ETV Bharat / state

ಕಾರವಾರ: ಅಂದ ಕಳೆದುಕೊಂಡ ರಾಕ್ ಗಾರ್ಡನ್.. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಪ್ರವಾಸಿಗರ ಬೇಸರ

author img

By

Published : Mar 10, 2022, 4:26 PM IST

Updated : Mar 10, 2022, 6:50 PM IST

rock-garden
ರಾಕ್ ಗಾರ್ಡನ್

ಕೋಟೆಯ ಮಾದರಿಯಲ್ಲಿ ಸುತ್ತಲೂ ಕಲ್ಲುಗಳನ್ನೇ ಬಳಸಿ ನಿರ್ಮಿಸಲಾಗಿದ್ದ ಈ ರಾಕ್ ಗಾರ್ಡನ್ ದೂರದಿಂದಲೇ ಪ್ರವಾಸಿಗರನ್ನ ಸೆಳೆಯುವಂತೆ ನಿರ್ಮಾಣವಾಗಿತ್ತು. ಉದ್ಘಾಟನೆಯಾದ ವರ್ಷದಲ್ಲೇ ಕೋಟ್ಯಂತರ ರೂಪಾಯಿ ಆದಾಯವನ್ನೂ ತಂದುಕೊಟ್ಟಿತ್ತು. ಆದ್ರೆ ಅದರ ಅಂದ ಹದಗೆಟ್ಟಿದ್ದು, ಇದಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಕ್ ಗಾರ್ಡನ್‌ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸರಿಯಾದ ನಿರ್ವಹಣೆ ಇಲ್ಲದೆ ತನ್ನ ಅಂದವನ್ನು ಕಳೆದುಕೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದು ಕಾಲದಲ್ಲಿ ಸಾವಿರಾರು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದ್ದ ರಾಕ್‌ ಗಾರ್ಡನ್​ನತ್ತ ಇದೀಗ ಪ್ರವಾಸಿಗರೇ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ.

ಅಂದ ಕಳೆದುಕೊಂಡ ರಾಕ್ ಗಾರ್ಡನ್

ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಕಳೆದ 2018ರಲ್ಲಿ ರಾಕ್‌ಗಾರ್ಡನ್ ನಿರ್ಮಾಣವಾಗಿತ್ತು. ಸುಮಾರು 3 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳನ್ನ ರಚಿಸಿ ಸ್ಥಾಪಿಸಲಾಗಿತ್ತು.

ಕೋಟೆಯ ಮಾದರಿಯಲ್ಲಿ ಸುತ್ತಲೂ ಕಲ್ಲುಗಳನ್ನೇ ಬಳಸಿ ನಿರ್ಮಿಸಲಾಗಿದ್ದ ಈ ರಾಕ್ ಗಾರ್ಡನ್ ದೂರದಿಂದಲೇ ಪ್ರವಾಸಿಗರನ್ನ ಸೆಳೆಯುವಂತೆ ನಿರ್ಮಾಣವಾಗಿತ್ತು. ಉದ್ಘಾಟನೆಯಾದ ವರ್ಷದಲ್ಲೇ ಕೋಟ್ಯಂತರ ರೂಪಾಯಿ ಆದಾಯವನ್ನೂ ತಂದುಕೊಟ್ಟಿತ್ತು.

ಅಂದ ಕಳೆದುಕೊಂಡ ರಾಕ್​ಗಾರ್ಡನ್​.. ಬಳಿಕ ರಾಕ್‌ ಗಾರ್ಡನ್ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಿದ್ದು, ಈ ನಡುವೆ 2020ರಲ್ಲಿ ಅಪ್ಪಳಿಸಿದ ಚಂಡಮಾರುತ ಹಾಗೂ ಕೊರೊನಾ ಕಾರಣದಿಂದಲೂ ರಾಕ್‌ಗಾರ್ಡನ್ ಬಂದ್ ಆಗಿತ್ತು. ಕೋವಿಡ್ ನಿಯಮಗಳನ್ನ ಸಡಿಲಿಕೆ ಮಾಡಿದ ಬಳಿಕವೂ ಸೂಕ್ತ ನಿರ್ವಹಣೆ ಮಾಡದ ಕಾರಣ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡಿವೆ. ಹೀಗಾಗಿ, ರಾಕ್ ಗಾರ್ಡನ್‌ ಅಂದ ಕಳೆದುಕೊಳ್ಳುವಂತಾಗಿದೆ.

ಈ ರಾಕ್‌ಗಾರ್ಡನ್ ಪ್ರಾರಂಭಗೊಂಡ 2018-19ರಲ್ಲಿ ಸುಮಾರು 2.13 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2019-20ರಲ್ಲಿ 1.48 ಲಕ್ಷ ಹಾಗೂ ಕೊರೊನಾ ಮೊದಲನೆಯ ಅಲೆಯ ಬಳಿಕ 2020-21ರಲ್ಲಿ 24 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಅಂಕಿ-ಅಂಶಗಳ ಪ್ರಕಾರ, ಕೋವಿಡ್ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿದ್ದರಿಂದ ಸಾಕಷ್ಟು ಆದಾಯವನ್ನ ತಂದುಕೊಟ್ಟಿದೆ.

ಇಷ್ಟಾದರೂ ರಾಕ್‌ಗಾರ್ಡನ್ ನಿರ್ವಹಣೆ ಮಾಡುವವರು ಕಲಾಕೃತಿಗಳಿಗೆ ಪೇಂಟಿಂಗ್ ಮಾಡದೇ, ಬೆಳೆದಿರುವ ಕಳೆಹುಲ್ಲು ತೆರವುಗೊಳಿಸದೇ ನಿರ್ಲಕ್ಷ್ಯವಹಿಸಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ರಾಕ್‌ ಗಾರ್ಡನ್ ನಿರ್ವಹಣಾ ಕೆಲಸಕ್ಕೆ ಕೆಲ ಹಳೆಯ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ. ಆದರೆ, ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ ಪ್ರವಾಸಿಗರಿಗೆ ರಾಕ್ ಗಾರ್ಡನ್ ವೀಕ್ಷಣೆಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಓದಿ: ಅಧಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ, ಜಂಬ ಪಡುವ ಅಗತ್ಯ ಇಲ್ಲ: ಸಿದ್ದರಾಮಯ್ಯ

Last Updated :Mar 10, 2022, 6:50 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.