ETV Bharat / state

ಇನ್ನೆರಡು ತಿಂಗಳಲ್ಲಿ ದೇಶದಲ್ಲಿ ಬಿಎಫ್‌ 7 ಕಾಣಿಸಿಕೊಳ್ಳಲಿದೆ: ಆರೋಗ್ಯ ಸಚಿವ ಸುಧಾಕರ್‌

author img

By

Published : Dec 25, 2022, 7:28 AM IST

ಕೊರೊನಾ ವೈರಸ್​ನ ಹೊಸ ತಳಿ ಒಮಿಕ್ರಾನ್ (ಸಬ್‌ವೇರಿಯಂಟ್‌) ಬಿಎಫ್‌ 7 ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈಗಿನಿಂದಲೇ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

sudhakar
ಆರೋಗ್ಯ ಸಚಿವ ಸುಧಾಕರ್‌

ಕೊರಟಗೆರೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್‌

ತುಮಕೂರು: ಚೀನಾ, ಅಮೆರಿಕ, ಜಪಾನ್​ ಸೇರಿದಂತೆ ಅನೇಕ ದೇಶಗಳಲ್ಲಿ ಕೋವಿಡ್​ 19 ವೈರಸ್​ ವ್ಯಾಪಕವಾಗಿ ಹರಡುತ್ತಿದ್ದು ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಮುಂದಿನ ಇನ್ನೆರಡು ತಿಂಗಳಲ್ಲಿ ಈ ಹೊಸ ತಳಿ ಬಿಎಫ್‌ 7 ದೇಶವನ್ನೂ ಪ್ರವೇಶಿಸಲಿದೆ ಎಂದು ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೊರಟಗೆರೆ ತಾಲೂಕಿನಲ್ಲಿ ನೂತನ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ಅಮೆರಿಕ ಮತ್ತು ಚೀನಾ ದೇಶಗಳಲ್ಲಿ ಬಿಎಫ್‌ 7 ಕಂಡುಬಂದಿದೆ. ಇದು ನಮ್ಮ ದೇಶವನ್ನು ಕೂಡ ಪ್ರವೇಶಿಸುವ ಸಾಧ್ಯತೆಗಳಿದೆ. ಹೀಗಾಗಿ, ಜಾಗೃತೆ ವಹಿಸಬೇಕು. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಬಳಕೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಕೋವಿಡ್​ ನಿಯಂತ್ರಣ ಕ್ರಮಗಳು: ರಾಜ್ಯ ಸರ್ಕಾರ ಕೂಡ ರೋಗ ಹರಡುವಿಕೆ ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೇರಳ ರಾಜ್ಯದಲ್ಲಿ ಅಲ್ಲಿನ ಸರ್ಕಾರವು ನಿಮ್ಮ ಆರೋಗ್ಯ ನಿಮ್ಮ ಬಳಿ ಇದೆ ಎಂದು ಹೇಳುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ನಿಮ್ಮ ಆರೋಗ್ಯ ನಮ್ಮ ಬಳಿ ಇದೆ ಎಂದು ಹೇಳುತ್ತಾ ಜನರ ಆರೋಗ್ಯವನ್ನು ಕಾಪಾಡುತ್ತಿದ್ದೇವೆ ಎಂದು ಹೇಳಿದರು.

ಹೊಸ ತಳಿ ಬಗ್ಗೆ ನಿರ್ಲಕ್ಷ್ಯ ಬೇಡ: ನಾವೆಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೊಸ ತಳಿ ಬಗ್ಗೆ ಆಲಸ್ಯ ಮಾಡಬಾರದು. ಪ್ರತಿಯೊಬ್ಬರೂ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಇದುವರೆಗೆ 12 ಕೋಟಿ ಲಸಿಕೆ ನೀಡಲಾಗಿದೆ. ಶೇಕಡಾ 100 ರಷ್ಟು 2 ನೇ ಡೋಸ್​ ನೀಡಲಾಗಿದೆ. ಇದೀಗ ಜನರು ಮೂರನೇ ಬೋಸ್ಟರ್ ಡೋಸ್​ ಹಾಕಿಸಿಕೊಳ್ಳಬೇಕು, ಆಗ ಮಾತ್ರ ಉಪತಳಿಯಿಂದ ರಕ್ಷಣೆ ಸಿಗುತ್ತದೆ ಎಂದರು.

