ಶಿರಸಿ: ಮದುವೆಗೆ ಕರೆಯುವ ನೆಪದಲ್ಲಿ ಮನೆಗೆ ನುಗ್ಗಿದ ಖದೀಮ.. ಚಾಕು ತೋರಿಸಿ ದರೋಡೆಗೆ ಯತ್ನ
ಶಿರಸಿ: ಮದುವೆ ಕರೆಯುವ ನೆಪ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಚಾಕು ತೋರಿಸಿ ಮನೆ ಕಳ್ಳತನ ನಡೆಸಲು ವಿಫಲ ಯತ್ನ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಇದನ್ನೂ ಓದಿ: ಕೆಕೆಆರ್ಟಿಸಿ ಡಿಪೋ ಬಸ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ.. ಬಸ್ಗಾಗಿ ತೀವ್ರ ಶೋಧ!
ಶಿರಸಿ ತಾಲೂಕಿನ ಮಂಡೆಮನೆಯ ಜಿ ಆರ್ ಹೆಗಡೆ ಎಂಬುವರ ಮನೆಯಲ್ಲಿ ಘಟನೆ ಜರುಗಿದೆ. ಇವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಮದುವೆ ಕರೆಯಲು ಬಂದಿದ್ದಾಗಿ ಹೇಳಿಕೊಂಡು ರಾತ್ರಿ ವೇಳೆ ಬಾಗಿಲು ತೆರೆಯುವಂತೆ ತಿಳಿಸಿದ್ದಾನೆ. ಇದರಿಂದ ಮನೆಯವರು ಬಾಗಿಲು ತೆರೆದಿದ್ದಾರೆ. ಬಳಿಕ ವ್ಯಕ್ತಿ, ತಕ್ಷಣ ಚಾಕುವಿನಿಂದ ಮನೆಯ ಯಜಮಾನನ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮ ಕೈಗೆ ಗಾಯವಾಗಿದೆ. ಗಲಾಟೆ ಕೇಳಿದ ಜಿ.ಆರ್. ಹೆಗಡೆ ಮಗ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬರುವ ವೇಳೆಗೆ ಕಳ್ಳ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬೈಕ್ಗಳ ಕಳ್ಳತನ ಪ್ರಕರಣ : ಮೂವರು ಕಳ್ಳರ ಬಂಧನ, ಕದ್ದ ವಾಹನ ಖರೀದಿ ಮಾಡಿದ ಮೂವರು ವಶಕ್ಕೆ
ಇನ್ನು, ಘಟನೆ ನಡೆದ ತಕ್ಷಣ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿ ಮನೆಗೆ ಬರುವುದು ಹಾಗೂ ಓಡಿ ಹೋಗುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾವಿದೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆಟೋದಲ್ಲಿದ್ದ ನಗದು ಮತ್ತು ಪೆನ್ಡ್ರೈವ್ ಕಳ್ಳತನ; ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