ETV Bharat / state

ಶಿವಮೊಗ್ಗ: ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ, ಇಬ್ಬರ ಸೆರೆ

author img

By ETV Bharat Karnataka Team

Published : Dec 29, 2023, 8:34 PM IST

ಜೈಲಿನೊಳಗೆ ಗಾಂಜಾ ಮತ್ತು ಮೊಬೈಲ್​ ಎಸೆಯಲು ಬಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ
ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ

ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಹಿಂಭಾಗದಿಂದ ಮಾದಕ ವಸ್ತು ಮತ್ತು ಮೊಬೈಲ್​ ಎಸೆಯಲು ಬಂದಿದ್ದ ಇಬ್ಬರು ಆರೋಪಿಗಳನ್ನು ಕಾರಾಗೃಹ ಸಿಬ್ಬಂದಿ ಬಂಧಿಸಿದ್ದಾರೆ.

ಘಟನೆಯ ಪೂರ್ಣ ವಿವರ: ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಕಾರಾಗೃಹದ ಪಶ್ಚಿಮ ಗೋಡೆಯ ಸಮೀಪ ಅನುಮಾನಾಸ್ಪದವಾಗಿ ಇಬ್ಬರು ನಿಂತಿದ್ದನ್ನು ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ವಾಕಿಟಾಕಿ ಮೂಲಕ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಪಡೆದ ಎಸ್​ಐ ಪುನೀತ್ ಹಾಗೂ ಕೇಂದ್ರ ಕಾರಾಗೃಹದ ಹೆಡ್​ ವಾರ್ಡನ್​ ಗಜೇಂದ್ರ.ಎಸ್​ ಆರೋಪಿಗಳ ಚಲನವಲನವನ್ನು ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ್ದಾರೆ.

ಬಳಿಕ ಆರೋಪಿಗಳ ಮೇಲೆ ಸಂಶಯ ಖಾತರಿಯಾಗುತ್ತಲೇ ಎಸ್​ಐ ಪುನೀತ್ ಹಾಗೂ ಮುಖ್ಯ ವೀಕ್ಷಕ ಗಜೇಂದ್ರ ಆರೋಪಿಗಳ ಬಳಿ ತೆರಳಿದ್ದಾರೆ. ಈ ವೇಳೆ ಆರೋಪಿಗಳು ತಾವು ತಂದಿದ್ದ ಪ್ಯಾಕೆಟ್​ಗಳನ್ನು ಅಲ್ಲಿಯೇ ​ಬಿಸಾಡಿ ಸಿದ್ದರಗುಡಿಯ ಕಡೆಗೆ ಓಡಿದ್ದಾರೆ. ಆರೋಪಿಗಳನ್ನು ಬೆನ್ನಟ್ಟಿದ ಕಾರಾಗೃಹ ಸಿಬ್ಬಂದಿ ಸುಮಾರು ದೂರ​ ಓಡಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಬಳಿಕ ಬಿಸಾಡಿದ್ದ ಪ್ಯಾಕೆಟ್​ಗಳನ್ನು ಹುಡುಕಿ ಪರಿಶೀಲಿಸಿದಾಗ ಗಾಂಜಾ ಹಾಗೂ ಮೊಬೈಲ್​ ಪತ್ತೆಯಾಗಿದೆ. 29 ಗಾಂಜಾ ಪ್ಯಾಕೆಟ್​ಗಳು ಹಾಗೂ ಒಂದು ನೋಕಿಯಾ ಕೀ ಪ್ಯಾಡ್ ಮೊಬೈಲ್ ಫೋನ್, 2 ನೋಕಿಯಾ ಮೊಬೈಲ್ ಚಾರ್ಜರ್, ಒಂದು ಡಾಟಾ ಕೇಬಲ್ ಪತ್ತೆಯಾಗಿದೆ. ಅಕ್ರಮವಾಗಿ ಜೈಲಿನೊಳಗೆ ಇದನ್ನೆಲ್ಲಾ ತಲುಪಿಸಲು ಯೋಜಿಸಿದ್ದ ಶಾರು ಅಲಿಯಾಸ್ ಶಾರುಕ್ ಹಾಗೂ ಕಲೀಲ್ ಎಂಬ ಆರೋಪಿಗಳು ಅವರು ತಂದಿದ್ದ ಮಾಲುಸಮೇತ ಜೈಲು​ ಸಿಬ್ಬಂದಿ ತುಂಗಾನಗರ ​ಪೊಲೀಸರಿಗೆ ಒಪ್ಪಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಾಗೃಹದೊಳಗೆ ಗಾಂಜಾ ಕೊಂಡೊಯ್ಯಲು ಯತ್ನ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಜೈಲಿಗೆ ಹಿಂದಿರುಗುವಾಗ ಕೈದಿಯೊಬ್ಬ ಗಾಂಜಾ ಬಚ್ಚಿಟ್ಟುಕೊಂಡು ಕಾರಾಗೃಹದೊಳಗೆ ಕೊಂಡೊಯ್ಯಲು ಯತ್ನಿಸಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ಮೈಸೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಸಂತೇಬೆನ್ನೂರು ಪುಷ್ಕರಣಿ ಬಳಿ ಗಾಂಜಾ ಮಾರಾಟ: ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.