ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿಸಾನ್ ಸಂಘಟನೆ ಪ್ರತಿಭಟನೆ

By ETV Bharat Karnataka Team

Published : Dec 6, 2023, 5:42 PM IST

thumbnail

ಬೆಳಗಾವಿ: ಬರ ಪರಿಹಾರ, ರೈತರ ಸಾಲ ಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಗಾರ್ಡನ್ ಟೆಂಟ್ ನಲ್ಲಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ, ಅಕ್ರಮ ಸಕ್ರಮ ಯೋಜನೆ ಜಾರಿ, ರೈತರು ಬೆಳೆದ ಬೆಳೆ ಮಾರಲು ನಿರಂತರ ಖರೀದಿ ಕೇಂದ್ರ ತೆರೆಯಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಹಡಗಲಿ ತಾಲೂಕಿನ ಕುಡುಗೋಲುಮಟ್ಟ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸಬೇಕು. ಡೋಣಿ ನದಿ ಹಾಗೂ ಬೆಣ್ಣೆಹಳ್ಳ ಹೂಳೆತ್ತಬೇಕು. ಕುಡಿಯುವ ನೀರು, ಕಬ್ಬು, ತೋಟಗಾರಿಕೆ ಬೆಳೆಗಳಿಗೆ ಬರ ಪರಿಹಾರ ನೀಡಬೇಕು. ಪಂಪ್ ಸೆಟ್ ಗಳಿಗೆ 9 ಗಂಟೆ ಕಾಲ ನಿರಂತರ ವಿದ್ಯುತ್ ಒದಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈಟಿವಿ ಭಾರತ ಜೊತೆಗೆ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ ಮಾತನಾಡಿ, ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಸರ್ಕಾರ ಆರಿಸಿ ತಂದೆವು. 2 ಸಾವಿರ ರೂಪಾಯಿ ಬರ ಪರಿಹಾರ ಕೊಟ್ಟರೆ ತಗೊಂಡು ಏನು ಮಾಡುವುದು. ವಿದ್ಯುತ್ ಸಮಸ್ಯೆ ಮಿತಿ‌ ಮೀರಿದ್ದು, ಟಿವಿ ಸೀರಿಯಲ್ ನೋಡಲು ವಿದ್ಯುತ್ ಕೊಡುತ್ತಾರೆ. ಆದರೆ ರೈತರ ಮೋಟಾರ್ ಪಂಪಸೆಟ್ ಗಳಿಗೆ ಕೊಡಲು ಇವರಿಗೆ ಏನಾಗಿದೆ‌. ಬರಪರಿಸ್ಥಿತಿಯಲ್ಲಿ ಆಹಾರ ಭದ್ರತೆ ಬಗ್ಗೆ ಯಾವುದೇ ರೀತಿ ಸರ್ಕಾರ ವಿಚಾರ ಮಾಡುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು. 

ಮಾಧವ ಹೆಗಡೆ, ಗುರುನಾಥ ಬಗಲಿ, ವಿ.ಜಿ. ರೇವಡಿಗಾರ, ಪುಟ್ಟಸ್ವಾಮಿ ಜಿ., ಮಂಜು ಗೌರಿ ಸೇರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂಓದಿ:ಮೇವು ಸಾಗಾಟ ನಿಷೇಧ ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಎಲ್​ಡಿಎಫ್​ ಪ್ರತಿಭಟನೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.