ETV Bharat / bharat

ವಯನಾಡ್​ ಜೊತೆಗೆ ರಾಯ್​ಬರೇಲಿಯಲ್ಲೂ ರಾಹುಲ್​ ಗಾಂಧಿಗೆ ಸೋಲು 'ಗ್ಯಾರಂಟಿ': ಅಮಿತ್​ ಶಾ - Loka sabha election

author img

By PTI

Published : May 4, 2024, 4:52 PM IST

ಅಮಿತ್​ ಶಾ
ಅಮಿತ್​ ಶಾ (Etv Bharat)

ಗುಜರಾತ್​ನ ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಚುನಾವಣಾ ಪ್ರಚಾರ ನಡೆಸಿದರು.

ಅಹಮದಾಬಾದ್​ (ಗುಜರಾತ್): ಕೇರಳದ ವಯನಾಡು ಮತ್ತು ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ವಯನಾಡಿನಲ್ಲಿ ಸೋಲುವ ಭಯದಲ್ಲಿ ರಾಹುಲ್​ ರಾಯ್​ಬರೇಲಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಗುಜರಾತ್​ನಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ವಾಗ್ದಾಳಿ ನಡೆಸಿ, ರಾಹುಲ್​ ಬಾಬಾ ವಯನಾಡಿನ ಜೊತೆಗೆ ರಾಯ್​ಬರೇಲಿಯಲ್ಲೂ ಭಾರೀ ಅಂತರದಿಂದ ಸೋಲುವುದು ಖಂಡಿತ. ಭಯದಲ್ಲಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋತ ಬಳಿಕ ವಯನಾಡಿಗೆ ವಲಸೆ ಹೋಗಿದ್ದರು. ಈ ಬಾರಿ ವಯನಾಡಿನಲ್ಲಿ ಸೋಲುತ್ತಾರೆ ಎಂಬ ಅರಿವಾದ ಬಳಿಕ ಅಮೇಠಿ ಬದಲು ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಶಾ ಹೇಳಿದರು.

ಸಮಸ್ಯೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಇಲ್ಲ. ನಿಮ್ಮಲ್ಲೇ ಸಮಸ್ಯೆ ಇಟ್ಟುಕೊಂಡು ಕ್ಷೇತ್ರ ಬದಲಾವಣೆ ಮಾಡುತ್ತಿದ್ದರೆ, ಜನರು ನಿಮ್ಮನ್ನು ಹುಡುಕಿ ಮತ್ತೆ ಸೋಲಿಸುತ್ತಾರೆ. ರಾಯ್​ಬರೇಲಿಯಲ್ಲಿ ನಿಮ್ಮ ಸೋಲು ಪಕ್ಕಾ ಎಂದು ಶಾ ಭವಿಷ್ಯ ನುಡಿದರು.

ಪ್ರಧಾನಿ ವಿರುದ್ಧ ಸುಳ್ಳು ಪ್ರಚಾರ: ದಲಿತರು, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸಂವಿಧಾನ ನೀಡಿರುವ ಮೀಸಲಾತಿಯನ್ನು ಮುಸ್ಲಿಮವರಿಗೆ ನೀಡಲು ಕಾಂಗ್ರೆಸ್​ ಹೊಂಚು ಹಾಕಿದೆ. ಕೆಲ ರಾಜ್ಯಗಳಲ್ಲಿ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಅವಧಿಗೆ ಗೆದ್ದು ಅಧಿಕಾರಕ್ಕೆ ಬಂದರೆ, ಮೀಸಲಾತಿಯನ್ನು ರದ್ದು ಮಾಡುತ್ತಾರೆ ಎಂದು ರಾಹುಲ್ ಬಾಬಾ ಅಂಡ್ ಕಂಪನಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಎರಡು ಅವಧಿಯಲ್ಲಿ ಮೀಸಲಾತಿಯನ್ನು ನಮ್ಮ ಸರ್ಕಾರ ಮುಟ್ಟಲಿಲ್ಲ. ಬಿಜೆಪಿ ಅಧಿಕಾರಲ್ಲಿ ಇರುವವರೆಗೆ ಮೀಸಲಾತಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.

ಇದನ್ನೂ ಓದಿ: ಅಮಿತ್​ ಶಾ ನಕಲಿ ವಿಡಿಯೋ ಹಿಂದೆ ದೊಡ್ಡ ಪಿತೂರಿ: ಕ್ರಿಮಿನಲ್​ ಕೇಸ್​ ದಾಖಲಿಸಿದ ದೆಹಲಿ ಪೊಲೀಸರು - Amit Shah fake video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.