ETV Bharat / state

ಮೇವು ಸಾಗಾಟ ನಿಷೇಧ ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಎಲ್​ಡಿಎಫ್​ ಪ್ರತಿಭಟನೆ

author img

By ETV Bharat Karnataka Team

Published : Dec 6, 2023, 4:30 PM IST

Updated : Dec 6, 2023, 5:06 PM IST

ldf-protest-against-ban-on-transportation-and-sale-of-fodder-at-chamarajanagar
ಮೇವು ಸಾಗಾಟ ನಿಷೇಧ ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಎಲ್​ಡಿಎಫ್​ ಪ್ರತಿಭಟನೆ

LDF protest at Chamarajanagar: ಚಾಮರಾಜನಗರ ಜಿಲ್ಲಾಧಿಕಾರಿ ಮೇವು ಸಾಗಾಟ ಮತ್ತು ಮಾರಾಟ ನಿಷೇಧಿಸಿರುವ ಬೆನ್ನಲ್ಲೇ, ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಎಲ್​ಡಿಎಫ್​ ಪ್ರತಿಭಟನೆ ನಡೆಸಿತು.

ಮೇವು ಸಾಗಾಟ ನಿಷೇಧ ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಎಲ್​ಡಿಎಫ್​ ಪ್ರತಿಭಟನೆ

ಚಾಮರಾಜನಗರ: ಬರ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಕಳೆದ ನವೆಂಬರ್ 22ರಿಂದ ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಕ್ಕೆ ಮೇವು ಮಾರಾಟ ಮತ್ತು ಸಾಗಾಟ ನಿಷೇಧಿಸಿ ಆದೇಶ ಹೊರಡಿಸಿದ್ದು, ಈ ಕ್ರಮವನ್ನು ಖಂಡಿಸಿ ಕೇರಳಿಗರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಹಾಗೂ ಕೇರಳದ ಗಡಿಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಗಡಿಭಾಗದಲ್ಲಿ ಎಲ್​ಡಿಎಫ್ ನೇತಾರ ಕೇರಳದ ಸಚಿವ ಜಯರಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಎಲ್​ಡಿಎಫ್​ ಪ್ರತಿಭಟನೆ: ಈ ವೇಳೆ ಸುಲ್ತಾನ್ ಬತ್ತೇರಿಯ ಪೂಂಕುಳಿಯಿಂದ ಗುಂಡ್ಲುಪೇಟೆ ಮೂಲೆಹೊಳೆ ಚೆಕ್ ಪೋಸ್ಟ್‌ವರೆಗೆ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸದಸ್ಯರು, ಹೈನುಗಾರರು ಮತ್ತು ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದರು. ಮೇವು ಸಾಗಾಟ ನಿಷೇಧವನ್ನು ಈ ಕೂಡಲೇ ತೆರವುಗೊಳಿಸಿ ಎರಡು ರಾಜ್ಯಗಳ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಎಲ್​ಡಿಎಫ್​ ನೇತಾರ ಸಚಿವ ಜಯರಾಜನ್ ಮಾತನಾಡಿ​, ಕರ್ನಾಟಕದ ಮೇವನ್ನು ಕೇರಳ ರೈತರು ಅವಲಂಬಿಸಿದ್ದಾರೆ. ಕೇರಳದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಿಲ್ಲೆಯಲ್ಲಿ ವಯನಾಡು ಎರಡನೇ ಸ್ಥಾನದಲ್ಲಿದೆ. ಮೇವು ಸರಬರಾಜು ಆಗದಿರುವುದರಿಂದ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ. ವಯನಾಡು ಸಂಸದ ರಾಹುಲ್ ಗಾಂಧಿ ಈ ಸಂಬಂಧ ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿಯವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಿದೆ. ಆದರೆ ಇದು ಎರಡು ರಾಜ್ಯಗಳ ನಡುವಿನ ಕೃಷಿಗೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ರಾಹುಲ್​ ಗಾಂಧಿ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಜಯರಾಜನ್​ ಒತ್ತಾಯಿಸಿದ್ದಾರೆ.

ಬರ- ಗಡಿಜಿಲ್ಲೆ ಚಾಮರಾಜನಗರ ತತ್ತರ: ರಾಜ್ಯಾದ್ಯಂತ ಬರ ತಾಂಡವವಾಡುತ್ತಿದ್ದು, ಈ ಸಂಬಂಧ ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಬರ ಹಿನ್ನೆಲೆಯಲ್ಲಿ ಚಾಮರಾಜನಗರದ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಮ್ಮಲ್ಲಿ ಈಗ ಕೇವಲ 20 ವಾರಗಳಿಗೆ ಬೇಕಾಗುವಷ್ಟು ಮಾತ್ರ ಮೇವು ಸಂಗ್ರಹವಿದ್ದು, ರೈತರು ಸಾಧ್ಯವಾದಷ್ಟು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಈಗಾಗಲೇ 3 ಸಾವಿರ ಮಂದಿ ರೈತರಿಗೆ ಮೇವಿನ ಬೀಜದ ಕಿಟ್​ಗಳನ್ನು ವಿತರಣೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್​ನಿಂದ ಟೈಲ್ಸ್ ತಯಾರಿಕೆ : ಪಾಲಿಕೆಯ ಕಸ ಸಂಗ್ರಹಣ ಘಟಕದಲ್ಲಿ ಹೊಸ ಪ್ರಯೋಗ

Last Updated :Dec 6, 2023, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.