ETV Bharat / state

ಶಿವಮೊಗ್ಗ: ಮಲೆನಾಡ ಸಾಹಿತ್ಯ, ಸಾಂಸ್ಕೃತಿಕ ಕೇಂದ್ರವಾದ ಕರ್ನಾಟಕ ಸಂಘಕ್ಕೆ ರಾಜೋತ್ಸವ ಪ್ರಶಸ್ತಿ ಗರಿ

author img

By ETV Bharat Karnataka Team

Published : Nov 3, 2023, 10:15 AM IST

Updated : Nov 3, 2023, 10:33 AM IST

ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಸಂಘಕ್ಕೆ ಈ ಬಾರಿ ರಾಜೋತ್ಸವ ಪ್ರಶಸ್ತಿ ಲಭಿಸಿರುವುದು ವಿಶೇಷ.

ಕರ್ನಾಟಕ ಸಂಘಕ್ಕೆ ರಾಜೋತ್ಸವ ಪ್ರಶಸ್ತಿ
ಕರ್ನಾಟಕ ಸಂಘಕ್ಕೆ ರಾಜೋತ್ಸವ ಪ್ರಶಸ್ತಿ

ಕರ್ನಾಟಕ ಸಂಘಕ್ಕೆ ರಾಜೋತ್ಸವ ಪ್ರಶಸ್ತಿ

ಶಿವಮೊಗ್ಗ: ಮಲೆನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಕರ್ನಾಟಕ ಸಂಘ ಕಳೆದ 94 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಸಂಘದ ನಿರಂತರ ಕನ್ನಡ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಬಾರಿ ರಾಜ್ಯ ಸರ್ಕಾರವು ಸಂಘ-ಸಂಸ್ಥೆಗಳಿಗೆ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸಂಘಕ್ಕೆ ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಕನ್ನಡವನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಿದಂತಾಗಿದೆ.

ಕರ್ನಾಟಕ ಸಂಘದ ಸ್ಥಾಪನೆ, ಸೇವೆ: ಕರ್ನಾಟಕ ಸಂಘವು ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿ 1930ರಲ್ಲಿ ಸ್ಥಾಪಿಸಲಾಯಿತು. ಇದು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ವ್ಯವಸ್ಥಿತವಾಗಿ ರೂಪಿಸಿ ಬೆಳೆದಿರುವ ಮೊಟ್ಟ ಮೊದಲ ಸಂಸ್ಥೆ. ಕರ್ನಾಟಕ ಸಂಘವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ದ.ರಾ.ಬೇಂದ್ರೆ ಅವರ ಸಲಹೆ, ಸೂಚನೆಗಳ ಮೇರೆಗೆ 8-11-1932ರಲ್ಲಿ ಪ್ರಾರಂಭವಾಯಿತು. ಆನಂದ್, ಎಸ್.ವಿ.ಕೃಷ್ಣಮೂರ್ತಿರಾವ್, ಗುರುರಾಜ್ ದೇಶಪಾಂಡೆ, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಡನಂಜಪ್ಪ, ದೇವಂಗಿ ಮಾನಪ್ಪರವರಿಂದ ಸಂಘ ಪ್ರಾರಂಭವಾಯಿತು. ಈ ಸಂಘವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟಿಸಿರುವುದು ಇದರ ಇನ್ನೊಂದು ಹೆಮ್ಮೆ.

