ಕಾರವಾರ: ಸಮುದ್ರದಲ್ಲಿ ಏಡಿ ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಕುಮಟಾ ತಾಲೂಕಿನ ರಾಮನಗಿಂಡಿ ಕಡಲತೀರದ ಬಳಿ ಪತ್ತೆಯಾಗಿದೆ.
ಆನಂದ ಗಂಗಾಧರ ಭಂಡಾರಿ (31) ಮೃತಪಟ್ಟ ವ್ಯಕ್ತಿ. ಭಾನುವಾರ ಏಡಿ ಹಿಡಿಯಲು ಹೋಗಿದ್ದ ಈತ, ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಬಳಿಕ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಸಮುದ್ರತೀರದ ಬಳಿ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ತಡರಾತ್ರಿವರೆಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಕಾರಣದಿಂದ ಶವ ತೇಲಿ ಹೋಗದಂತೆ ಬಿದ್ದ ಜಾಗದ ಸುತ್ತಲೂ ಬಲೆ ಹಾಕಿ ಇಟ್ಟಿದ್ದರು.
ಇಂದು ಸ್ಥಳೀಯ ಮೀನುಗಾರರು ನಿರಂತರ ಶೋಧ ನಡೆಸಿದ ಬಳಿಕ ಶವವನ್ನು ಹೊರತೆಗಿದಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.