ETV Bharat / state

ಉತ್ತರ ಕನ್ನಡದಲ್ಲಿ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳು: 3 ತಿಂಗಳಲ್ಲಿ 42 ಮಂದಿ ಶಂಕಿತರು ಪತ್ತೆ!

author img

By ETV Bharat Karnataka Team

Published : Oct 7, 2023, 2:22 PM IST

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಉತ್ತರಕನ್ನಡದಲ್ಲಿ 3 ತಿಂಗಳಲ್ಲಿ 42 ಮಂದಿ ಡೆಂಘಿ ಶಂಕಿತರು ಪತ್ತೆಯಾಗಿದ್ದಾರೆ.

dengue
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಿ ಜ್ವರದ ಬೆನ್ನಲ್ಲೇ ಡೆಂಘಿ ಕೂಡ ಆತಂಕ ಸೃಷ್ಟಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 42 ಜನರಲ್ಲಿ ಶಂಕಿತ ಡೆಂಘಿ ಪ್ರಕರಣಗಳು ಪತ್ತೆಯಾಗಿದ್ದು, ಇದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇತ್ತೀಚೆಗೆ ಜಿಲ್ಲೆಯ ಜನರಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಕಳೆದ ಒಂದು ತಿಂಗಳಿಂದ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದೆ. ಡೆಂಘಿ ಪತ್ತೆಗಾಗಿ ಒಟ್ಟು 467 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗಿದ್ದು, ಕೆಲವರದ್ದು ನೆಗೆಟಿವ್ ಬಂದಿದೆ, ಅನೇಕರ ರಕ್ತದ ಮಾದರಿಯ ವರದಿ ಬರಬೇಕಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಘಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಯನ್ನು ಕೂಡ ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಡೆಂಘಿ ಮತ್ತು ಮಲೇರಿಯಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಲಾಗಿದ್ದು, ಸುಮಾರು 100 ಹಾಸಿಗೆಯ ಕೊಠಡಿ ತೆರೆಯಲಾಗಿದೆ. ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಡೆಂಘಿ ತಡೆಗಟ್ಟಲು ಉತ್ತರ ಕನ್ನಡ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊಳಚೆ ಮತ್ತು ನೀರು ನಿಲ್ಲುವ ತಗ್ಗು ಪ್ರದೇಶದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗಿದೆ. ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕರಪತ್ರ ಹಂಚಿಕೆ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಡೆಂಘಿ ತಡೆಗೆ ಸೂಕ್ತ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿದೆ.

ಇದನ್ನೂ ಓದಿ : ಡಂಗ್ಯೂ ಲಕ್ಷಣ ಹೊಂದಿರುವ ಜಿಕಾ ವೈರಸ್.. ರೋಗ ಹರಡದಂತೆ ತಡೆಯಲು ಸಜ್ಜಾದ ಜಿಲ್ಲಾ ಆರೋಗ್ಯ ಇಲಾಖೆ

ಡೆಂಘಿ ಜ್ವರದ ಲಕ್ಷಣಗಳೇನು? : ಜ್ವರ, ತಲೆನೋವು, ವಿಪರೀತ ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ಮೈ - ಕೈ ನೋವು, ಅತಿಸಾರ, ಹೃದಯ ಬಡಿತ ಹೆಚ್ಚಾಗುವುದು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಬರುವುದು ಡೆಂಘಿ ಜ್ವರದ ಲಕ್ಷಣಗಳಾಗಿವೆ.

ಇದನ್ನೂ ಓದಿ : Dengue cases: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ.. 6,806 ಕೇಸ್​ ಪತ್ತೆ, ಬೆಂಗಳೂರಲ್ಲೇ ಹೆಚ್ಚು!

ಡೆಂಘಿ ಕೇಸ್​ಗಳ ನಿಯಂತ್ರಣ ಹೇಗೆ? : ಸೊಳ್ಳೆಗಳನ್ನು ನಿಯಂತ್ರಿಸಬೇಕು.‌ ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಇದು ಪ್ರಮುಖವಾಗಿ ಮಾಡಬೇಕಾದ ಕೆಲಸ. ಉಳಿದಂತೆ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ.‌ ನೀರು ಶೇಖರಣೆಗೊಳ್ಳುವ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ವಾಹನಗಳ ಟಯರ್‌ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ‌ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ : ಬೆಂಗಳೂರಿನಲ್ಲೇ 4427 ಡೆಂಘಿ ಪ್ರಕರಣಗಳು ಪತ್ತೆ : ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.