ಸಂಘವು 1932ರಲ್ಲಿ ನೋಂದಣಿಯಾಯಿತು. ಮೊದಲು ನಗರಸಭೆ ಆವರಣದ ಸಣ್ಣ ರೂಂನಲ್ಲಿ ಚಟುವಟಿಕೆಗಳು ನಡೆಯುತ್ತಿತ್ತು. ನಂತರ ಬಿ.ಹೆಚ್ ರಸ್ತೆಯ ಕೃಷ್ಣಕೆಫೆಯ ಮೇಲ್ಭಾಗದ ರೂಂನಲ್ಲಿ ನಡೆಯುತ್ತಿತ್ತು. ಇದಾದ ನಂತರ ಹಾಲಿ ಜಾಗವನ್ನು ಶಿವಮೊಗ್ಗ ನಗರಸಭೆ ನೀಡಿತು. ಈ ಜಾಗವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಘದ ಸದಸ್ಯ ಹಸೂಡಿ ವೆಂಕಟಶಾಸ್ತ್ರಿಗಳು 30 ಸಾವಿರ ರೂ. ನೀಡಿ ಹಾಲಿ ಕಟ್ಟಡ ನಿರ್ಮಿಸಿಕೊಟ್ಟರು. 1942ರಲ್ಲಿ ಬಿ‌.ಎಂ.ಶ್ರೀ ಅವರು ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದರು. 1943ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದರು. ಕಟ್ಟಡ ನಿರ್ಮಿಸಿ ಕೊಟ್ಟಿದ್ದರಿಂದ ದ.ರಾ.ಬೇಂದ್ರೆ ಸೂಚನೆಯ ಮೇರೆಗೆ ಕಟ್ಟಡಕ್ಕೆ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನ ಎಂದು ನಾಮಕರಣ ಮಾಡಲಾಯಿತು.

ಅಂದಿನಿಂದ ಇಂದಿನವರೆಗೂ ಕರ್ನಾಟಕ ಸಂಘವು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಸಂಘದಲ್ಲಿ ರಾಜ್ಯದ ಪ್ರಸಿದ್ದ ಕವಿಗಳು ಸಾಹಿತಿಗಳು ಆಗಮಿಸಿ ತಮ್ಮ ಅನುಭವವನ್ನು ನಾಡಿಗೆ ಧಾರೆ ಎರೆದಿದ್ದಾರೆ. ಕರ್ನಾಟಕ ಸಂಘವು ಕುವೆಂಪು ಅವರ 'ನವಿಲು' ಕವನ ಸಂಕಲನ ಪ್ರಕಟಿಸಿದ್ದರು. ಕರ್ನಾಟಕ ಸಂಘವು ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಾ ಬಂದಿದೆ.

ಕರ್ನಾಟಕ ಉತ್ತಮ ಪುಸ್ತಕಗಳಿಗೆ ಬಹುಮಾನ ನೀಡುತ್ತದೆ. ಗೌರವ ಸದಸ್ಯರ ಹೆಸರಿನಲ್ಲಿ ಪ್ರತಿ ವರ್ಷ ಜನವರಿ 1 ರಿಂದ ಡಿಸೆಂಬರ್ 31ರೊಳಗೆ 12 ಪ್ರಕಾರಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ಪುಸ್ತಕಗಳಿಗೆ 10 ಸಾವಿರ ರೂ. ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡುತ್ತಿದೆ.

ಪ್ರಶಸ್ತಿಗಳ ವಿವರ: ಶ್ರೇಷ್ಢ ಕಾದಂಬರಿಗಾಗಿ 'ಕುವೆಂಪು' ಬಹುಮಾನ, ಸಣ್ಣ ಕಥೆಗಾಗಿ ಡಾ.ಯು.ಆರ್.ಅನಂತಮೂರ್ತಿ ಬಹುಮಾನ, ಅನುವಾದಿತ ಕೃತಿಗಾಗಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಬಹುಮಾನ, ನಾಟಕಕ್ಕಾಗಿ ಡಾ.ಕೆ.ವಿ.ಸುಬ್ಬಣ್ಣ ಬಹುಮಾನ, ಮಹಿಳಾ ಲೇಖಕರಿಗಾಗಿ ಶ್ರೀಮತಿ ಇಂದಿರಾ ಬಹುಮಾನ, ಪ್ರವಾಸ ಸಾಹಿತ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯ ಶಾಸ್ತ್ರಿ ಬಹುಮಾನ, ಮುಸ್ಲಿಂ ಲೇಖಕರಿಗಾಗಿ ಪಿ.ಲಂಕೇಶ್, ವಿಜ್ಞಾನ ಸಾಹಿತ್ಯಕ್ಕಾಗಿ ಹಸೂಡಿ ವೆಂಕಟಶಾಸ್ತ್ರಿ ಬಹುಮಾನ, ಕಾವ್ಯಕ್ಕಾಗಿ ಡಾ.ಜಿ.ಎಸ್ ಶಿವರುದ್ರಪ್ಪ ಬಹುಮಾನ, ಮಕ್ಕಳ ಸಾಹಿತ್ಯಕ್ಕಾಗಿ ಡಾ.ನಾ.ಡಿಸೋಜ ಬಹುಮಾನ, ಅಂಕಣ ಬರಹಕ್ಕಾಗಿ ಡಾ.ಹ.ಮಾ.ನಾಯಕ ಬಹುಮಾನ, ವೈದ್ಯ ಸಾಹಿತ್ಯಕ್ಕಾಗಿ ಡಾ.ಎಚ್.ಡಿ.ಚಂದ್ರಪ್ಪ ಗೌಡ ಬಹುಮಾನ ನೀಡಲಾಗುತ್ತಿದೆ. ಇದುವರೆಗೂ 209 ಬಹುಮಾನ ನೀಡಲಾಗಿದೆ.

