ETV Bharat / international

ಇರಾನ್​ನ ದಿವಂಗತ ಅಧ್ಯಕ್ಷ ರೈಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಟೆಹ್ರಾನ್​ಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್ - Raisi funeral

author img

By ETV Bharat Karnataka Team

Published : May 22, 2024, 6:24 PM IST

ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ಉಪರಾಷ್ಟ್ರಪತಿ ಧನಕರ್ ಟೆಹ್ರಾನ್​ಗೆ ಆಗಮಿಸಿದ್ದಾರೆ.

ಟೆಹ್ರಾನ್​ಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್
ಟೆಹ್ರಾನ್​ಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್ (ians)

ಟೆಹ್ರಾನ್ : ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಅಧಿಕೃತ ಸಮಾರಂಭದಲ್ಲಿ ಭಾಗವಹಿಸಲು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಬುಧವಾರ ಮಧ್ಯಾಹ್ನ ಟೆಹ್ರಾನ್​ಗೆ ಆಗಮಿಸಿದರು. ಇದೇ ಅಪಘಾತದಲ್ಲಿ ಮೃತಪಟ್ಟ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಮತ್ತು ಇತರ ಇರಾನ್ ಅಧಿಕಾರಿಗಳಿಗೂ ಈ ಸಮಾರಂಭದಲ್ಲಿ ಸಂತಾಪ ಸೂಚಿಸಲಾಗುವುದು.

ಟೆಹ್ರಾನ್​ಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್ ಅವರನ್ನು ಇರಾನ್ ಅಧಿಕಾರಿಗಳು ಸ್ವಾಗತಿಸಿದರು. ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗವಹಿಸಲು ಹಲವಾರು ರಾಷ್ಟ್ರಗಳ ಮುಖ್ಯಸ್ಥರು, ಸಚಿವರು ಮತ್ತು ವಿಶೇಷ ರಾಯಭಾರಿಗಳು ಟೆಹ್ರಾನ್​ಗೆ ನಿರಂತರವಾಗಿ ಆಗಮಿಸುತ್ತಿದ್ದಾರೆ.

ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವ ಜೈಶಂಕರ್ ಮಂಗಳವಾರದಂದು ನವದೆಹಲಿಯ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ರೈಸಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಭಾರತವು ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು.

"ಭಾರತ-ಇರಾನ್ ಸಂಬಂಧದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಭಾರತದ ಸ್ನೇಹಿತರನ್ನಾಗಿ ರೈಸಿ ಅವರನ್ನು ಸದಾ ಸ್ಮರಿಸಲಾಗುತ್ತದೆ. ಈ ಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ" ಎಂದು ರಾಯಭಾರ ಕಚೇರಿಗೆ ಭೇಟಿ ನೀಡಿದ ನಂತರ ಜೈಶಂಕರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತ್ಯಕ್ರಿಯೆ ಮೆರವಣಿಗೆ ಆರಂಭ: ಭಾನುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್​ನ ದಿವಂಗತ ಅಧ್ಯಕ್ಷ, ವಿದೇಶಾಂಗ ಸಚಿವರು ಮತ್ತು ಇತರರ ಅಂತ್ಯಕ್ರಿಯೆ ಮೆರವಣಿಗೆಯ ನೇತೃತ್ವವನ್ನು ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಹಿಸಿದ್ದಾರೆ. ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಅಯತೊಲ್ಲಾ ಅಲಿ ಖಮೇನಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಇರಾನ್​ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮೊಖ್ಬರ್ ಹತ್ತಿರದಲ್ಲೇ ನಿಂತಿದ್ದು, ಪ್ರಾರ್ಥನೆಯ ಸಮಯದಲ್ಲಿ ಬಹಿರಂಗವಾಗಿ ಕಣ್ಣೀರಿಟ್ಟರು. ನಂತರ ಜನರು ಶವಪೆಟ್ಟಿಗೆಗಳನ್ನು ತಮ್ಮ ಭುಜಗಳ ಮೇಲೆ ಹೊತ್ತು ನಡೆದರು. ಈ ಸಂದರ್ಭದಲ್ಲಿ "ಅಮೆರಿಕ ನಾಶವಾಗಲಿ" ಎಂಬ ಘೋಷಣೆಗಳು ಕೇಳಿಬಂದವು. ದೇಶದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾದ ಇರಾನ್​ನ ಅರೆಸೈನಿಕ ರೆವಲ್ಯೂಷನರಿ ಗಾರ್ಡ್​ನ ಉನ್ನತ ನಾಯಕರು ಹಾಜರಿದ್ದರು.

ಇದನ್ನೂ ಓದಿ : ಪ್ಯಾಲೆಸ್ಟೈನ್​ಗೆ ರಾಷ್ಟ್ರದ ಮಾನ್ಯತೆ: ಐರ್ಲೆಂಡ್, ನಾರ್ವೆ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಇಸ್ರೇಲ್ - Recognition of Palestine State

ETV Bharat Logo

Copyright © 2024 Ushodaya Enterprises Pvt. Ltd., All Rights Reserved.