ETV Bharat / state

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಸ್ನೇಹಿತರಿಬ್ಬರ ಬಂಧನ

author img

By ETV Bharat Karnataka Team

Published : Dec 17, 2023, 12:09 PM IST

Updated : Dec 17, 2023, 12:45 PM IST

ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಸ್ನೇಹಿತರಿಬ್ಬರನ್ನು ಲಿಂಗಸುಗೂರು ಪೊಲೀಸರು ಬಂಧಿಸಿದ್ದಾರೆ.

raichur
ರಾಯಚೂರು

ರಾಯಚೂರು : ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಲಿಂಗಸುಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದ ಶಿವಪುತ್ರ ಅಲಿಯಾಸ್ ಶಿವು, ಅಭಿಷೇಕ ಅಲಿಯಾಸ್ ಅಭಿ ಎಂಬುವರು ಸ್ನೇಹಿತ ಶರಣಬಸವ (21) ನನ್ನು ಕೊಲೆ ಮಾಡಿದ್ದರು.

ಪ್ರಕರಣದ ಹಿನ್ನೆಲೆ : ಶರಣಬಸವ, ಅಭಿಷೇಕ, ಶಿವಪುತ್ರ ಈ ಮೂವರು ಸ್ನೇಹಿತರಾಗಿದ್ದರು. ಇವರು ಆಗಾಗ ಜೂಜಾಟ ಆಡುತ್ತಿದ್ದರು. ಹಣ ಕಳೆದುಕೊಂಡಾಗ ಮತ್ತು ಗೆದ್ದಾಗ ಪರಸ್ಪರ ಜಗಳವಾಡುತ್ತಿದ್ದರು. ಮೊಹರಂ ಹಾಗೂ ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಸೇರಿದಾಗ ನಾ ಮೇಲು, ನೀ ಮೇಲು ಎಂದು ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದರು. ಆದರೆ, ಈ ಸಣ್ಣಪುಟ್ಟ ಜಗಳಗಳಿಂದಲೇ ದ್ವೇಷದ ಭಾವನೆ ಮೂಡಿ ಕೊಲೆ ಮಾಡುವ ಹಂತಕ್ಕೆ ತಿರುಗಿದೆ.

ಅಕ್ಕಲಕೋಟಿ ಚಿಕ್ಕರೇವಣ್ಣ ಸಿದ್ದೇಶ್ವರರ ಪುಣ್ಯತಿಥಿ ಸ್ಮರಣೆ ಹಿನ್ನೆಲೆಯಲ್ಲಿ 2023 ರ ಅ. 5 ರಂದು ರಾತ್ರಿ ವೇಳೆ ಗುರುಸ್ವಾಮಿಯೊಂದಿಗೆ ಶರಣಬಸವ ಬ್ಯಾನರ್‌ಗಳನ್ನು ಕಟ್ಟುತ್ತಿದ್ದ. ಈ ಸಮಯದಲ್ಲಿ ಶಿವಪುತ್ರ ಹಾಗೂ ಅಭಿಷೇಕ ಗುರುಸ್ವಾಮಿಗೆ ಕರೆ ಮಾಡಿ ಗ್ರಾಮದ ಸಾಲಿಗುಡಿ ಹತ್ತಿರ ತನ್ನ ಮಗನನ್ನು ಕಳಿಸುವಂತೆ ಹೇಳಿದ್ದಾರೆ. ರಾತ್ರಿ 10.46 ರ ಸುಮಾರಿಗೆ ಶರಣಬಸವನನ್ನು ಕೊಲೆ ಮಾಡಿ, ತಮ್ಮ ಮೇಲೆ ಆರೋಪ ಬರದಂತೆ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಶಾಲಾ ಕೊಠಡಿಯ ಕಿಟಕಿಗೆ ತುಂಬು ತೋಳಿನ ಟಿ ಶರ್ಟ್‌ನೊಂದಿಗೆ ನೇಣು ಬಿಗಿದು ನೇತು ಹಾಕಲಾಗಿತ್ತು.

ಇದನ್ನೂ ಓದಿ : ಚಿಕ್ಕಮಗಳೂರು : ಊಟದಲ್ಲಿ ಸೈನೈಡ್ ಬೆರೆಸಿ ​​​ಪತ್ನಿಯ ಕೊಲೆ.. ಪತಿ ಬಂಧನ

ಈ ಕುರಿತು ಮೃತನ ತಾಯಿ ಲಿಂಗಸುಗೂರು ಠಾಣೆಗೆ ದೂರು ನೀಡಿದ್ರು. ಇದಕ್ಕೂ ಮುಂಚೆ ಆತ್ಮಹತ್ಯೆ ಪ್ರಕರಣವೆಂದು ಕೇಸ್​ ದಾಖಲಾಗಿತ್ತು. ಆದರೆ, ಮೃತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲಿಂಗಸುಗೂರು ಉಪವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್ ಪುಂಡಲೀಕ ಎಂ. ಪಟಾತರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ನಡೆಸಲಾಗಿದ್ದು, 24 ಗಂಟೆಯೊಳಗೆ ಆರೋಪಿಗಳಿಬ್ಬರನ್ನು ಬಂಧಿಸುವ ಮೂಲಕ ಪ್ರಕರಣ ಭೇದಿಸಲಾಗಿದೆ.

Last Updated :Dec 17, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.