕ್ಷಗಳು), ಬಿಜೆಪಿ ಮತ್ತು ಎಐಎಡಿಎಂಕೆ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಅಣ್ಣಾಮಲೈ- ಪಳನಿಸ್ವಾಮಿ
ಅಣ್ಣಾಮಲೈ- ಪಳನಿಸ್ವಾಮಿ

ಚೆನ್ನೈ (ತಮಿಳುನಾಡು): ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡು ಬಿಜೆಪಿಗೆ ಈವರೆಗೂ ಎಟುಕದ ನಕ್ಷತ್ರವಾಗಿದೆ. 2019 ರ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಕೇಸರಿ ಪಕ್ಷಕ್ಕೆ, ಈ ಬಾರಿ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಎಂಬ ಹೊಸ ಪ್ರಖರ ಅಸ್ತ್ರವೊಂದು ದೊರಕಿದೆ. ಎಐಎಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡಿದ್ದು, ಬಿಜೆಪಿ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದೆ.

ಇತ್ತ ಆಡಳಿತಾರೂಢ ಡಿಎಂಕೆ, ಕಾಂಗ್ರೆಸ್​, ಮುಸ್ಲಿಂ ಲೀಗ್​ ಸೇರಿ ಇನ್ನಿತರ ಪಕ್ಷಗಳು ಇಂಡಿಯಾ ಕೂಟದ ಭಾಗವಾಗಿ ಸೀಟು ಹಂಚಿಕೆ ಮಾಡಿಕೊಂಡಿವೆ. ಎನ್​ಡಿಎ ಭಾಗವಾಗಿದ್ದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕಡಿದುಕೊಂಡು ಏಕಾಂಗಿಯಾಗಿವೆ. ಮಾಜಿ ಸಿಎಂ ಜಯಲಲಿತಾ ಬಳಿಕ ಎಐಎಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದಿರುವ ಎಡಪ್ಪಾಡಿ ಪಳನಿಸ್ವಾಮಿ ಬಿಜೆಪಿ ವಿರುದ್ಧ ನೇರವಾಗಿ ಟೀಕಿಸುತ್ತಿದ್ದಾರೆ.

ಅಣ್ಣಾಮಲೈ V/S ಪಳನಿಸ್ವಾಮಿ: ಐಪಿಎಸ್​ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು 2020 ರಲ್ಲಿ ಬಿಜೆಪಿ ಸೇರಿದರು. ಬಳಿಕ ಪಕ್ಷದ ಉಪಾಧ್ಯಕ್ಷರಾಗಿದ್ದರು. 2021 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಅವರೂ ಸೋಲುವ ಮೂಲಕ ಪಕ್ಷ ಕೂಡ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಅವರು ಪಕ್ಷದ ಅಧ್ಯಕ್ಷ ಹುದ್ದೆಗೇರಿದರು. ತದನಂತರ ಅದ್ಭುತವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ಮಾಜಿ ಪೊಲೀಸ್​ ಅಧಿಕಾರಿ ಈ ಬಾರಿ ಕಮಾಲ್​ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ಎಐಎಡಿಎಂಕೆ ಪಕ್ಷ ಪಳನಿಸ್ವಾಮಿ ಮತ್ತು ಪನ್ನೀರ್​ಸೆಲ್ವಂ ನಾಯಕತ್ವದಲ್ಲಿ ಎರಡು ಬಣಗಳಾಗಿ ಇಬ್ಭಾಗವಾಗಿವೆ. ಪಕ್ಷದಿಂದ ಮುನಿಸಿಕೊಂಡಿರುವ ಪನ್ವೀರ್​​ಸೆಲ್ವಂ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸಂಘಟನೆಯ ಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಅಣ್ಣಾಮಲೈ 'ನನ್ನ ಮಣ್ಣು ನನ್ನ ಜನ' (ಎನ್ ಮಣ್​ ಎನ್​ ಮಕ್ಕಳ್​) ಹೆಸರಿನಲ್ಲಿ ರಾಜ್ಯಾದ್ಯಂತ ಯಾತ್ರೆ ನಡೆಸಿದ್ದರು. ಇದು ತಮಿಳು ಜನರ ಗಮನ ಸೆಳೆದಿದೆ.