ನಾಡುನುಡಿಗೆ ಸೇವೆ ಸಲ್ಲಿಸಿದವರಿಗೆ ಜೀವಮಾನ ಸಾಧನೆಗಾಗಿ ಡಾ.ಸಂಬಾ ಜೋಶಿ ಸಂಶೋಧನಾ ಪ್ರಶಸ್ತಿ, ಡಾ.ದ.ರಾ.ಬೇಂದ್ರೆ ಪ್ರಶಸ್ತಿ, ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವಸ್ತು ವಿಜ್ಞಾನ ಪ್ರಶಸ್ತಿ, ತೀ.ನಂ ಶ್ರೀ ವಿಮರ್ಶೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ದೊರೆತ ಪ್ರಶಸ್ತಿಗಳು: ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಂಪ್ಲಿ ಕರ್ನಾಟಕ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿ, ಪ್ರೊ.ಎಂ.ರಾಮಚಂದ್ರ ಅಭಿನಂದನಾ ಸಮಿತಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಡಾ.ನಾ.ಮೋಗೆಸಾಲೆ ಪ್ರಶಸ್ತಿ, ಮೈಸೂರಿನಲ್ಲಿ ನಡೆದ ಪ್ರಕಾಶಕರ ಸಮ್ಮೇಳನದಲ್ಲಿ ಗೌರವ ಸನ್ಮಾನ‌ ಲಭಿಸಿದೆ. 60 ವರ್ಷದ ಸಂಭ್ರಮಕ್ಕೆ ಶಿವಮೊಗ್ಗ ಕರ್ನಾಟಕ ಸಂಘ ಗ್ರಂಥ ಪ್ರಕಟಿಸಿದೆ.

ಪ್ರಚಾರ ಸಾಹಿತ್ಯವಾಗಿ 'ಮಾಹಿತಿ', ವಾರ್ತಾ ಪತ್ರವನ್ನು ಹಾಗೂ ನವಿಲು ಹೆಜ್ಜೆ‌ ವಾರ್ತಾ ಪತ್ರವನ್ನು ಪ್ರಕಟಿಸುತ್ತಿದೆ. ಕರ್ನಾಟಕ ಸಂಘವು ಅನೇಕ ಯುವ ಸಾಹಿತಿಗಳಿಗೆ ಪ್ರೇರಣೆಯಾಗಿದೆ. ಇಂತಹ ಕನ್ನಡ ಸಾಹಿತ್ಯ ಉಳಿಗಾಗಿ ನೀಡಿದ ಸೇವೆ ಗುರುತಿಸಿ ರಾಜ್ಯ ಸರ್ಕಾರ ನೀಡಿರುವ ಪ್ರಶಸ್ತಿ ಪ್ರಶಸ್ತಿ ಫಲಕ, ಬಂಗಾರದ ಪದಕ ಹಾಗೂ 5 ಲಕ್ಷ ರೂ. ನಗದು ಒಳಗೊಂಡಿದೆ.

