ETV Bharat / state

ಬತ್ತಿದ ಕಬಿನಿ : ಹಿನ್ನೀರಿನಲ್ಲಿ ಕಾಣಿಸುತ್ತಿವೆ ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳು

author img

By

Published : Jul 3, 2023, 8:12 PM IST

ಕಬಿನಿ ಹಿನ್ನೀರು
ಕಬಿನಿ ಹಿನ್ನೀರು

10 ವರ್ಷಗಳ ಕಬಿನಿಯ ಒಡಲು ಬರಿದಾಗುತ್ತಿದ್ದು, ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿವೆ.

ಮೈಸೂರು : ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು. ಬಹುತೇಕ ಜಲಾಶಯಗಳು 10 ವರ್ಷಗಳ ನಂತರ ಖಾಲಿಯಾಗಿವೆ. ಮತ್ತೊಂದೆಡೆ ಜಲಾಶಯಗಳ ಹಿನ್ನೀರಿನಲ್ಲಿ ಇರುವ ದೇವಾಲಯಗಳು ಈಗ ಗೋಚರಿಸುತ್ತಿವೆ‌. ಇದಕ್ಕೆ ನಿದರ್ಶನ ಎಂಬಂತೆ 10 ವರ್ಷಗಳ ನಂತರ ಮೈಸೂರು ಜಿಲ್ಲೆಯ ಬೀಚನಹಳ್ಳಿ ಸಮೀಪದಲ್ಲಿರುವ, ಕಬಿನಿ ಡ್ಯಾಂನಲ್ಲಿ ನೀರು ಸಂಪೂರ್ಣ ಕಡಿಮೆ ಆಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ, ಐತಿಹಾಸಿಕ, ಪುರಾಣ ಪ್ರಸಿದ್ಧ ದೇವಾಲಯಗಳ ಕುರುಹುಗಳು ಪತ್ತೆಯಾಗಿವೆ.

ಕೀರ್ತಿಪುರ ಗ್ರಾಮದ ಅರಳಿ ಮರದ ಬುಡ
ಕೀರ್ತಿಪುರ ಗ್ರಾಮದ ಅರಳಿ ಮರದ ಬುಡ

ಈ ಕುರುಹುಗಳು ಇತಿಹಾಸದ ಪುನ್ನಾಟ ಸಾಮ್ರಾಜ್ಯದ ಇತಿಹಾಸವನ್ನು ಹೇಳುತ್ತಿವೆ. ಹೌದು, ಎಚ್.ಡಿ.ಕೋಟೆ ಹಾಗೂ ಸುತ್ತಮುತ್ತಲಿನ ಭಾಗಗಳನ್ನು ಪ್ರಾಚೀನ ಕಾಲದಲ್ಲಿ ಪುನ್ನಾಟ ರಾಜ್ಯ ಎನ್ನಲಾಗುತ್ತಿತ್ತು. ಅದರ ರಾಜಧಾನಿ ಕೀರ್ತಿಪುರವು ಈಗಿನ ತೆರಣಿಮುಂಟಿ ಕಿತ್ತೂರು ಗ್ರಾಮ ಆಗಿತ್ತು. ಎಂಬುದು ಸ್ಥಳದ ಇತಿಹಾಸವಾಗಿದೆ.

ಪುರಾತನ ದೇವಾಲಯದ ಕುರುಹುಗಳು
ಪುರಾತನ ದೇವಾಲಯದ ಕುರುಹುಗಳು

ಈ ಭಾಗದಲ್ಲಿದ್ದ ಪ್ರಾಚೀನ ದೇವಾಲಯಗಳಾದ ಮಾಕಾಳಮ್ಮ ದೇವಾಲಯ, ನಾಗದೇವತೆಗಳ ದೇವಾಲಯ, ಭವಾನಿ ಶಂಕರ ದೇವಾಲಯಗಳು ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಕಬಿನಿ ಹಿನ್ನೀರಿನ ನೀರಿನ ಮಟ್ಟ ಕುಸಿಯುತ್ತಿದ್ದಂತೆ ದೇವಾಲಯಗಳು ಕುರುಹುಗಳು ಗೋಚರಿಸುತ್ತಿವೆ. 2013 ರಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಈ ದೇವಾಲಯಗಳು ಪೂರ್ಣಪ್ರಮಾಣದಲ್ಲಿ ಕಾಣಿಸಿದ್ದವು.

