ETV Bharat / state

ದೇವೇಗೌಡರಿಗೆ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ಹಂಬಲ: ಹೆಚ್​ಡಿಕೆ

author img

By

Published : Feb 27, 2023, 8:05 PM IST

Updated : Mar 17, 2023, 7:14 PM IST

hd kumaraswamy
ಹೆಚ್.ಡಿ.ಕುಮಾರಸ್ವಾಮಿ

ಹಾಸನ ಟಿಕೆಟ್ ವಿಚಾರವಾಗಿ ಉಂಟಾಗಿರುವ ಗೊಂದಲ ಬಗೆಹರಿಸಲು ದೇವೇಗೌಡರು ಮಧ್ಯಸ್ಥಿಕೆ ವಹಿಸುವ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

ಬಮೂಲ್ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿ

ರಾಮನಗರ: ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೋರಾಟವು ಅಜರಾಮರವಾಗಿದೆ. ಪ್ರಸ್ತುತ ಅವರು ಯಾವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಮಟ್ಟಿಗೆ ಇಲ್ಲ. ಅವರ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಂದೆಯ ಹಿಂದಿನ ದಿನಗಳನ್ನು ನೆನೆದು ಭಾವುಕರಾದರು.

ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಭಾಗವಹಿಸಿ ಬೃಹತ್ ವೇದಿಕೆಯಲ್ಲಿ ಮಾತನಾಡಿದ ಅವರು, ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದವಿದೆ. ಈ ಬಾರಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಖಚಿತ. ನಾನೇ ಮುಖ್ಯಮಂತ್ರಿ ಆಗಲಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯಾದ್ಯಂತ 73ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 15 ರಿಂದ 18 ಗಂಟೆಗಳ ಕಾಲ ನಿರಂತರ ಪಂಚರತ್ನ ಯಾತ್ರೆ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದರು.

ಜೆಡಿಎಸ್ ಬರೋದು ಪಕ್ಕಾ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರಲಿದ್ದು, 120 ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂಬ ಗುರಿ ಇದೆ. ನನಗೆ ಈಗಾಗಲೇ ಎರಡು ಬಾರಿ ಹೃದಯ ಬೈಪಾಸ್ ಸರ್ಜರಿ ಆಗಿದೆ. ಪಂಚಯಾತ್ರೆ ಪ್ರಾರಂಭದ ದಿನದಿಂದಲೂ ಮಾಂಸಾಹಾರ ತಿನ್ನುವುದನ್ನು ಬಿಟ್ಟಿದ್ದೇನೆ. ಈಗಾಗಲೇ 75 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಓಡಾಡಿದ್ದೇನೆ. ನಾನು ಹೋದ ಕಡೆ ಸಾವಿರಾರು ಸಂಖ್ಯೆಯಲ್ಲಿ ಜನ ನನ್ನ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಸಿಪಿವೈ ವಿರುದ್ಧ ವಾಗ್ದಾಳಿ: ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಳೆದ 20 ವರ್ಷಗಳ ಕಾಲ ಶಾಸಕರಾಗಿದ್ದರು. ಅವರು ಕ್ಷೇತ್ರದಲ್ಲಿ ಒಳ್ಳೆಯ ಕಲಸ ಮಾಡಿದ್ರೆ ಈಗ ಸೀರೆ ಹಂಚುವ ಅವಶ್ಯಕತೆ ಇಲ್ಲ. ನಮ್ಮ ಕ್ಷೇತ್ರದ ಜನತೆ ಒಂದು ಸೀರೆಗಾಗಿ ತಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ. ನಮ್ಮ ಜನರು ಸ್ವಾಭಿಮಾನಿಗಳು. ಇಗ್ಗಲೂರಿನಲ್ಲಿ ದೇವೇಗೌಡರು ಡ್ಯಾಂ ಕಟ್ಟದಿದ್ದರೆ ಕ್ಷೇತ್ರಕ್ಕೆ ಎಲ್ಲಿ ನೀರಾವರಿ ಮಾಡಲು ಸಾಧ್ಯವಾಗುತ್ತಿತ್ತು. ಈಗ ಕ್ಷೇತ್ರದಲ್ಲಿ ನೀರಾವರಿ ಹರಿಕಾರ, ಭಗೀರಥ ಅಂತಾ ಎಂದು ಬರೆದುಕೊಂಡಿದ್ದಾರೆ. ಈಗ ಸತ್ತೆಗಾಲ ಯೋಜನೆ ರೂಪಿಸಿ, ಇಡೀ ಜಿಲ್ಲೆಗೆ ಶಾಶ್ವತವಾಗಿ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಸ್ತುತ ಸ್ವಾಭಿಮಾನದ ಹೆಸರಿನಲ್ಲಿ ಮಾಜಿ ‌ಸಚಿವರು ನಡಿಗೆ ಆರಂಭಿಸಿದ್ದಾರೆ. ಅವರಿಗೆ ಸ್ವಾಭಿಮಾನ ಇಲ್ಲ, ನಡಿಗೆ ಬೇರೆ ಎಂದು ಲೇವಡಿ ಮಾಡಿದ ಹೆಚ್​ಡಿಕೆ, ನಾನು ಕೂಡ ಚನ್ನಪಟ್ಟಣದಲ್ಲಿ ನಿಲ್ಲಬೇಕು ಅಂತ ಬರಲಿಲ್ಲ. ಅಂದು ನನ್ನ ಕಾರ್ಯಕರ್ತರು ಬಲವಂತವಾಗಿ ನಾವೇ ಚುನಾವಣೆ ಮಾಡುತ್ತೇವೆಂದು ಹೇಳಿದಾಗ ನಾನು ಇಲ್ಲಿ ಚುನಾವಣೆಗೆ ನಿಂತಿರುವೆ. ಅದನ್ನು ಬಿಟ್ಟು ನಾನು ಎಂದಿಗೂ ಕೂಡ ಈ ಕ್ಷೇತ್ರದಲ್ಲಿ ನಿಲ್ಲುವ ಆಸೆಯನ್ನು ಇಟ್ಟುಕೊಂಡಿರಲಿಲ್ಲ ಎಂದರು.