ಕರ್ನಾಟಕ ಸಂಘದ ಪರವಾಗಿ ಅಧ್ಯಕ್ಷ ಸುಂದರೇಶ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಮ್ಮ ಕರ್ನಾಟಕ ಸಂಘಕ್ಕೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ. ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವೈಚಾರಿಕವಾಗಿ ಕರ್ನಾಟಕ ಸಂಘವು ಪ್ರಸಿದ್ದಿ ಪಡೆದಿದೆ. ಕಳೆದ 94 ವರ್ಷಗಳಿಂದ ಸಂಘವು ಸರ್ಕಾರದಿಂದ ಇದುವರೆಗೂ ಯಾವುದೇ ಅನುದಾನ ಪಡೆದಿಲ್ಲ. ಯಾರಿಂದಲೂ ದೇಣಿಗೆ ಪಡೆದಿಲ್ಲ. ಕರ್ನಾಟಕ ಸಂಘವು ತನ್ನದೇ ಆದಾಯ ಮೂಲಗಳಿಂದ ಹಣವನ್ನು ಕ್ರೋಢೀಕರಿಸಿ ಸಾಹಿತ್ಯವನ್ನು ಬೆಳೆಸಲು ಪರಿಶ್ರಮ ಪಡುತ್ತಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಆಶಾಲತಾ ಮಾತನಾಡಿ, ತಿಂಗಳ ಅತಿಥಿ ಕಾರ್ಯಕ್ರಮ, ಪುಸ್ತಕ ಬಹುಮಾನವನ್ನು ನಮ್ಮ ಸಂಘ ಹಿರಿಯರ ಹೆಸರಿನಲ್ಲಿ ನೀಡುತ್ತಾ ಬಂದಿದೆ. ಅಲ್ಲದೆ, ಕಾವ್ಯ, ವಿಮರ್ಶೆ, ಇತಿಹಾಸ, ಸಂಶೋಧನೆಗೆ ಒಂದು ವರ್ಷದಲ್ಲಿ ಎರಡು ಜೀವಮಾನ ಸಾಧನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಂಶೋಧನೆಗಾಗಿ ಸಾಂಬಾ ಜೋಷಿಯವರ ಹೆಸರಿನಲ್ಲಿ, ಎರಡನೇಯದಾಗಿ ಕಾವ್ಯಕ್ಕಾಗಿ ಚಂಪಾ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಎಲ್ಲಾ ಪ್ರಶಸ್ತಿಗಳ ಜೊತೆಗೆ 25 ಸಾವಿರ ರೂ. ನಗದು ಬಹುಮಾನವನ್ನೂ ಸಹ ನೀಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕುವೆಂಪು ಸೇರಿದಂತೆ ನಮ್ಮ ಗೌರವ ಸದಸ್ಯರ ಹೆಸರಿನಲ್ಲಿ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕುವೆಂಪು ವಿವಿಯ ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ರ‍್ಯಾಂಕ್​ ಗಳಿಸಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುತ್ತದೆ. ಹಲವಾರು ವರ್ಷಗಳಿಂದ ಪುಸ್ತಕ ಪ್ರದರ್ಶನ ನಡೆಸಿ, ನನ್ನ ನೆಚ್ಚಿನ ಪುಸ್ತಕ ಎಂಬ ಪ್ರಶಸ್ತಿ ನೀಡಲಾಗುತ್ತಿದೆ.

ಶಾಲಾ ವಿದ್ಯಾರ್ಥಿಗಳಿಗೆಗಾಗಿ ಕಾವ್ಯ, ಗದ್ಯದ ಕುರಿತು ಸ್ಪರ್ಧೆಯನ್ನು ನಡೆಸಲಾಗುತ್ತದೆ. ಸುಬ್ಬಣ್ಣನವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಭಾವಗೀತೆ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಅನೇಕ ಸಾಹಿತ್ಯ, ಕಲೆಗಳಿಗೆ ಸಂಬಂಧಿಸಿದಂತೆ ನಾಟಕದ ಕುರಿತು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಲ್ಲದೇ ಸಂಘವು ತನ್ನದೆ ಆದ ಗ್ರಂಥಾಲಯ ಹೊಂದಿದೆ. ಇದರಲ್ಲಿ 50 ಸಾವಿರ ಪುಸ್ತಕಗಳಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ನಿರುದ್ಯೋಗ ನಿವಾರಣೆಗೆ ಶ್ರಮಿಸುವಂತೆ ಸಿಎಂಗೆ ನಿವೃತ್ತ ನ್ಯಾ.ಗೋಪಾಲಗೌಡ ಮನವಿ

Last Updated :Nov 3, 2023, 10:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.