ಮಾಕಾಳಮ್ಮ ದೇವಾಲಯದ ಮೇಲ್ಭಾಗ
ಮಾಕಾಳಮ್ಮ ದೇವಾಲಯದ ಮೇಲ್ಭಾಗ

ಇದಾದ 10 ವರ್ಷಗಳ ಬಳಿಕ ಈಗ ಮತ್ತೇ ಕಬಿನಿಯ ಒಡಲು ಬರಿದಾಗುತ್ತಿದ್ದು, ಪಾಲಕಾಡು ಸೋಮಾಚಾರಿ ಕಟ್ಟಿದನು ಎನ್ನಲಾದ ಮಾಕಾಳಮ್ಮ ದೇವಾಲಯ, ಪುರಾತನ ಭವಾನಿಶಂಕರ ದೇವಾಲಯ, ನಾಗದೇವತೆಗಳ ದೇವಾಲಯಗಳ ಕುರುಹುಗಳು ಕಬಿನಿ ಹಿನ್ನೀರಿನ ದಂಡೆಯ ಮೇಲೆ ಗೋಚರವಾಗಿವೆ. ಅಲ್ಲದೆ, ಕೀರ್ತಿಪುರ ಗ್ರಾಮದ ಪುರಾತನ ಮನೆಗಳ ಪಳೆಯುಳಿಕೆಗಳು, ಇಟ್ಟಿಗೆಗಳು, ಅರಳಿ ಮರದ ಬುಡಗಳು ಗೋಚರಿಸುತ್ತಿವೆ.

ಪುರಾತನ ದೇವಾಲಯದ ಕುರುಹುಗಳು
ಪುರಾತನ ದೇವಾಲಯದ ಕುರುಹುಗಳು

ಸ್ಥಳದ ಇತಿಹಾಸ : ಕಿತ್ತೂರಿನ ಮತ್ತೊಂದು ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯ ರವಿರಾಮೇಶ್ವರ ದೇವಾಲಯಕ್ಕೆ ತನ್ನದೆ ಆದ ಇತಿಹಾಸವಿದೆ. ಶ್ರೀ ರಾಮನು ವನವಾಸದಲ್ಲಿದ್ದಾಗ ಕಬಿನಿ ನದಿಯ ದಂಡೆಯ ಮೇಲೆ ಲಿಂಗವನ್ನು ಪ್ರತಿಸ್ಠಾಪಿಸಿ ಪೂಜಿಸಿದನು ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ. ಈ ಲಿಂಗಕ್ಕೆ ಪುನ್ನಾಟರ ಕಾಲದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂಬುದು ಇಲ್ಲಿನ ನೈಜ ಇತಿಹಾಸ ಸಾರುತ್ತಿದೆ.

ಮುಳುಗಡೆಯಾದ ಗ್ರಾಮಗಳು : 1973ರಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಬೀಚನಹಳ್ಳಿ ಬಳಿ ಕಬಿನಿ ಜಲಾಶಯವನ್ನು ನಿರ್ಮಾಣ ಮಾಡಿದ ಬಳಿಕ ಸುಮಾರು 33 ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾದವು. ಆ ಸಂದರ್ಭದಲ್ಲಿ ಗ್ರಾಮಗಳ ಪುನರ್ವಸತಿ ಕಲ್ಪಿಸಲಾಯಿತಾದರೂ, ಈ ಐತಿಹಾಸಿಕ ದೇವಾಲಯಗಳು ನೀರಿನಲ್ಲಿ ಮುಳುಗಡೆಗೊಂಡು ಅಗೋಚರವಾಗಿದ್ದವು. 40 ವರ್ಷಗಳ ಹಿಂದೆ ಜಲಾಶಯದ ನೀರಿನ ಮಟ್ಟ ಕುಸಿದಿದ್ದರಿಂದ ದೇವಾಲಯಗಳು ಕಾಣಿಸಿದ್ದವಂತೆ. ಬಳಿಕ 2002ರಲ್ಲಿ ಹಾಗೂ 2013 ಬಿಟ್ಟರೆ ಮತ್ತೆ 2023ರಲ್ಲಿ ಕಾಣಿಸಿವೆ.

