ಕೊರೊನಾ ಭೀತಿ: ಹತ್ತು ಸಾವಿರ ಕೋಳಿ ಮರಿಗಳನ್ನು ಮಣ್ಣು ಮಾಡಿದ ರೈತ
ರಾಣೆಬೆನ್ನೂರ: ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ, ರೈತನೊಬ್ಬ 10 ಸಾವಿರ ಕೋಳಿ ಮರಿಗಳನ್ನು ಗುಂಡಿ ತೋಡಿ ಮಣ್ಣು ಮಾಡಿದ ಘಟನೆ, ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಯಕ್ಲಾಸಪುರದಲ್ಲಿ ನಡೆದಿದೆ. ಗ್ರಾಮದ ನಾಗರಾಜ ಮಾಕನೂರ ಎಂಬವರು ಕಳೆದ ಹತ್ತು ದಿನಗಳ ಹಿಂದೆ ತಮ್ಮ ಫಾರ್ಮ್ಗೆ ಹತ್ತು ಸಾವಿರ ಕೋಳಿ ಮರಿಗಳನ್ನು ತಂದಿದ್ದರು. ಆದರೆ ಹಕ್ಕಿ ಜ್ವರ ಹಾಗೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಜಮೀನಿನಲ್ಲಿ ಗುಂಡಿ ತೋಡಿ ಮರಿಗಳನ್ನು ಮುಚ್ಚಿದ್ದಾರೆ. ಇದರಿಂದ ರೈತನಿಗೆ ಸುಮಾರು 2 ಲಕ್ಷ ರೂ. ಗೂ ಅಧಿಕ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.