ಅಧಿಕಾರಿಗಳ ವಿರುದ್ಧ ಗರಂ: ಭಾಷಣ ಪ್ರಾರಂಭಿಸಿದ ತಕ್ಷಣವೇ ಸಹಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಹೆಚ್​ಡಿಕೆ ಗರಂ ಆದರು. ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ ಕಾರ್ಯಕ್ರಮ ನಡೆಸುವುದಕ್ಕೆ ಸಹಕಾರಿ ಇಲಾಖೆ ಅಧಿಕಾರಿಗಳು ತೀರಾ ತೊಂದರೆ ಕೊಟ್ಟಿದ್ದು, ಸಹಕಾರ ಕ್ಷೇತ್ರದ ಅಧಿಕಾರಿಗಳಾದ ಎಆರ್ ಹಾಗೂ ಡಿಆರ್ ಗಳನ್ನು ನೋಡಿದ್ದೇನೆ. ಇಲಾಖೆಯಲ್ಲಿ 50 ಲಕ್ಷ ಹಾಗೂ ಒಂದು ಕೋಟಿ ಲೂಟಿ ಮಾಡಿದವರಿಗೆ ಹೇಳುವವರು ಕೇಳುವವರು ಇಲ್ಲ. ಸಹಕಾರ ಇಲಾಖೆಯಲ್ಲಿ ಸರಿಯಾದ ಕಾನೂನು ಇಲ್ಲ. ನಿಮ್ಮ ಕಳ್ಳಾಟ ಇನ್ನು ಎರಡು ತಿಂಗಳು ಅಷ್ಟೆ. ನಾನು ಯಾವತ್ತೂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಕೆಲ ಅಧಿಕಾರಿಗಳು ಬೆಳಗ್ಗೆ ನಮ್ಮ ಮನೆಗೆ ಬರುತ್ತಾರೆ, ರಾತ್ರಿಯಾದ್ರೆ ಬೇರೆಯವರಿಗೆ ದುಡ್ಡು ಕೊಡುತ್ತಾರೆ. ಅದೆಲ್ಲವೂ ಕೂಡ ಗೊತ್ತಿದೆ‌. ಇದಕ್ಕೆಲ್ಲ ಕಡಿವಾಣ ಹಾಕುವ ಕಾಲ ಸನ್ನಿತವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹೆಚ್ಡಿಕೆ ಗರಂ ಆದರು.

