ETV Bharat / state

ವೃತ್ತಿಯಲ್ಲಿ ಶಿಕ್ಷಕ ಮಾಡೋದೆಲ್ಲಾ ಕಳ್ಳತನ.. 18 ದೇವಸ್ಥಾನದಲ್ಲಿ ಕನ್ನ ಹಾಕಿದವರು ಕೊನೆಗೂ ಅಂದರ್​

author img

By

Published : Dec 11, 2022, 8:03 PM IST

ವೃತ್ತಿಯಲ್ಲಿ ಶಿಕ್ಷಕನಾದ ಹಾವೇರಿ ಜಿಲ್ಲೆ ಲಿಂಗದೇವರಕೊಪ್ಪ ಗ್ರಾಮದ ವಸಂತಕುಮಾರ ಶಿವಪ್ಪ ಹಾಗೂ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನಹಳ್ಳಿಯ ಸಲೀಮ ಜಮಾಲಸಾಬ ಕಮ್ಮಾರ ಎಂಬ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

two-people-arrested-for-theft-in-18-temples
18 ದೇವಸ್ಥಾನದಲ್ಲಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಖದೀಮರು..!

ಕಾರವಾರ(ಉತ್ತರ ಕನ್ನಡ): ದೇವಸ್ಥಾನದಲ್ಲಿ ಕಳ್ಳತನವೊಂದರ ಜಾಡು ಹಿಡಿದು ತೆರಳಿದ ಯಲ್ಲಾಪುರ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಕಳ್ಳತನ ನಡೆಸಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕನಾದ ಹಾವೇರಿ ಜಿಲ್ಲೆ ಲಿಂಗದೇವರಕೊಪ್ಪ ಗ್ರಾಮದ ವಸಂತಕುಮಾರ ಶಿವಪ್ಪ ಹಾಗೂ ರಾಣಿಬೆನ್ನೂರು ತಾಲೂಕಿನ ಗುಡ್ಡದಬೇವಿನಹಳ್ಳಿಯ ಸಲೀಮ ಜಮಾಲಸಾಬ ಕಮ್ಮಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನ.18 ರಂದು ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನದ ಬೀಗವನ್ನು ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಸುಮಾರು ಮೂರು ಸಾವಿರ ರೂಪಾಯಿ ಹಣ ಸೇರಿದಂತೆ ಹಿತ್ತಾಳೆಯ ಗಂಟೆಗಳು, ತಾಮ್ರದ ಕಡಾಯಿ ದೋಚಿದ್ದರು. ಅಲ್ಲದೇ ಗುಳ್ಳಾಪುರ ಗ್ರಾಮದ ಶ್ರೀ ಶಿವವ್ಯಾಳೇಶ್ವರ ದೇವಸ್ಥಾನದಲ್ಲಿದ್ದ ಸುಮಾರು 13,500 ರೂ. ಬೆಲೆಯ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್ ಆದೇಶದಂತೆ ಈ ಎರಡೂ ಪ್ರಕರಣ ಆರೋಪಿಗಳ ಪತ್ತೆ ಕುರಿತು ವಿಶೇಷ ತಂಡ ರಚಿಸಿದ್ದ ಯಲ್ಲಾಪುರ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು, ಆರೋಪಿತರು ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ ಕಡೆಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ನಗರ, ರಿಪ್ಪನಪೇಟೆ, ಹೊಸನಗರ ಮತ್ತು ಹಾವೇರಿ ಜಿಲ್ಲೆಯ ಹಂಸಭಾವಿ, ಹಿರೇಕೆರೂರ, ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾರೆ.

ಬಂಗಾರ ಮತ್ತು ಬೆಳ್ಳಿಯ ವಸ್ತುಗಳು, ಕಾಣಿಕೆ ಹುಂಡಿ, ಘಂಟೆಗಳು, ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು, ಹಾಗೂ ಸಿ.ಸಿ.ಟಿವಿಯ ಡಿ.ವಿ.ಆರ್ ಗಳನ್ನು ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಕಳೆದ 3-4 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಎಲ್ಲಿಯೂ ಸಿಕ್ಕಿಬಿದ್ದಿರಲಿಲ್ಲ. ಶೋಕಿ ಜೀವನಕ್ಕಾಗಿ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾಗಿ ಖದೀಮರು ಒಪ್ಪಿಕೊಂಡಿದ್ದಾರೆ.

ಆರೋಪಿತರಿಂದ ಮೂರು ಜಿಲ್ಲೆಯಲ್ಲಿ ಒಟ್ಟೂ 18 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಕೃತ್ಯಕ್ಕೆ ಬಳಸಿದ 12 ಲಕ್ಷ ಮೌಲ್ಯದ ನೂತನ ಮಾರುತಿ ನೆಕ್ಸಾ ಕಾರು, ಬಜಾಜ್ ಪ್ಲಾಟಿನಾ ಬೈಕ್‌, 2.29 ಲಕ್ಷ ನಗದು ಹಣ, 9ಗ್ರಾಂ ತೂಕದ ದೇವರ ಬಂಗಾರದ ಆಭರಣಗಳು, 3 ಕೆ.ಜಿ 400 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 140 ಘಂಟೆಗಳು, 27 ಹಿತ್ತಾಳೆಯ ದೀಪದ ಶಮೆ, 22 ಹಿತ್ತಾಳೆಯ ತೂಗು ದೀಪಗಳು, 7 ತಾಮ್ರದ ಕೊಡಗಳು, ಇನ್ನಿತರೇ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು ಹಾಗೂ 1 ಡಿ.ವಿ.ಆರ್.‌ ಸೇರಿದಂತೆ ಒಟ್ಟೂ 19.20 ಲಕ್ಷ ಬೆಲೆಯ ಸ್ವತ್ತನ್ನು ಪೊಲೀಸರು ವಶಪಡಿಸಕೊಂಡಿದ್ದಾರೆ.

ಎಸ್.ಪಿ ವಿಷ್ಣುವರ್ಧನ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ರವಿ ನಾಯ್ಕ ಮಾರ್ಗದರ್ಶನ ಮತ್ತು ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಿ.ಎಸ್.ಐಗಳಾದ ಮಂಜುನಾಥ ಗೌಡ‌ರ್, ಅಮೀನಸಾಬ್ ಅತ್ತಾರ, ಶ್ಯಾಮ ಪಾವಸ್ಕರ್, ಪ್ರೊ. ಪಿ.ಎಸ್.ಐ ಉದಯ ಹಾಗೂ ಸಿಬ್ಬಂದಿಗಳಾದ ದೀಪಕ್ ನಾಯ್ಕ, ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಿರೀಶ, ನಂದೀಶ, ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಹಾಗೂ ಸಿ.ಡಿ.ಆರ್ ಸೆಲ್ ವಿಭಾಗದ ಉದಯ, ರಮೇಶ ಹಾಗೂ ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮನೋಹರ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಶಾಲಾ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಮುಳುಗಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.