ಶಿರಸಿ: ವಿದೇಶದಿಂದ ಬರುತ್ತಿರುವವರಿಂದಲೇ ಹೆಚ್ಚಾಗಿ ಕೊರೊನಾ ಸೋಂಕು ಹರಡುತ್ತಿದ್ದರೂ ಬೇರೆ ವಿಧಿಯಿಲ್ಲದೆ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಆದ್ರೆ ಶಿರಸಿಯ ಯುವತಿಯೋರ್ವಳು ತನ್ನಿಂದ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿದುಕೊಂಡಿದ್ದಾರೆ.
ಶಿರಸಿಯ ಪ್ರತಿಭಾ ಹೆಗಡೆ ಇಟಲಿಯ ನೇಪೆಲ್ಸ್ ನಗರದ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ವೈರಸ್ ಭೀತಿಯಿದ್ದರೂ ಅಲ್ಲಿಯೇ ಉಳಿಯುವ ನಿರ್ಧಾರ ಗಟ್ಟಿ ನಿರ್ಧಾರ ಮಾಡಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರತಿಭಾ, "ನಾನು ಇಟಲಿಯ ನೇಪಲ್ಸ್ ನಗರದಲ್ಲಿ ಪಿಹೆಚ್ಡಿ ವ್ಯಾಸಂಗ ಮಾಡ್ತಾ ಇದ್ದೇನೆ. ಒಂದೆರಡು ವಾರಗಳಿಂದ ಭಾರತದಲ್ಲಿರುವ ನನ್ನ ಸ್ನೇಹಿತರು ಮತ್ತು ಕುಟುಂಬದವರು ಮನೆಗೆ ವಾಪಸ್ ಬಂದು ಬಿಡಬಹುದಲ್ಲ ಎಂದು ಸಲಹೆ ನೀಡುತ್ತಾ ಇದ್ದಾರೆ. ನಾನು ಇಲ್ಲೇ ಇರಲು ಡಿಸೈಡ್ ಮಾಡಿದೆ. ಕಾರಣ ಸಿಂಪಲ್. ನನ್ನ ನಗರದಲ್ಲಿ ಎಷ್ಟೇ ಜನರಿಗೆ ಕೊವಿಡ್-19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಆಗುವುದಿಲ್ಲ. ಬದಲಾಗಿ ಭಾರತಕ್ಕೆ ಬರುವ ಹಾದಿಯಲ್ಲಿ ಜನರ ನಡುವೆ ಇದ್ದು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕು. ಇದರಿಂದ ಭಾರತಕ್ಕೆ ಕೊರೊನಾ ಹೊತ್ತೊಯ್ಯುವುದು ಬಿಟ್ಟರೆ ಬೇರೆ ಯಾವ ಉಪಯೋಗವು ಅದರಲ್ಲಿ ಇಲ್ಲ ಎಂದಿದ್ದಾರೆ.
ಪ್ರಸ್ತುತ ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಇದ್ದಲ್ಲೇ ಇರುವುದು ಬಿಟ್ಟು ಬಸ್, ರೈಲು ಹತ್ತಿ ಮನೆಗೆ ಹೋಗೋದ್ರಿಂದ ನಿಮಗೆ ಕೊರೊನಾ ಬಾಧಿಸುವ ಜೊತೆಗೆ ಸಹ ಪ್ರಯಾಣಿಕರು, ಕುಟುಂಬದವರಿಗೂ ಹರುಡವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಬಸ್ಗಳನ್ನು ಬಂದ್ ಮಾಡಿದ್ರೂ, ಕಷ್ಟ ಪಟ್ಟು ಇನ್ಯಾವ್ದೋ ರೀತಿಯಲ್ಲಿ ಮನೆ ಸೇರುವ ಅವಿವೇಕಿತನ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇರಿ. ಮನೆ ಒಳಗೇ ಇರಿ." ಎಂದು ಮನವಿ ಮಾಡಿದ್ದಾರೆ. ಇಟಲಿಯಲ್ಲಿ ಕೊರೊನಾ ವೈರಸ್ ತೀವ್ರ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿದ್ದರೂ, ಪ್ರತಿಭಾ ಮನೆಗೆ ಹಿಂದಿರುಗದೇ ವೈರಸ್ನಿಂದ ದೇಶ ಕಾಪಾಡಲು ತೆಗೆದುಕೊಂಡ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.