ವಿದೇಶದಿಂದ ಬರುವವರಿಗೆ ಕ್ವಾರಂಟೈನ್​ ಕಡ್ಡಾಯ: ಚೀನಾ, ಜಪಾನ್​, ದಕ್ಷಿಣ ಕೊರಿಯಾ, ಹಾಂ​ಕಾಂಗ್​ ಮತ್ತು ಥಾಯ್ಲೆಂಡ್​ನಿಂದ ಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರ್​ಟಿ-ಪಿಸಿಆರ್​ ವರದಿಗೆ ಅನುಗುಣವಾಗಿ ಪಾಸಿಟಿವ್​ ಬಂದರೆ ಅಂತಹವರನ್ನು ಕ್ವಾರಂಟೈನ್​ ಮಾಡಲಾಗುವುದು ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ದೇಶದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗುತ್ತಿರುವ ಕಾರಣ ಅಗತ್ಯ ವೈದ್ಯಕೀಯ ಸಿದ್ಧತೆಗೆ ಸಹ ಸೂಚಿಸಲಾಗಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್​ ನಿರ್ವಹಣೆಗಾಗಿ ಆಮ್ಲಜನಕದ ದಾಸ್ತಾನು ಮತ್ತು ಪೂರೈಕೆಯನ್ನು ಪರಿಶೀಲಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಕೇಸ್​ ಕಡಿಮೆಯಿದ್ದರೂ ವೈದ್ಯಕೀಯ ಮೂಲಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳಿ. ಪಿಎಸ್‌ಎ ಸ್ಥಾವರಗಳ ಕಾರ್ಯನಿರ್ವಹಣೆ, ಅವುಗಳ ಪರಿಶೀಲನೆ ನಡೆಸಿ. ಆಮ್ಲಜನಕದ ನಿರಂತರ ಪೂರೈಕೆ ಮತ್ತು ಅದರ ಮರುಪೂರಣವನ್ನು ಖಚಿತಪಡಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಚೀನಾದಿಂದ ​ಬರುವವರಿಗೆ ಆರ್​ಟಿಪಿಸಿಆರ್​, ಪಾಸಿಟಿವ್​ ಬಂದರೆ ಕ್ವಾರಂಟೈನ್​: ಕೇಂದ್ರ ಸರ್ಕಾರದ ಸ್ಟ್ರಿಕ್ಟ್​​ ಆರ್ಡರ್​​​!

ಭಾರತದಲ್ಲಿ ಬಿಎಫ್​ 7 ಸೋಂಕಿತರು​ ಪತ್ತೆ: ದೇಶದಲ್ಲಿ BF 7ನ ನಾಲ್ಕು ಪ್ರಕರಣಗಳು ಕಾಣಿಸಿಕೊಂಡಿವೆ. ಗುಜರಾತ್ ಮತ್ತು ಒಡಿಶಾದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಈ ರೋಗಿಗಳು ಸೂಕ್ತ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ಕೊರೊನಾ ರೂಪಾಂತರ ತಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿ ಬೋಸ್ಟರ್ ಡೋಸ್ ಹೆಚ್ಚಿಸುವ ಕುರಿತು ತಿಳಿಸಿದೆ. ಮತ್ತು ಸಾರ್ವಜನಿಕ ಸಭೆಗಳು ಅಥವಾ ಪ್ರವಾಸಿ ತಾಣಗಳಿಗೆ ನಿರ್ಬಂಧಗಳಿಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.​

ಇದನ್ನೂ ಓದಿ: ಒಮಿಕ್ರಾನ್ ಬಿಎಫ್ 7 ತಡೆಗೆ ಭಾರತ ಸಶಕ್ತ ..ವಿಮಾನಯಾನ ನಿರ್ಬಂಧ,ಲಾಕ್​ಡೌನ್ ಹೇರುವ ಅಗತ್ಯವಿಲ್ಲ: ತಜ್ಞರ ಅಭಿಮತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.