ಮಂಡ್ಯ: ಹೇಮಗಿರಿ ನಾಲೆಗೆ ನೀರು ಹರಿಯಬಿಟ್ಟ ಪರಿಣಾಮ ಏರಿಯ ಒಂದು ಭಾಗ ಕುಸಿದು ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೆ.ಆರ್. ಪೇಟೆ ತಾಲೂಕಿನ ಪಿ.ಡಿ. ಜಿ ಕೊಪ್ಪಲು ಗ್ರಾಮದ ಬಳಿಕ ನಾಲೆಯ ಒಂದು ಭಾಗದಲ್ಲಿ ಮಣ್ಣು ಕುಸಿತ ಉಂಟಾಗಿ ರೈತರ ಜಮೀನಿಗೆ ನೀರು ನುಗ್ಗಿದೆ.
ನಾಲೆಗೆ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದ ನೀರು ಹರಿಬಿಟ್ಟ ಪರಿಣಾಮ ನಾಲೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಾಲಾ ವ್ಯಾಪ್ತಿಯಲ್ಲಿ ಬೆಳೆದಿದ್ದ ಸೇವಂತಿಗೆ, ಗುಲಾಬಿ, ಸೌತೆಕಾಯಿ, ಭತ್ತದ ಮಡಿ ಸಸಿಗಳು ಜಲಾವೃತಗೊಂಡಿವೆ. ಕೆಲವು ಕಡೆ ಕೃಷಿ ಭೂಮಿಯ ಮಣ್ಣು ಕೊಚ್ಚಿಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಾಲುವೆ ಏರಿಯ ಮೇಲಿನ ವಿದ್ಯುತ್ ಕಂಬಗಳೂ ಕುಸಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳಪೆ ಕಾಮಗಾರಿ ಆರೋಪ
ಕಾಲುವೆಯ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಬೇಕಾದ ಸಂದರ್ಭದಲ್ಲಿ ಇಂಜಿನಿಯರ್ಗಳು ಹೂಳೆತ್ತುವ ಕಾಮಗಾರಿ ಆರಂಭಿಸಿದ್ದರು. ಗುತ್ತಿಗೆದಾರ ಸರಿಯಾದ ರೀತಿಯಲ್ಲಿ ಹೂಳೆತ್ತದೆ ಸಡಿಲಗೊಂಡ ಹೂಳುಮಣ್ಣು ಮತ್ತು ಗಿಡಗಂಟೆಗಳು ಕಾಲುವೆಯಲ್ಲಿಯೇ ಉಳಿದಿದ್ದವು. ಈ ವೇಳೆ ನಾಲೆಗೆ ನೀರು ಹರಿಸಿದ್ದು, ನಾಲೆಯ ಮೇಲೆ ಉಕ್ಕಿ ಬಂದಿದೆ. ಇದರಿಂದ ನೀರು ರೈತರ ಜಮೀನಿಗೆ ನುಗ್ಗಿದೆ ಎಂದು ಆರೋಪಿಸಿದ್ದಾರೆ.