ಕಾರವಾರ: ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆವರಣ ಗೋಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರೊಂದಿಗೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದ ಶಾಸಕಿ ರೂಪಾಲಿ ನಾಯ್ಕ ವಿರೋಧ ವ್ಯಕ್ತಪಡಿಸಿದ್ದು, ತಾವೇ ಶಂಕು ಸ್ಥಾಪನೆ ಮಾಡಿದ್ದ ಕಾಮಗಾರಿಗೆ ತಾವೇ ವಿರೋಧ ಮಾಡುವ ಮೂಲಕ ಯೂ ಟರ್ನ್ ಹೊಡೆದಿದ್ದಾರೆ.
ಜನಪ್ರತಿನಿಧಿಗಳಿಂದ ಚಾಲನೆ ಸಿಗುತ್ತಿದ್ದಂತೆಯೇ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದಿಂದ ಕಡಲ ತೀರದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಈಗಾಗಲೇ ಕಮಾನು ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆವರಣ ಗೋಡೆ ನಿರ್ಮಾಣದಿಂದ ಕಡಲತೀರದ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದ್ದು, ಕಡಲತೀರದ ಸೌಂದರ್ಯಕ್ಕೆ ಹಾನಿಯಾಗದಂತೆ ಯಥಾಸ್ಥಿತಿಯಲ್ಲಿ ಇರಲು ಬಿಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು.
ಈ ನಡುವೆ ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಕಡಲತೀರದಲ್ಲಿ ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿಯ ಬಗ್ಗೆ ಶಾಸಕಿ ನಿರ್ಮಿತಿ ಕೇಂದ್ರದ ಅಧಿಕಾರಿ ತರಾಟೆ ತೆಗೆದುಕೊಂಡಿದ್ದಾರೆ. ನಾನು ರವೀಂದ್ರನಾಥ್ ಟ್ಯಾಗೋರ್ ಪುತ್ಥಳಿ ಸ್ಥಾಪನೆಯೊಂದೇ ಎಂದು ಅದರ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ, ಆವರಣ ಗೋಡೆ ನಿರ್ಮಾಣ ಕಾಮಗಾರಿಯ ಬಗ್ಗೆ ನನಗೆ ಮಾಹಿತಿಯೇ ನೀಡಿರಲಿಲ್ಲ. ಕಡಲತೀರಕ್ಕೆ ಗೋಡೆ ಯಾತಕ್ಕಾಗಿ ಬೇಕಿದೆ? ಇಷ್ಟು ವರ್ಷ ತಡೆಗೋಡೆ ಇರಲಿಲ್ಲ. ಮೊದಲೇ ಮೇಲ್ಸೇತುವೆ ಮಾಡಿ ಕಡಲತೀರದ ಸೌಂದರ್ಯಕ್ಕೆ ಹಾನಿಯಾಗುತ್ತಿದೆ. ಈಗ ಮತ್ತೆ ಆವರಣ ಗೋಡೆ ಬೇಡ ಎಂದು ಹೇಳಿದ್ದಾರೆ.