ETV Bharat / state

ಬಿಡಾಡಿ ದನಗಳಿಗೆ ಆಸರೆಯಾದ ಆಧುನಿಕ 'ಬಾಪು': ಗೋಶಾಲೆ ತೆರೆದ ಮುದ್ದೇಬಿಹಾಳ ರೈತ

author img

By

Published : Jul 8, 2021, 6:34 AM IST

Updated : Jul 8, 2021, 11:46 AM IST

muddebihala
ಗೋಶಾಲೆ ತೆರೆದ ಮುದ್ದೇಬಿಹಾಳ ರೈತ

ಬಿಡಾಡಿ ಜಾನುವಾರುಗಳಿಗೆ ಮೇವು ಹಾಕಿ ನೀರು ಕೊಟ್ಟು ಅವುಗಳು ನೆಮ್ಮದಿಯ ಬದುಕು ಸಾಗಿಸಲಿ ಎಂಬ ಉದ್ದೇಶದಿಂದ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದ ಪ್ರಗತಿಪರ ರೈತ ಬಾಪುಗೌಡ ಗೌಡರ ತಮ್ಮದೇ ಸ್ವಂತ ಜಮೀನಿನಲ್ಲಿ ಗೋಶಾಲೆ ಆರಂಭಿಸಿದ್ದಾರೆ.

ಮುದ್ದೇಬಿಹಾಳ: ಬಿಡಾಡಿ ಜಾನುವಾರುಗಳಿಗೆ ನೆಲೆ ಕಲ್ಪಿಸಬೇಕು ಎಂದು ಆಲೋಚಿಸಿದ ತಾಲೂಕಿನ ರೈತರೊಬ್ಬರು ಖಾಸಗಿಯಾಗಿ ಗೋಶಾಲೆಯೊಂದನ್ನು ಆರಂಭಿಸಿ ಅವುಗಳಿಗೆ ಆಸರೆ ಕಲ್ಪಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.

ಬಿಡಾಡಿ ಜಾನುವಾರುಗಳ ಉಪಟಳದಿಂದ ರಸ್ತೆಯಲ್ಲಿ ಸಂಚರಿಸುವರು ನಿತ್ಯ ಹಿಡಿಶಾಪ ಹಾಕುತ್ತಿದ್ದರು. ಕೆಲವರು ವಾಹನಗಳ ಮೇಲಿಂದ ಬಿದ್ದು ಗಾಯಗೊಂಡಿದ್ದರು. ಮತ್ತೆ ಕೆಲವರು ಬಿಡಾಡಿ ಜಾನುವಾರುಗಳಿಗೆ ಮುಕ್ತಿ ಕಾಣಿಸುವಂತೆ ಆಗ್ರಹಿಸುತ್ತಲೇ ಇದ್ದರು. ಹೀಗಿರುವಾಗ ಇಂತಹ ಬಿಡಾಡಿ ಜಾನುವಾರುಗಳಿಗೆ ಮೇವು ಹಾಕಿ ನೀರು ಕೊಟ್ಟು ಅವುಗಳು ನೆಮ್ಮದಿಯ ಬದುಕು ಸಾಗಿಸಲಿ ಎಂಬ ಉದ್ದೇಶದಿಂದ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದ ಪ್ರಗತಿಪರ ರೈತ ಬಾಪುಗೌಡ ಗೌಡರ ತಮ್ಮದೇ ಸ್ವಂತ ಜಮೀನಿನಲ್ಲಿ ಗೋಶಾಲೆ ಆರಂಭಿಸಿದ್ದಾರೆ.

ಗೋಶಾಲೆ ತೆರೆದ ಮುದ್ದೇಬಿಹಾಳ ರೈತ

ಬಿಡಾಡಿ ದನಗಳಿಂದ ಆಗುತ್ತಿದ್ದ ತೊಂದರೆ ಅಷ್ಟಿಷ್ಟಲ್ಲ. 3-4 ಬಾರಿ ಪುರಸಭೆಯವರು ಸಾರ್ವಜನಿಕ ತಿಳಿವಳಿಕೆ ನೋಟಿಸ್ ಕೊಟ್ಟು ಬಿಡಾಡಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಅವುಗಳನ್ನು ಬೀದಿಗೆ ಬಿಡದಂತೆ ತಿಳಿವಳಿಕೆ ನೀಡಿದ್ದರು. ಆದರೆ ಅಂದಾಜು 50-60 ಜಾನುವಾರುಗಳು ಎಲ್ಲೆಂದರಲ್ಲಿ ತಿರುಗಾಡಿ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ತಂಗಡಗಿ ರಸ್ತೆಯಲ್ಲಿ ವಾಹನಗಳ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದ್ದವು. ಕೆಲವೊಮ್ಮೆ ರಸ್ತೆಗೆ ಅಡ್ಡಲಾಗಿ ನಿಂತರೆ ವಾಹನಗಳು ಹೋಗದೇ ಟ್ರಾಫಿಕ್ ಜಾಮ್​ ಕೂಡಾ ಆಗುತ್ತಿತ್ತು. ಇದೆಲ್ಲವನ್ನೂ ಮನಗಂಡಿದ್ದ ಗೋನಾಳದ ಪ್ರಗತಿಪರ ರೈತ ಬಾಪುಗೌಡ ಗೌಡರ ಅವರು ಬಿಡಾಡಿಯಾಗಿ ತಿರುಗಾಡುವ ದನಗಳಿಗೆ ಆಶ್ರಯ ಕಲ್ಪಿಸಿದರೆ ಹೇಗೆ ಎಂದು ಆಲೋಚಿಸಿ ತಮ್ಮ ಸ್ವಂತ ಜಮೀನಿನಲ್ಲಿಯೇ ಸದ್ಯಕ್ಕೆ ಗೋಶಾಲೆಯನ್ನು ತೆರೆದಿದ್ದಾರೆ.

