ETV Bharat / state

ಕಾಂಗ್ರೆಸ್‌ ಪಕ್ಷ ಐಸಿಯುನಲ್ಲಿದೆ.. ಜಗದೀಶ್​ ಶೆಟ್ಟರ್ ವ್ಯಂಗ್ಯ

author img

By

Published : Mar 11, 2023, 11:03 PM IST

Jagadish Shettar
ಜಗದೀಶ್ ಶೆಟ್ಟರ್

ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ - ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ - ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ವ್ಯಂಗ್ಯ‌.

ಕಾಂಗ್ರೆಸ್‌ ಪಕ್ಷ ಐಸಿಯುನಲ್ಲಿದೆ..ಜಗದೀಶ್ ಶೆಟ್ಟರ್ ವ್ಯಂಗ್ಯ

ವಿಜಯಪುರ: ಅಧಿಕಾರಕ್ಕೇರುವ ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿಯೇ ಐಸಿಯುನಲ್ಲಿದೆ. ಚುನಾವಣೆ ಮುಗಿಯುವ ಹೊತ್ತಿಗೆ ಹೊರಗಡೆ ಬರದಂತಹ ಸ್ಥಿತಿಗೆ ತಲುಪುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ವ್ಯಂಗ್ಯ‌ವಾಡಿದ್ದಾರೆ.

ಸಿಂದಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಇತ್ತೀಚೆಗೆ ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಸೋತು ಅಧೋಗತಿಗೆ ಹೋಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಇನ್ನು ಕರ್ನಾಟಕದಲ್ಲಿ ಸಹ ಕಾಂಗ್ರೆಸ್ ಐಸಿಯುಗೆ ಹೋಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರು ಐಸಿಯುನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

4 ದಿಕ್ಕಿನಿಂದ ವಿಜಯ ಸಂಕಲ್ಪ ಯಾತ್ರೆ: ಬಿಜೆಪಿ ಈ ಬಾರಿ ರಾಜ್ಯದಲ್ಲಿ 114 ರಿಂದ 140 ಸೀಟ್ ಪಡೆದು ಈ ಬಾರಿ ಅಧಿಕಾರಕ್ಕೆ ಬರಲಿದೆ. ರಾಜ್ಯದ ನಾಲ್ಕು ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದೆ. ಇದು ಬದಲಾವಣೆಯ ದಾರಿಯಾಗಿದ್ದು, ನಮ್ಮ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಶೆಟ್ಟರ್​​ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು- ಮೈಸೂರು ಹೆದ್ದಾರಿ ಕುರಿತು ಜೆಡಿಎಸ್ ನೀಡಿರುವ ಜಾಹೀರಾತಿಗೆ ಪ್ರತಿಕ್ರಿಯಿಸಿದ ಶೆಟ್ಟರ್, ಜೆಡಿಎಸ್ ಪಕ್ಷಕ್ಕೆ ಜಾಹೀರಾತು ಹಾಕಿ ಹೇಳುವ ಪರಿಸ್ಥಿತಿ ಬಂತಲ್ಲ. ಅವರು ಮಾಡಿದ್ರೆ ಜನರಿಗೆ ಗೊತ್ತಾಗಿರಲಿಲ್ವಾ?. ರಾಮನಗರ, ಚನ್ನಪಟ್ಟಣ ಇದು ನಮ್ಮ ಬೆಲ್ಟ್ ಎಂದು ನೀವು ಅದನ್ನು ಮಾಡಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.

ನಿನ್ನೆ ಯತ್ನಾಳ್​​ ಅವರನ್ನು 50 ಸಾವಿರ ಲೀಡ್​​ನಿಂದ ಗೆಲ್ಲಿಸಿ ಎಂದಿದ್ದ ಕಾರಜೋಳ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ಕಾರಜೋಳ ಈ ವಿಚಾರವನ್ನು ಯಾವ ಅರ್ಥದಲ್ಲಿ ಹೇಳಿದಾರೋ ಗೊತ್ತಿಲ್ಲ. ಬಗ್ಗೆ ನನಗೆ ಮಾಹಿತಿ ಇಲ್ಲ. ಹೈಕಮಾಂಡ್ ಟಿಕೆಟ್ ಬಗ್ಗೆ ನಿರ್ಧರಿಸುತ್ತದೆ. ಈ ಬಾರಿ ಒಂದು ಐದಾರು ಜನ ಶಾಸಕರಿಗೆ ಟಿಕೆಟ್ ತಪ್ಪಬಹುದು ಎಂದು ಯಡಿಯೂರಪ್ಪ ತಮ್ಮ ರಾಜಕೀಯದ ಅನುಭವದ ಮೇಲೆ ಹೇಳಿರಬಹುದು. ಕೆಲವೊಂದು ಕಾರಣದಿಂದ ಕೆಲವೊಬ್ಬರಿಗೆ ಟಿಕೆಟ್ ಸಿಗೋದಿಲ್ಲ. ವಿಧಾನಸಭೆ, ಲೋಕಸಭೆ ಎರಡರಲ್ಲೂ ಯಾವುದೇ ಪಕ್ಷದಿಂದ 100 ಪರ್ಸೆಂಟ್ ಟಿಕೆಟ್ ಸಿಗೋದಿಲ್ಲ ಎಂದು ಬಿಎಸ್​​ವೈ ಹೇಳಿಕೆಗೆ ಧ್ವನಿ ಗೂಡಿಸಿದರು.

ಮಾಡಾಳ್​ ಪ್ರಕರಣ: ಶಾಸಕ ಮಾಡಾಳ ವಿರೂಪಾಕ್ಷಪ್ಪ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಿನ್ನೆಡೆಯೂ ಆಗುವುದಿಲ್ಲ. ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಈ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸತ್ಯ ಹೊರಬರಲಿದೆ. ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವಿದೆ. ಅದರಲ್ಲಿ ನಮ್ಮ ಪಕ್ಷದ, ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇನ್ನು ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅವರು ಆಯ್ಕೆಯಾದ ದಿನದಿಂದಲೂ ಮೋದಿ ಅವರ ಸರ್ಕಾರಕ್ಕೆ ಬೆಂಬಲ‌ ಕೊಡುತ್ತಾ ಬಂದಿದಾರೆ. ಬಿಜೆಪಿಗೆ ಅವರ ಬೆಂಬಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಬಜೆಟ್​ ವಿರುದ್ಧ ಜಗದೀಶ್​ ಶೆಟ್ಟರ್​ ವಿಡಿಯೋ ವೈರಲ್​: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.