ETV Bharat / state

ಬಡತನದಿಂದ ಹೊಟೇಲ್ ಕೆಲಸಕ್ಕೆ ಸೇರಿದ್ದ ಮಂಕಾಳ ವೈದ್ಯ: ಸಮಾಜಸೇವೆಗೆ ಅರಸಿ ಬಂದ ಮಂತ್ರಿ ಪದವಿ..!

author img

By

Published : May 27, 2023, 3:22 PM IST

mla-mankala-vaidya-took-oath-as-minister-today-at-raj-bhavan
ಬಡತನದಿಂದ ಹೊಟೇಲ್ ಕೆಲಸಕ್ಕೆ ಸೇರಿದ್ದ ಮಂಕಾಳ ವೈದ್ಯ: ಸಮಾಜಸೇವೆಗೆ ಅರಸಿ ಬಂದ ಮಂತ್ರಿ ಪದವಿ..!

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಭಟ್ಕಳ ಶಾಸಕ ಮಂಕಾಳ ವೈದ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಡತನದಿಂದ ಹೊಟೇಲ್ ಕೆಲಸಕ್ಕೆ ಸೇರಿದ್ದ ಮಂಕಾಳ ವೈದ್ಯ: ಸಮಾಜಸೇವೆಗೆ ಅರಸಿ ಬಂದ ಮಂತ್ರಿ ಪದವಿ..!

ಕಾರವಾರ: ಶಾಸಕರಾದ ಎರಡನೇ ಅವಧಿಗೆ ಭಟ್ಕಳದ ಮಂಕಾಳ ವೈದ್ಯ ಅವರು ಸಚಿವ ಸಂಪುಟ ಸೇರಿದ್ದಾರೆ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮೀನುಗಾರ ಸಮುದಾಯದಿಂದ ಈ ಬಾರಿ ಗೆದ್ದ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಕಾರಣ ಮಂತ್ರಿ ಪದವಿ ಅವರನ್ನು ಹುಡುಕಿ ಬಂದಿದ್ದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಇತ್ತ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರು ಗ್ರಾಮದ ಕೊಪ್ಪದಮಕ್ಕಿಯ ಮಂಕಾಳ ವೈದ್ಯ 1972 ಜೂನ್ 5 ರಂದು ಸುಬ್ಬ ವೈದ್ಯ ಮತ್ತು ಭಾಗಿರಥಿ ದಂಪತಿ ನಾಲ್ಕನೇ ಮಗನಾಗಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಬೈಲೂರು ಹಾಗೂ ಪ್ರೌಢಶಿಕ್ಷಣವನ್ನು ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ ಮುಗಿಸಿದ್ದ ಅವರು, ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಕಾರಣದಿಂದ ಶಿಕ್ಷಣವನ್ನು ಮುಂದುವರಿಸಲಾಗದೇ ಅರ್ಧಕ್ಕೆ ಮೊಟಕುಗೊಳಿಸಿದ್ದರು.