ಇದು ನನ್ನ ಕೊನೆ ಚುನಾವಣೆ: ಚನ್ನಪಟ್ಟಣ ಕ್ಷೇತ್ರ ಬಿಟ್ಟು ನಾನು ಬೇರೆಡೆ ಸ್ಪರ್ಧೆ ಮಾಡೋಲ್ಲ. ಇದೇ ನನ್ನ ಕೊನೆ ಚುನಾವಣೆಯಾಗಿದೆ. ಮುಂದಿನ 2028ಕ್ಕೆ ಈ ಕ್ಷೇತ್ರದಿಂದ ಕಾರ್ಯಕರ್ತರನ್ನ ನೀವೇ ಹುಡುಕಿಕೊಳ್ಳಿ. ಮುಂದೆ ರಾಜಕೀಯ ಯಾವ ಹಂತಕ್ಕೆ ಬರಲಿದೆ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ಬಳಿಕ ನಾನು ಹಾಸನದಲ್ಲಿ ಹುಟ್ಟಿರಬಹುದು. ಆದರೆ, ರಾಮನಗರ ಕ್ಷೇತ್ರ ನನಗೆ ರಾಜಕೀಯವಾಗಿ ಜನ್ಮ ನೀಡಿದೆ. ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಗಳಾಗಿ ಅಭಿವೃದ್ಧಿ ಕಾಣುವ ಬಯಕೆ ಇದೆ. ಅದರಂತೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.

24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ: ನಾನು ಕಳೆದ ಚುನಾವಣೆಯಲ್ಲಿ ಎಂದಿಗೂ ಕೂಡ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆ ಅಂತಾ ಹೇಳಿರಲಿಲ್ಲ. ನನ್ನ ಪ್ರಣಾಳಿಕೆಯಲ್ಲೂ ಕೂಡ ಇರಲಿಲ್ಲ. ಹೀಗಿರುವಾಗ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದರ ಜೊತೆಗೆ ಮಹಿಳೆಯರಿಗೆ ಮೋಸ ಮಾಡಿದ್ದೇನೆ ಎಂಬ ಅಪ ಪ್ರಚಾರ ಮಾಡಲಾಗುತ್ತಿದೆ. 2023 ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ 24 ತಾಸಿನೊಳಗೆ ಸ್ತ್ರೀ ಶಕ್ತಿ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: ಕುಟುಂಬಕ್ಕಿಂತ ಕಾರ್ಯಕರ್ತರು ನನಗೆ ಮುಖ್ಯ: ಹಾಸನದಲ್ಲಿ ಹೆಚ್​ಡಿಕೆ ಹೇಳಿಕೆ

ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಪ್ರತಿಭಟನೆ ಮಾಡಿದ ವಿಚಾರದ ಕುರಿತು ಮಾತನಾಡಿ, ಎಲ್ಲರೂ ಕೂಡ ಪ್ರತಿಭಟನೆ ಮಾಡ್ತಾರೆ. ನಿನ್ನೆ ಸ್ವರೂಪ್ ಬೆಂಬಲಿಗರು ಮಾಡಿದ್ರು. ಇವತ್ತು ಭವಾನಿ ರೇವಣ್ಣ ಪರವಾಗಿ ಮಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಣಯ ಮಾಡಲಾಗುತ್ತದೆ. ಎಲ್ಲರಿಗೂ ಟಿಕೆಟ್ ಕೊಡೋದಕ್ಕೆ ಆಗಲ್ಲ, ಅಭ್ಯರ್ಥಿಯಾಗಬೇಕು ಅಂತ ಆಸೆ ಇದ್ದವರು ಈ ರೀತಿ ಒತ್ತಡ ಹಾಕೋದು ಸಹಜ ಎಂದು ಹೇಳಿದರು.

Last Updated :Mar 17, 2023, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.