ಇದನ್ನು ಓದಿ: ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ಇನ್ನಿಲ್ಲ..

ಗೋವುಗಳಿಗೆ ಮೇವು, ನೀರಿನ ವ್ಯವಸ್ಥೆ: ಪಟ್ಟಣದಲ್ಲಿ ಹಸಿವಿನಿಂದ ಪ್ಲಾಸ್ಟಿಕ್ ಹಾಳೆ, ಸಿಕ್ಕ ಸಿಕ್ಕ ಆಹಾರವನ್ನು ತಿಂದು ಬದುಕುತ್ತಿದ್ದ ಈ ಜಾನುವಾರುಗಳಿಗೆ ಈ ಗೋಶಾಲೆಯಲ್ಲಿ ಸದ್ಯಕ್ಕೆ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತಮ್ಮ ಜಮೀನಿನಲ್ಲಿ ಹೆಬ್ಬೇವು ಗಿಡಗಳನ್ನು ಬೆಳೆಸಿರುವ ಗೌಡರ ಅವರು, ಈ ಜಾಗದಲ್ಲಿ ಸ್ವಚ್ಛಂದವಾಗಿ ಜಾನುವಾರುಗಳ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಲಾಕ್‌ಡೌನ್​ನಲ್ಲೂ ಜಾನುವಾರುಗಳಿಗೆ ಮೇವು, ನೀರು ಪೂರೈಕೆ: ಲಾಕ್‌ಡೌನ್ ಸಮಯದಲ್ಲಿ ಹಸಿವಿನಿಂದ ಬಳಲಿ ಕಂಗಾಲಾಗಿದ್ದ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ ರೈತ ಬಾಪುಗೌಡ ಅವರು ಇದೀಗ ಅವುಗಳಿಗೆ ಶಾಶ್ವತವಾಗಿ ಒಂದೆಡೆ ನೆಲೆ ಕಲ್ಪಿಸುವ ಕೆಲಸ ಮಾಡಿದ್ದಾರೆ. 50ಕ್ಕೂ ಹೆಚ್ಚು ಜಾನುವಾರುಗಳು ಆಸರೆ ಪಡೆದುಕೊಂಡಿದ್ದು, ಗ್ರಾಮೀಣ ಪ್ರದೇಶದ ಹೊಲದಲ್ಲಿ ನಿಶ್ಚಿಂತೆಯಿಂದ ಕಾಲ ಕಳೆಯುವಂತಾಗಿದೆ.

ಸೌಲಭ್ಯಗಳ ಕೊರತೆ: ಸದ್ಯಕ್ಕೆ ನಗರ ಪ್ರದೇಶದಲ್ಲಿ ಬಿಡಾಡಿಯಾಗಿ ತಿರುಗಾಡುವ ಜಾನುವಾರುಗಳನ್ನು ತಂದು ಇಲ್ಲಿ ಸೇರಿಸಲಾಗಿದ್ದು, ಅವುಗಳಿಗೆ ಶೆಡ್‌ನ ಅಗತ್ಯತೆ ಇದೆ. ಅಲ್ಲದೇ ಸಿಮೆಂಟ್ ನೆಲಹಾಸು ಇದ್ದರೆ ಜಾನುವಾರುಗಳಿಗೆ ಬರುವ ಕಾಲುಬೇನೆ ರೋಗದಂತಹ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಸಹೃದಯಿಗಳು ಈ ಮೂಕ ಜಾನುವಾರುಗಳ ನೆರವಿಗೆ ಧಾವಿಸಬೇಕಿದೆ.

ದಾನಿಗಳು ಸಂಪರ್ಕಿಸಬಹುದಾದ ವಿಳಾಸ: ಬಾಪುಗೌಡ ಗೌಡರ, ಗೋನಾಳ ಗ್ರಾಮ. ಮುದ್ದೇಬಿಹಾಳ ತಾಲೂಕು, ಮೊಬೈಲ್ ಸಂಖ್ಯೆ-9902530700

Last Updated :Jul 8, 2021, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.