ತಾಲಿಬಾನಿಗಳಿಗೆ ಬಜರಂಗ ಬಲಿಯ ಗದೆಯೇ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್‌

By ETV Bharat Karnataka Team

Published : Nov 2, 2023, 9:10 AM IST

thumbnail

ರಾಜಸ್ಥಾನ: ಗಾಜಾದಲ್ಲಿ ತಾಲಿಬಾನ್ ಮನಸ್ಥಿತಿಯನ್ನು ಇಸ್ರೇಲ್ ಹತ್ತಿಕ್ಕುತ್ತಿದೆ. ಆ ದೇಶ ತಮ್ಮ ಗುರಿಗಳನ್ನು ಸಾಧಿಸುತ್ತಿರುವ ವೈಖರಿ ನೋಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ರಾಜಸ್ಥಾನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಪರ ಮತ ಪ್ರಚಾರ ನಡೆಸಿದ ಯೋಗಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷ ಭೂಮಿ ಗಾಜಾ ಪಟ್ಟಿಯನ್ನು ಉಲ್ಲೇಖಿಸಿ ಮಾತನಾಡಿದ ಯೋಗಿ, ಇಸ್ರೇಲ್ ತಾಲಿಬಾನ್ ಸಿದ್ಧಾಂತವನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ಇಡೀ ಜಗತ್ತು ಗಮನಿಸುತ್ತಿದೆ. ತಾಲಿಬಾನಿಗಳಿಗೆ ಬಜರಂಗ ಬಲಿಯ ಗದೆಯೇ ಪರಿಹಾರ. ಅರಾಜಕತೆ, ಗೂಂಡಾಗಿರಿ ಮತ್ತು ಭಯೋತ್ಪಾದನೆ ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ. ರಾಜಕೀಯವೂ ಅದರಲ್ಲಿ ಸಿಕ್ಕಿಹಾಕಿಕೊಂಡಾಗ ಅದು ಸುಸಂಸ್ಕೃತ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಡವರು, ಮಹಿಳೆಯರು, ಉದ್ಯಮಿಗಳು ಮತ್ತು ಇಡೀ ಸಮಾಜವೇ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.  

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಇರುವಲ್ಲೆಲ್ಲಾ ಭದ್ರತೆ ಮತ್ತು ಅಭಿವೃದ್ಧಿ ಎರಡೂ ಇರುತ್ತದೆ. ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ತಾಲಿಬಾನಿ ಮನಸ್ಥಿತಿಯನ್ನು ಇಲ್ಲಿ ಹೇರುತ್ತದೆ. ಜೊತೆಗೆ, ಮುಂದಿನ ದಿನಗಳಲ್ಲಿ ರಾಜಸ್ಥಾನದ ದೇವಾಲಯಗಳ ಮೇಲೆ ದಾಳಿ ನಡೆಸುತ್ತಾರೆ ಎಂದು ಅವರು ಆರೋಪಿಸಿದರು.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.