ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಬೆಂಬಲಿಸಿದವರಿಗೆ ನಮ್ಮ ಸಮುದಾಯ ಬೆಂಬಲ ನೀಡಿದೆ. ಬೆಂಬಲ ನೀಡದವರಿಗೆ ಯಾವ ರೀತಿ ಉತ್ತರ ನೀಡಬೇಕೋ ಅದನ್ನೂ ಸಹ ಉಪಚುನಾವಣೆಯಲ್ಲಿ ನೀಡಿದೆ ಎಂದು ಬಸವಮೃತ್ಯುಂಜಯ ಶ್ರೀ ಹೇಳಿದರು. ಸಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಸಮಿತಿ ಕರೆದ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.
ನಾವು ಯಾವ ಜನಪ್ರತಿನಿಧಿಗಳ ವಿರೋಧಿಗಳಲ್ಲ. ಕಳೆದ ಎರಡು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲ 224 ಶಾಸಕರಿಗೆ ಪತ್ರ ನೀಡಿ ನಮಗೆ ಮೀಸಲಾತಿ ನೀಡುವಂತೆ ಮನವಿ ಸಹ ಮಾಡಲಾಗಿದೆ. ಶೇ. 80ರಷ್ಟು ಸಮುದಾಯ ಹೊಂದಿರುವ ಪಂಚಮಸಾಲಿ ಜನಕ್ಕೆ ಬೆಂಬಲಿಸಲು ಮನವಿ ಮಾಡಿದ್ದೇನೆ ಎಂದರು.
ಇದೇ ಜೂನ್ 27ರೊಳಗಾಗಿ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಾನೂನಾತ್ಮಕವಾಗಿ ಜಾರಿ ಮಾಡದಿದ್ದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರೇ ಅವರಿಗೆ ಅಸಹಕಾರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಸಿಎಂ ನಿವಾಸದೆದುರು ಸತ್ಯಾಗ್ರಹ: ಮೀಸಲಾತಿ ಜಾರಿಗೆ ಆಗ್ರಹಿಸಿ ಜೂನ್ 27ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಸಿಎಂ ಬೊಮ್ಮಾಯಿ ಅಧಿಕೃತ ನಿವಾಸದೆದುರು ರಾಜ್ಯದ ಪಂಚಮಸಾಲಿ ಸಮುದಾಯದವರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ನಂತರ ಪ್ರತಿ ವಾರ ಒಂದು ಕ್ಷೇತ್ರದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಗ್ರಾ ಪಂ ಚುನಾವಣೆಯ ಹಳೆ ವೈಷಮ್ಯ: ವ್ಯಕ್ತಿ ಮೇಲೆ ಹಲ್ಲೆ