ETV Bharat / state

Mysuru Dussehra: ದಸರಾ ಗಜಪಡೆ ತೂಕ ಪರೀಕ್ಷೆ.. ಕ್ಯಾಪ್ಟನ್ ಅಭಿಮನ್ಯುನೇ ಹೆಚ್ಚು ಬಲಶಾಲಿ

author img

By ETV Bharat Karnataka Team

Published : Sep 6, 2023, 11:21 AM IST

Dasara Elephants Weighed
ದಸರಾ ಗಜಪಡೆ ತೂಕ ಪರೀಕ್ಷೆ

Mysore Dussehra 2023: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ದಿನಗಣನೆ ಶುರುವಾಗಿದೆ. ದಸರಾ ಗಜಪಡೆಯಲ್ಲಿ ಭಾಗವಹಿಸುವ ಆನೆಗಳ ತೂಕದ ವಿವರ ಇಲ್ಲಿದೆ.

ದಸರಾ ಗಜಪಡೆ ತೂಕ ಪರೀಕ್ಷೆ.. ಡಿಸಿಎಫ್. ಸೌರವ್ ಕುಮಾರ್ ಮಾಹಿತಿ ನೀಡಿರುವುದು..

ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ತೂಕದಲ್ಲಿ ಅಂಬಾರಿ ಹೋರುವ ಅಭಿಮನ್ಯು ಹೆಚ್ಚು ಬಲಶಾಲಿಯಾಗಿದ್ದಾನೆ. 2ನೇ ಹಂತದಲ್ಲಿ ಬರುವ ಐದು ಆನೆಗಳ ಜತೆ ಅರ್ಜುನ ಆನೆಯನ್ನು ಸಹ ತೂಕ ಮಾಡಲಾಗುವುದು ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.

ನಿನ್ನೆ (ಮಂಗಳವಾರ) ಅಭಿಮನ್ಯು ನೇತೃತ್ವದ 8 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಅರಮನೆಗೆ ಸ್ವಾಗತ ಕೋರಲಾಯಿತು. ಅರಮನೆ ಪ್ರವೇಶ ಮಾಡಿದ ಗಜಪಡೆಗೆ ತಾಲೀಮಿಗೆ ಮುನ್ನ ಇಂದು ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮನ್ ಕೋ ಎಲೆಕ್ಟ್ರಿಕಲ್ ತೂಕ ಮಾಪನ ಕೇಂದ್ರದಲ್ಲಿ 8 ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ತೂಕದಲ್ಲಿ ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ 'ಅಭಿಮನ್ಯು' ಹೆಚ್ಚು ತೂಕ ಹೊಂದಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ ಹೀಗಿದೆ

  • ಅಭಿಮನ್ಯು- 5,160.
  • ಧನಂಜಯ-4,940.
  • ಮಹೇಂದ್ರ 4,530.
  • ಭೀಮಾ- 4,370.
  • ಕಂಜನ್- 4,240.
  • ಗೋಪಿ-5080
  • ಹೆಣ್ಣಾನೆಗಳಾದ ವರಲಕ್ಷ್ಮಿ-3,020.
  • ವಿಜಯಾ-28,30 ಕೆ.ಜಿ ತೂಕ ಹೊಂದಿವೆ.

ಈ ಆನೆಗಳ ಜೊತೆ ಗಜಪಯಣದ ಮೂಲಕ ಆಗಮಿಸಿದ ಅರ್ಜುನ ಆನೆ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದೆ. ಒಂದೆರೆಡು ದಿನಗಳಲ್ಲಿ ವಾಪಸ್ ಅರಮನೆಗೆ ಆಗಮಿಸುವ ಅರ್ಜುನ ಆನೆಯನ್ನು 2ನೇ ಹಂತದಲ್ಲಿ ಬರುವ 5 ಆನೆಗಳ ಜೊತೆ ತೂಕ ಮಾಡಲಾಗುವುದು ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದ್ದಾರೆ.

ಗಜ ಪಡೆ ಕಂಡು ಕೈ ಮುಗಿದ ಜನ: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಮೊದಲ ದಿನ ತೂಕ ಹಾಕಲು, ಅರಮನೆಯ ಬಲರಾಮ ದ್ವಾರದ ಮೂಲಕ ಹೊರ ಬಂದು, ಕೆಆರ್ ಸರ್ಕಲ್, ದೇವರಾಜ ಮಾರುಕಟ್ಟೆ, ಸಯ್ಯಾಜಿ ರಾವ್ ರಸ್ತೆ ಮೂಲಕ ಧನ್ವಂತರಿ ರಸ್ತೆಗೆ ಆಗಮಿಸಿದೆ. ಡಿಸಿಪಿ ನೇತೃತ್ವದ ಭದ್ರತೆಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ರಸ್ತೆಯಲ್ಲಿ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಂತೆ ಗಜ ಪಡೆಯನ್ನ ಕಂಡು ಜನರು ಕೈ ಮುಗಿದು ಆನೆಗಳಿಗೆ ಹೂ ನೀಡಿದರು.

ಎಲ್ಲಾ ಆನೆಗಳು ಆರೋಗ್ಯವಾಗಿವೆ: "ದಸರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲಾ ಗಜಪಡೆಗಳ ಆರೋಗ್ಯ ಹಾಗೂ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಅಭಿಮನ್ಯು ಮೊದಲ ದಿನ ನಡೆದ ತೂಕ ಪರೀಕ್ಷೆಯಲ್ಲಿ ಹೆಚ್ಚು ತೂಕ ಹೊಂದಿರುವ ಆನೆಯಾಗಿದೆ. ಶುಕ್ರವಾರ ತಾಲೀಮಿಗೆ ಮುನ್ನ ಮೊದಲ ಬಾರಿಗೆ ತೂಕ ಹಾಕಲಾಗಿದೆ. ನಂತರ ಜಂಬೂ ಸವಾರಿಗೆ ಹಿಂದಿನ ದಿನ ಮತ್ತೆ ತೂಕ ಹಾಕಲಾಗುವುದು. ಆಗ ಯಾವ ಆನೆ ಹೆಚ್ಚು ಬಲಶಾಲಿ ಆಗಿರುವುದು ಎಂದು ಗೊತ್ತಾಗುತ್ತದೆ. ಶುಕ್ರವಾರದಿಂದ ಆನೆಗಳಿಗೆ ತಾಲೀಮಿನ ಜತೆಗೆ ವಿಶೇಷ ಆಹಾರ ನೀಡಲಾಗುವುದು. ಅಭಿಮನ್ಯು ಜೊತೆಗೆ ಮತ್ತೆರಡು ಆನೆಗಳನ್ನು ಜಂಬೂ ಸವಾರಿಗೆ ತಯಾರಿ ಮಾಡಲಾಗುವುದು"- ಡಿಸಿಎಫ್ ಸೌರವ್ ಕುಮಾರ್.

ಇದನ್ನೂ ಓದಿ: Mysore Dussehra: ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಪೂಜೆ.. ಅರಮನೆಗೆ ಅದ್ಧೂರಿ ಸ್ವಾಗತ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.