ಇಲ್ಲಿನ ಬಹುತೇಕ ದೇವಾಲಯಗಳು ಸಾಕಷ್ಟು ಇತಿಹಾಸವನ್ನು ಹೊಂದಿದ್ದು, ಅಂದಿನ ಕಾಲದಲ್ಲಿ ಈ ಭಾಗವನ್ನು ಆಳ್ವಿಕೆ ಮಾಡುತ್ತಿದ್ದ ಕದಂಬರು, ಗಂಗರು, ಚೋಳ ಸಾಮ್ರಾಜ್ಯದ ಅರಸರು, ಪುನ್ನಾಟ ಸಂಸ್ಥಾನದವರು, ಮೈಸೂರು ಅರಸರು ಕಟ್ಟಿಸಿರಬಹುದು ಎಂಬುದು ಸ್ಥಳೀಯ ಇತಿಹಾಸಕಾರರು ನೀಡುವ ಮಾಹಿತಿ. ಕಬಿನಿ ಹಿನ್ನೀರಿನ ನೀರಿನ ಮಟ್ಟ 50 ಅಡಿಗಳಿಂತಲೂ ಕಡಿಮೆ ಕುಸಿದಾಗ ಈ ದೇವಾಲಯಗಳು ಕಾಣಿಸುತ್ತವೆ. 2013 ರಲ್ಲಿ ತೀವ್ರ ಬರಗಾಲವಿದ್ದರಿಂದ ಮಾಕಾಳಮ್ಮೆ ದೇವಾಲಯ ಪೂರ್ಣ ಕಾಣಿಸಿತ್ತು. ಈಗ ಅದರ ಮೇಲ್ಭಾಗ ಕಾಣಿಸುತ್ತಿದೆ.

ಕಬಿನಿ ಹಿನ್ನೀರಿನ ನೀರಿನ ಮಟ್ಟ ಕುಸಿದ ಕಂಡಾಗ ಇಲ್ಲಿನ ದೇವಾಲಯಗಳು ಗೋಚರವಾಗುತ್ತವೆ. 2013ರ ನಂತರ ಇದೀಗ ಮಾಕಾಳಮ್ಮ ದೇವಾಲಯದ ಮೇಲ್ಭಾಗ ಮಾತ್ರ ಕಾಣಿಸುತ್ತಿದೆ. ಅಲ್ಲದೇ ಕೀರ್ತಿಪುರದಲ್ಲಿದ್ದ ಪ್ರಾಚೀನ ಕಾಲದ ಮನೆಗಳ ಕುರುಹುಗಳು, ವಿವಿಧ ದೇವರ ವಿಗ್ರಹಗಳು ಈಗ ಕಾಣಿಸುತ್ತಿವೆ ಎಂದು ರವಿರಾಮೇಶ್ವರ ದೇವಾಲಯದ ಪ್ರಧಾನ ಅರ್ಚಚಕರಾದ ಕೆ.ವಿ.ಭಾಸ್ಕರ್ ಅವರು ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.

ಇಲ್ಲಿ ಕಾಣಿಸುವ ದೇವಾಲಯಗಳ ಕುರುಹುಗಳು ಗ್ರಾಮದ ದೇವಾಲಯಗಳಾಗಿದ್ದು. ಹಿಂದೆ ಜಲಾಶಯ ಕಟ್ಟುವ ಸಂದರ್ಭದಲ್ಲಿ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದ್ದು. ಆ ಸಂದರ್ಭದಲ್ಲಿ ಹಿಂದೆ ರಾಜರು ಕಟ್ಟಿಸಿದ ದೇವಾಲಯಗಳು ಇವಾಗಿದ್ದು. 10 ವರ್ಷಕ್ಕೊಮ್ಮೆ ಈ ರೀತಿ ಕಬಿನಿಯಲ್ಲಿ ನೀರು ಸಂಪೂರ್ಣ ಕಡಿಮೆಯಾದಾಗ ಮಾತ್ರ ಈ ದೇವಾಲಯದ ಕುರುಹುಗಳು ಕಾಣಿಸುತ್ತವೆ ಎಂದು, ಮಗ್ಗೆ ಗ್ರಾಮದ ಎಂ ಕೆ.ನಂಜಪ್ಪ ತಿಳಿಸಿದರು.

ಇದನ್ನೂ ಓದಿ : ಕೊಂಬಿಗೆ ಮೀನಿನ ಬಲೆ ಸಿಲುಕಿ ಜಿಂಕೆಗಳ ಒದ್ದಾಟ; ಬಲೆ ಬಿಡಿಸಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.