ಮಂಡ್ಯ: 'ಕೃಷಿತೋ ನಾಸ್ತಿ ದುರ್ಭಿಕ್ಷಂ' (ವ್ಯವಸಾಯವನ್ನು ನಂಬಿದರೆ ಕೆಡಕಿಲ್ಲ) ಎಂಬ ಮಾತಿನನಂತೆ ಇಲ್ಲೊಬ್ಬ ರೈತನಿಗೆ ತಮ್ಮ ತಂದೆ ಹಾಕಿಕೊಟ್ಟ ಕೃಷಿ ಮಾರ್ಗವೇ ದಾರಿ ದೀಪವಾಗಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ರೈತ ಶ್ರೀನಿವಾಸ್ ನೈಸರ್ಗಿಕ ಮಾವು ಬೆಳೆಗಾರ. ತಮ್ಮ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಇಂದಿಗೂ ನೈಸರ್ಗಿಕವಾಗಿ ಮಾವು ಬೆಳೆಯುವ ಮೂಲಕ ಯಶಸ್ವಿ ರೈತರಾಗಿದ್ದಾರೆ.
130 ವರ್ಷಗಳ ಹಿಂದೆ ಶ್ರೀನಿವಾಸ್ ಅವರ ತಂದೆ ಸುಮಾರು 20 ಎಕರೆ ಪ್ರದೇಶದಲ್ಲಿ ಮಾವನ್ನು ಬೆಳೆಸಿದ್ದರು. ನಂತರ ತಾವೂ ಕೂಡ ತಂದೆಯಂತಾಗಬೇಕು ಎಂದುಕೊಂಡು 26 ಎಕರೆ ಜಮೀನು ಖರೀದಿಸಿ, 46 ವರ್ಷಗಳಿಂದ ಮಾವು ಬೆಳೆಯುತ್ತಿದ್ದಾರೆ. ಅಲ್ಲದೆ ತಂದೆ ಬೆಳೆಸಿದ ಮರಗಳನ್ನು ಕೂಡಾ ಅಚ್ಚುಕಟ್ಟಾಗಿ ಕಾಪಾಡಿಕೊಂಡಿದ್ದಾರೆ.
ಇವರ ಈ ಮಾವು ಬೆಳೆ ಸಾಧನೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶತಮಾನದಿಂದ ಮಾವು ಬೆಳೆಯುತ್ತಿರುವ ಕುಟುಂಬ ವ್ಯವಸಾಯದಲ್ಲಿಯೇ ಸಾರ್ಥಕ ಬದುಕು ಕಟ್ಟಿಕೊಂಡಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ರೈತ ಶ್ರೀನಿವಾಸ್ ಅವರು, ಸುಮಾರು 150 ವರ್ಷಗಳಿಂದ ಮಾವು ಕೃಷಿಯನ್ನೇ ನಂಬಿಕೊಂಡು ಬಂದಿದ್ದೇವೆ. ಇತ್ತೀಚೆಗಿನ 10 ರಿಂದ 15 ವರ್ಷಗಳಲ್ಲಿ ಸ್ವಲ್ಪ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ ಎಂದಿದ್ದಾರೆ.