ETV Bharat / state

ಬೈಕ್‌ಗಳ ಕಳ್ಳತನ ಪ್ರಕರಣ : ಮೂವರು ಕಳ್ಳರ ಬಂಧನ, ಕದ್ದ ವಾಹನ ಖರೀದಿ ಮಾಡಿದ ಮೂವರು ವಶಕ್ಕೆ

author img

By

Published : Mar 3, 2023, 8:48 PM IST

ಬೈಕ್‌ಗಳ ಕಳ್ಳತನ ಪ್ರಕರಣ
ಬೈಕ್‌ಗಳ ಕಳ್ಳತನ ಪ್ರಕರಣ

ಬೈಕ್​ಗಳ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್​ ತಂಡಕ್ಕೆ ಕಮಿಷನರ್​ ಬಹುಮಾನ ಘೋಷಣೆ ಮಾಡಿದ್ದಾರೆ.

ಕದ್ದ ಬೈಕ್​ಗಳನ್ನು ವಶ ಪಡಿಸಿಕೊಂಡ ಪೊಲೀಸರು

ಕಲಬುರಗಿ: ಡಿಯೋ ಹಾಗೂ ಸ್ಪ್ಲೆಂಡರ್ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ ಮೂವರು ಖತರ್ನಾಕ ಬೈಕ್ ಕಳ್ಳರನ್ನ ನಗರ ಪೊಲೀಸರು ಬಂಧಿಸಿ ಬರೊಬ್ಬರಿ 23 ಬೈಕ್​ಗಳನ್ನ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶಿವರಾಜ ಪೂಜಾರಿ, ಮಾರೇಪ್ಪ ಕುಂಚಿಕೊರವೇರ ಮತ್ತು ಹುಸೇನಿ ಸಿರಂ ಬಂಧಿತ ಆರೋಪಿಗಳು. ಅಲ್ಲದೇ ಕದ್ದಿರುವ ಬೈಕ್​ಗಳನ್ನು ಖರೀದಿಸಿದ್ದ ಇಮ್ರಾನ್, ಸಿದ್ದಲಿಂಗ ಮತ್ತು ಫಿರೋಜ್ ಈ ಮೂವರನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 14 ಹೊಂಡಾ ಡಿಯೋ, 8 ಹಿರೋ ಸ್ಪ್ಲೆಂಡರ್ ಮತ್ತು 1 ಪಲ್ಸರ್ ಬೈಕ್ ಸೇರಿ 21 ಲಕ್ಷ ಮೌಲ್ಯದ 23 ಬೈಕ್​ಗಳನ್ನ ಜಪ್ತಿ‌ ಮಾಡಲಾಗಿದೆ. ಬೈಕ್​ ಅಷ್ಟೆ ಅಲ್ಲದೇ ಮಹಿಳೆಯೊಬ್ಬರಿಂದ ದೋಚಿದ್ದ ಮೊಬೈಲ್ ಫೋನ್​ ಅನ್ನು ಕೂಡ ಪೊಲೀಸರು ವಶಕ್ಕೆ ಮಾಡಿದ್ದಾರೆ.

ಕಲಬುರಗಿಯ ಬ್ರಹ್ಮಪೂರ ಚೌಕ್, ಅಶೋಕ್​ ನಗರ, ಜಿಮ್ಸ್ ಆಸ್ಪತ್ರೆ, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಡೂಪ್ಲೀಕೆಟ್ ಕೀ ಬಳಸಿ ಖದೀಮರು ಖನ್ನ ಹಾಕುತ್ತಿದ್ದರು. ಖದೀಮರನ್ನು ಸೆರೆ ಹಿಡಿಯಲು ನಗರ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.‌ ಇನ್ನು ಖದೀಮರು, ಕದ್ದ ಬೈಕ್​ಗಳ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡೋದು ಮತ್ತು ಹಣಕ್ಕಾಗಿ ವಾಹನಗಳನ್ನು ಅಡ ಇಡುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ನಗರ ಕಮಿಷನರ್ ಚೇತನ್ ಆರ್ ಮಾತನಾಡಿ, ಜಿಲ್ಲೆಯಲ್ಲಿ ವಾಹನ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಬಸ್​ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದಲೂ ವಾಹನಗಳನ್ನು ಕದಿಯುತ್ತಿದ್ದಾರೆ. ಕದ್ದಿರುವಂತಹ ವಾಹನಗಳನ್ನು ಬೇರೋಬ್ಬರಿಗೆ ಮಾರುವುದು ಮತ್ತು ಅಡ ಇಡುವುದನ್ನು ಮಾಡುತ್ತಿದ್ದಾರೆ. ಕಾನೂನಿನ ಪ್ರಕಾರ ಕದ್ದ ಮಾಲುಗಳನ್ನು ಖರೀದಿ ಮಾಡುವುದು ಅಪರಾದವಾಗಿದೆ. ಆದ ಕಾರಣ ದಾಖಲಾತಿ ಇಲ್ಲದ ವಾಹನಗಳನ್ನು ತೆಗೆದುಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಇದನ್ನೂ ಓದಿ: ರಾತ್ರೋ ರಾತ್ರಿ ಬೈಕ್​ ಕಳ್ಳತನ; ಆರೋಪಿಯನ್ನು ಬಂಧಿಸಿದ ಕಡೂರು ಪೊಲೀಸರು

ನಿಮ್ಮ ವಾಹನಗಳು ಕಳವಾದರೇ ಕೂಡಲೇ ಸಮೀಪದ ಪೊಲೀಸ್​ ಠಾಣೆಗೆ ತೆರಳಿ ದೂರನ್ನು ದಾಖಲಿಸಬೇಕು. ಅಥವಾ ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಿಮ್ಮ ವಸ್ತುಗಳು ಕಳ್ಳತನವಾಗಿದ್ದಲ್ಲಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಬೇಕೆಂದೇನೂ ಇಲ್ಲ. ಮೊಬೈಲ್​ ಮುಖಾಂತರವೇ ಪೊಲೀಸ್​ ಇಲಾಖೆ ವೆಬ್​ ಸೈಟ್​ನಲ್ಲಿ ದೂರನ್ನು ನೀಡಬಹುದಾಗಿದೆ ಎಂದು ಚೇತನ್ ಆರ್ ತಿಳಿಸಿದರು. ​ಬಳಿಕ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ನಗರ ಪೊಲೀಸ್ ಕಮಿಷನರ್ ಚೇತನ್ ಆರ್ 10 ಸಾವಿರ ರೂ ನಗದು ಬಹುಮಾನವನ್ನು ಘೋಷಣೆ ಮಾಡಿ ಪ್ರೋತ್ಸಾಹಿಸಿದರು.

ಇದನ್ನೂ ಓದಿ: ಎಎಸ್ಐ ಬೈಕ್​ ಕದ್ದು ಪರಾರಿ: ಶಿವಮೊಗ್ಗದಲ್ಲಿ ನಡೆದ ಪ್ರಕರಣದ ಸಿಸಿಟಿವಿ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.