ಇನ್ನು ಮಂಕಾಳು ವೈದ್ಯ ಅವರ ತಂದೆ ಕೂಡ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದರು. ಕಡು ಬಡತನದಲ್ಲಿರುವ ಕಾರಣ ಶಾಲೆ ಬಿಟ್ಟ ವೈದ್ಯ ಅವರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ತೆರಳಿದ್ದರು. ಜೀವನ ನಿರ್ವಹಣೆಗಾಗಿ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ನಾಲೈದು ವರ್ಷ ಕೆಲಸ ಮಾಡಿಕೊಂಡಿದ್ದು, ಬಳಿಕ ಊರಿಗೆ ವಾಪಸ್​ ಆಗಿ ಮುರ್ಡೇಶ್ವರದಲ್ಲಿ ಹೋಟೆಲ್​​ ಉದ್ಯಮದ ಜೊತೆಗೆ ಮೀನು ವ್ಯಾಪಾರವನ್ನು ಸಹ ಪ್ರಾರಂಭಿಸಿದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬಳಿಕ ಉದ್ಯಮದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ಇದೇ ಸಮಾಜಸೇವೆ ಇದೀಗ ಇವರನ್ನ ರಾಜಕೀಯಕ್ಕೆ ಕರೆ ತಂದಿತು. 2005 ರಲ್ಲಿ ಮೊದಲ ಬಾರಿಗೆ ಮಾವಳ್ಳಿ ಜಿಲ್ಲಾ ಪಂಚಾಯತಿಯಿಂದ ಪಕ್ಷೇತರರಾಗಿ ಸ್ಪರ್ಧಿಸಿ ವೈದ್ಯ ಅವರು ಗೆಲುವು ಸಾಧಿಸಿದರು. 2010ರಲ್ಲಿ ಜಾಲಿ ಜಿಲ್ಲಾ ಪಂಚಾಯಿತಿಯಿಂದ ಎರಡನೇ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ನಿರ್ಮಾಣ: ಆ ವೇಳೆ ಕಾಂಗ್ರೆಸ್‌ ಪಕ್ಷದಿಂದ ಭಟ್ಕಳ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದರು. ಆದರೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗದ ಕಾರಣ ಜನರ ಒತ್ತಾಸೆಯಂತೆ 2013ರಲ್ಲಿ ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 10,000ಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಭಟ್ಕಳ ಇತಿಹಾಸದಲ್ಲಿಯೇ ಪಕ್ಷೇತರರೊಬ್ಬರು ಜಯಗಳಿಸಿದ್ದು ಇದೇ ಮೊದಲಾಗಿತ್ತು.

2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲನುಭವಿಸಿದರು. ಸೋತರೂ ಸಹ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರೊಂದಿಗಿನ ಒಡನಾಟ ಇರಿಸಿಕೊಂಡಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ವಿರುದ್ಧ 32 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದ್ದರು.

ಅದರಂತೆ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಂಕಾಳ ವೈದ್ಯ ಇಂದು ಬೆಂಗಳೂರಿನ ರಾಜಭವನದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಬಾರಿ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದ ಅವರನ್ನು ಕಾಂಗ್ರೆಸ್ ಸರ್ಕಾರ ತನ್ನ ಒಬಿಸಿ ಕೋಟಾದಲ್ಲಿ ಮತ್ತು ಮೀನುಗಾರಿಕಾ ಸಮುದಾಯದಿಂದ ಅವರನ್ನು ಮಂತ್ರಿ ಪದವಿಗೆ ಸ್ಥಾನ ಕಲ್ಪಿಸಿದೆ ಎನ್ನಲಾಗಿದೆ.

ಇನ್ನು ಮಂಕಾಳ ವೈದ್ಯ ಸಚಿವ ಸಂಪುಟ ಸೇರುತ್ತಿದ್ದಂತೆ ಸಮುದಾಯದ ಜನ, ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಜಿಲ್ಲಾದ್ಯಂತ ಸಂಭ್ರಮಾಚರಣೆ ನಡೆಸಿದ್ದಾರೆ. ಕಾರವಾರದಲ್ಲಿ ಮೀನುಗಾರ ಮುಖಂಡ ರಾಜು ತಾಂಡೇಲ್ ನೇತೃತ್ವದಲ್ಲಿ ಮೀನುಗಾರ ಸಮುದಾಯದವರು ಕಾಂಗ್ರೆಸ್ ಕಾರ್ಯಕರ್ತರು ನಗರದ ಸುಭಾಸ್ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ದೇವರು, ಬಸವೇಶ್ವರ, ಛತ್ರಪತಿ ಶಿವಾಜಿ, ಸತ್ಯ ನಿಷ್ಠೆಯ ಮೇಲೆ 24 ಸಚಿವರ ಪದಗ್ರಹಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.