ETV Bharat / state

ಆನೆ ದವಡೆ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು: ವ್ಯಕ್ತಿ ಬಂಧನ

author img

By ETV Bharat Karnataka Team

Published : Oct 27, 2023, 12:32 PM IST

Forest officials seized elephant jaw
ಆನೆ ದವಡೆ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಹುಲಿ ಉಗುರು ಹೊಂದಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಅಭಿರಾಮ್ ಸುಂದರನ್ ಅವರ ಮನೆಗೆ ಅರಣ್ಯಾಧಿಕಾರಿ ಗಳು ದಾಳಿ ನಡೆಸಿದ್ದರು.

ಮೈಸೂರು: ಮನೆಯಲ್ಲಿ ಅಕ್ರಮವಾಗಿ ಆನೆಯ ದವಡೆ ಹಲ್ಲನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಮೈಸೂರಿನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮೈಸೂರಿನ ಉದಯಗಿರಿ ನಿವಾಸಿ ಅಭಿರಾಮ್ ಸುಂದರನ್ (70) ಬಂಧಿತ ಆರೋಪಿ. ಇವರು ಆನೆಯೊಂದರ ದವಡೆ ಹಲ್ಲನ್ನು ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು.

ಹುಲಿ ಉಗುರು ಹೊಂದಿದ್ದಾರೆಂಬ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡವು ಅಭಿರಾಮ್ ಸುಂದರನ್ ಮನೆಯನ್ನು ಬುಧವಾರ ಸಂಜೆ ಶೋಧ ನಡೆಸಿದಾಗ ಕೊಠಡಿಯೊಂದರಲ್ಲಿ ಬಚ್ಚಿಟ್ಟಿದ್ದ ಆನೆಯ ದವಡೆಯ ಹಲ್ಲು ಸಿಕ್ಕಿದೆ. ಈ ಆನೆ ದವಡೆ ಹಲ್ಲು ಎರಡು ಕೆ.ಜಿ ತೂಕ, 17 ಸೆಂ.ಮೀ ಉದ್ದ, 9 ಸೆಂ.ಮಿ ಅಗಲವಿದೆ. ಮದ್ಯ ವಯಸ್ಕ ಆನೆಯ ದವಡೆ ಹಲ್ಲು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಬಂಧಿತ ವ್ಯಕ್ತಿ ಹಲವು ವರ್ಷದ ಹಿಂದೆ ಎಚ್.ಡಿ. ಕೋಟೆಯಲ್ಲಿ ವ್ಯಕ್ತಿಯೊಬ್ಬರಿಂದ ಪಡೆದಿದ್ದಾಗಿ ಹೇಳಿದ್ದಾರೆ.

ಹೀಗಾಗಿ, ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಡಿಸಿಎಫ್ ಡಾ.ಕೆ.ಎನ್. ಬಸವರಾಜು ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಎನ್. ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಆರ್​ಎಫ್ಒಗಳಾದ ಕೆ. ಸುರೇಂದ್ರ, ಧನ್ಯಶ್ರೀ, ಡಿಆರ್​ಎಫ್​ಗಳಾದ ಮೋಹನ್, ಚಂದ್ರಶೇಖರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಹುಲಿ ಉಗುರು ಡಾಲರ್ ಧರಿಸಿದ ಆರೋಪ: ನಾಳೆಗೆ ಸಂತೋಷ್​ನ ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಬಿಗ್​ಬಾಸ್​ ಸ್ಪರ್ಧಿ ಬಂಧನ: ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್​ ಧರಿಸಿದ ಆರೋಪದಲ್ಲಿ ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಇತ್ತೀಚೆಗೆ ಅರಣ್ಯಾಧಿಕಾರಿಗಳು ಬಿಗ್​ ಬಾಸ್​ ಮನೆಯಿಂದಲೇ ರಾತ್ರೋ ರಾತ್ರಿ ಬಂಧಿಸಿದ್ದರು. ವರ್ತೂರು ಸಂತೋಷ್​ ವಿರುದ್ಧ ವನ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನುವ ಬಗ್ಗೆ ದೂರು ದಾಖಲಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದರು.

ನಂತರ ಅವರಲ್ಲಿದ್ದ ಹುಲಿ ಉಗುರಿನ ಪೆಂಡೆಂಟ್​ ಅನ್ನು ಜಪ್ತಿ ಮಾಡಿದ್ದು, ಮೇಲ್ನೋಟಕ್ಕೆ ಡಾಲರ್​ನಲ್ಲಿ ಬಳಸಿರುವುದು ಹುಲಿ ಉಗುರು ಎಂಬುದು ಸಾಬೀತಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಂತೋಷ್​ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.

ಈ ಪ್ರಕರಣದ ಬೆನ್ನಲ್ಲೇ ಹಲವು ನಟರು, ರಾಜಕೀಯ ನಾಯಕರು ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂಧಿದ್ದವು. ನಟ, ನಿಖಿಲ್​ ಕುಮಾರಸ್ವಾಮಿ, ನಟ ಜಗ್ಗೇಶ್​ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ಜಗ್ಗೇಶ್​ ಅವರು ಅವರ ತಾಯಿ ನೀಡಿದ್ದ ಹುಲಿ ಉಗುರಿನ ಪೆಂಡೆಂಟ್​ ಅನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವುದಾಗಿ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.