2 ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ವೇಳೆ ಪ್ರಭಾವಿ ನಾಯಕ ಎಸ್​. ರಾಮದಾಸ್ ಅವರ ಪಟ್ಟಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷವು ಎನ್​ಡಿಎ ಕೂಟ ಸೇರುವುದಾಗಿ ಘೋಷಿಸಿತು. ಇತ್ತ ಡಿಎಂಡಿಕೆ ಕೂಡ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳಿವೆ. ಅತ್ತ, ಎಐಡಿಎಂಕೆ ಪಕ್ಷವು ಏಕಾಂಗಿಯಾಗಿದೆ. ಪುತಿಯಾ ತಮಿಳಗಂ ಕೃಷ್ಣಸ್ವಾಮಿ ಅವರ ಪಕ್ಷವನ್ನು ಬಿಟ್ಟರೆ ಬೇರೆ ಯಾವುದೇ ಪಕ್ಷಗಳು ಎಐಎಡಿಎಂಕೆ ಮೈತ್ರಿಕೂಟದಲ್ಲಿ ಇಲ್ಲ.

ಮೈತ್ರಿಗೆ ಎಐಎಡಿಎಂಕೆ ನಕಾರ: ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ "ಎನ್ ಮಣ್​​ ಎನ್ ಮಕ್ಕಳ್" ಯಾತ್ರೆ ಸೇರಿದಂತೆ ಹಲವು ಚಟುವಟಿಕೆಗಳು ಜನರನ್ನು ತಲುಪಿವೆ ಎಂಬ ಆಶಾಭಾವನೆಯಲ್ಲಿ ಅಣ್ಣಾಮಲೈ ಇದ್ದಾರೆ. ಆರಂಭದಲ್ಲಿ ಎಐಎಡಿಎಂಕೆಯನ್ನು ಕಡೆಗಣಿಸಿದ್ದರೂ, ಕೆಲ ದಿನಗಳ ಹಿಂದೆ ಜಿಕೆ ವಾಸನ್ ಅವರ ಮೂಲಕ ಎಐಎಡಿಎಂಕೆ ಜೊತೆ ಮರು ಮೈತ್ರಿಯ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಮುಂದಿಟ್ಟಿರುವ ಕೆಲವು ಕಠಿಣ ಷರತ್ತುಗಳು ಮೈತ್ರಿಗೆ ಅಡ್ಡಿಯಾಗಿವೆ.

ಅಣ್ಣಾಮಲೈ? ಎಐಎಡಿಎಂಕೆ? ಎಂಬ ಪ್ರಶ್ನೆಗೆ ಬಿಜೆಪಿಯ ದೆಹಲಿ ನಾಯಕತ್ವವು ಅಣ್ಣಾಮಲೈ ಮೊದಲ ಆಯ್ಕೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಭಾವಿಸಿದ್ದಾರೆ. ಪಳನಿಸ್ವಾಮಿ ನಾಯಕತ್ವದಲ್ಲಿ ಎಐಎಡಿಎಂಕೆ ಏಕಾಂಗಿಯಾಗಿ ಸ್ಪರ್ಧಿಸಿ ಸಾಮರ್ಥ್ಯ ಸಾಬೀತು ಮಾಡಲಿದ್ದಾರಾ ಅಥವಾ ಅಣ್ಣಾಮಲೈ ಅವರು ಕಮಾಲ್​ ಮಾಡಲಿದ್ದಾರಾ ಎಂಬುದು ಜೂನ್ 4 ರ ಚುನಾವಣಾ ಫಲಿತಾಂಶದಲ್ಲಿ ಹೊರ ಬೀಳಲಿದೆ.

ಇದನ್ನೂ ಓದಿ: ದೆಹಲಿಗೆ ತೆರಳುವ ಮುನ್ನ ಬಿಎಸ್​ವೈ‌ ನಿವಾಸದಲ್ಲಿ ಮಹತ್ವದ ಸಭೆ: ಡಿವಿಎಸ್​​​ಗೆ ಚಿಕ್ಕಬಳ್ಳಾಪುರದ ಟಿಕೆಟ್​ ಆಫರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.