ETV Bharat / state

ಅಪಘಾತದಿಂದ ವ್ಯಕ್ತಿ ಸಾವು.. ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

author img

By

Published : Apr 7, 2023, 2:16 PM IST

Accident victim
ಪುಟ್ಟ ಮಾದಯ್ಯ

ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ - ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು.

ಮೈಸೂರು: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದ ಪುಟ್ಟ ಮಾದಯ್ಯ(45) ಅವರು ಏ.2ರಂದು ರಸ್ತೆ ಅಪಘಾತಕ್ಕೀಡಾಗಿದ್ದರು. ಮೆದುಳಿನ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಮತ್ತು ಬದುಕುಳಿಯುವ ಸಾಧ್ಯತೆ ಬಗ್ಗೆ ಪೋಷಕರಿಗೆ ವಿವರಿಸಿದರು. ಆ ದುಃಖದ ಸಂದರ್ಭದಲ್ಲಿಯೂ ಅವರ ಕುಟುಂಬ ಸದಸ್ಯರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಮುಂದಿನ ಕ್ರಮ ಕೈಗೊಳ್ಳಲು ಕೋರಿದರು. ನಿಯಮಾನುಸಾರ ಆಸ್ಪತ್ರೆ ವೈದ್ಯರು ಪುಟ್ಟ ಮಾದಯ್ಯ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಏ.4ರಂದು ಘೋಷಿಸಿದ್ದರು.

organs donate
ಪ್ರಕಟಣೆ ಪ್ರತಿ

ವೈದ್ಯರ ತಂಡ ರೋಗಿಯ ಹೃದಯ, ಎರಡು ಕಿಡ್ನಿ ಮತ್ತು ಎರಡು ಕಾರ್ನಿಯಾಗಳನ್ನು(ಕಣ್ಣುಗಳು) ಕೊಯ್ಲು ಮಾಡಿ ಅವಶ್ಯಕತೆ ಇದ್ದ ರೋಗಿಗಳಿಗೆ ಕಸಿ ಮಾಡಲು ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಗ್ರೀನ್ ಕಾರಿಡಾರ್‌ ಮುಖಾಂತರ ರವಾನಿಸಲಾಯಿತು. ಒಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ರವಾನಿಸಲಾಯಿತು. ಎರಡು ಕಾರ್ನಿಯಾಗಳನ್ನು ಮತ್ತು ಒಂದು ಕಿಡ್ನಿಯನ್ನು ಜೆಎಸ್‌ಎಸ್ ಆಸ್ಪತ್ರೆಯಲ್ಲೇ ಅವಶ್ಯಕತೆ ಇದ್ದವರಿಗೆ ಕಸಿ ಮಾಡಲಾಗಿದೆ. ಅಂಗಾಂಗ ದಾನ ಮಾಡಲು ನಿರ್ಧಾರ ತೆಗೆದುಕೊಂಡ ಪುಟ್ಟ ಮಾದಯ್ಯ ಅವರ ಕುಟುಂಬ ಸದಸ್ಯರಿಗೆ ಜೆಎಸ್‌ಎಸ್ ಆಸ್ಪತ್ರೆ ಮತ್ತು ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ್ದ ಪೋಷಕರು.. ಸಂತ್ರಸ್ತ ಕುಟುಂಬಕ್ಕೆ ನೆರವು ಒದಗಿಸಿದ ಶಾಸಕ ಖಾದರ್

ಅಂಗಾಂಗ ದಾನದ ಮಹತ್ವ: ಪ್ರಧಾನಿ ನರೇಂದ್ರ ಮೋದಿ ಅವರು ಮಾ.26 ರಂದು ಮನ್​ ಕಿ ಬಾತ್​ನ 99ನೇ ಸಂಚಿಕೆಯಲ್ಲಿ ಅಂಗಾಂಗ ದಾನದ ಮಹತ್ವ ಹಾಗೂ ಮಹಿಳಾ ಶಕ್ತಿಯ ಕುರಿತು ಮಾತನಾಡಿದ್ದರು. ಆಧುನಿಕ ವೈದ್ಯಕೀಯ ವಿಜ್ಞಾನ ಯುಗದಲ್ಲಿ ಅಂಗಾಂಗ ದಾನವು ಯಾರಿಗಾದರೂ ಬದುಕು ಒದಗಿಸುವ ಅತ್ಯಂತ ಪ್ರಮುಖ ಸಾಧನವಾಗಿದೆ. ಒಬ್ಬ ವ್ಯಕ್ತಿಯು ಮರಣಾ ನಂತರ ಅಂಗಾಂಗ ದಾನ ಮಾಡಿದರೆ 8 ರಿಂದ 9 ಜನರು ಹೊಸ ಜೀವನ ಪಡೆಯುವ ಸಾಧ್ಯತೆ ಇದೆ. ಇಂದು ದೇಶದಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಅಂಗಾಂಗ ದಾನ ಮಾಡುವಂತೆ ಮನವಿ: 2013ರಲ್ಲಿ ನಮ್ಮ ದೇಶದಲ್ಲಿ 5 ಸಾವಿರಕ್ಕಿಂತ ಕಡಿಮೆ ಅಂಗಾಂಗ ದಾನ ಪ್ರಕರಣಗಳಿದ್ದರೆ, 2022ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಿದೆ. ಅಂಗಾಂಗ ದಾನಿಗಳು, ಅವರ ಕುಟುಂಬದವರು ನಿಜಕ್ಕೂ ಪುಣ್ಯರು. ಅಂಗಾಂಗ ದಾನದ ಹಿಂದಿನ ದೊಡ್ಡ ಭಾವನೆ ಎಂದರೆ ಪ್ರಾಣವನ್ನು ಬಿಟ್ಟು ಹೋಗುವಾಗಲೂ ಬೇರೊಬ್ಬರ ಜೀವ ಉಳಿಸುವುದು. ಹಾಗಾಗಿ ಹೆಚ್ಚಿನ ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು ಎಂದು ಪ್ರಧಾನಿ ಮನವಿ ಮಾಡಿದ್ದರು.

ಇದನ್ನೂ ಓದಿ: ಅಂಗಾಂಗ ದಾನ, ನಾರಿ ಶಕ್ತಿ ಮಹತ್ವ ಕುರಿತು ಮೋದಿ 'ಮನ್‌ ಕಿ ಬಾತ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.