ETV Bharat / state

ಮಂಡ್ಯ ಕಾರು ಅಪಘಾತ: ಮುಖ್ಯಮಂತ್ರಿ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ಘೋಷಣೆ

author img

By

Published : Jul 30, 2023, 1:26 PM IST

Updated : Jul 30, 2023, 1:38 PM IST

Mandya accident update: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ನಾಲೆಗೆ ಕಾರು ಉರುಳಿ ಸಾವನ್ನಪ್ಪಿದ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ.

four-killed-in-car-fall-into-canal-in-mandya-2-lakh-compensation-for-each
ಕಾರು ನಾಲೆಗೆ ಬಿದ್ದು ನಾಲ್ವರು ಸಾವು : ಮುಖ್ಯಮಂತ್ರಿ ನಿಧಿಯಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

ಮಂಡ್ಯ ಕಾರು ಅಪಘಾತ: ಮುಖ್ಯಮಂತ್ರಿ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ಘೋಷಣೆ

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ನಾಲೆಗೆ ಕಾರು ಉರುಳಿ ಸಾವನ್ನಪ್ಪಿದ ನಾಲ್ವರು ಮಹಿಳೆಯರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಸಚಿವ ಹೆಚ್​.ಸಿ ಮಹದೇವಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿ ಬಾಲಕಿ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶ್ರೀರಂಗಪಟ್ಟಣ ಗಡಿಭಾಗ ಗಾಮನಹಳ್ಳಿ ಬಳಿಯ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿತ್ತು. ಗಾಮನಹಳ್ಳಿಯಿಂದ ಬನ್ನೂರು ಮಾರ್ಗವಾಗಿ ವಿ.ಸಿ ನಾಲೆ ಮೇಲೆ ಸಂಚರಿಸುತ್ತಿದ್ದಾಗ ಕಾರು ನಾಲೆಗೆ ಉರುಳಿತ್ತು. ಇದರಿಂದಾಗಿ ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರು ಮೃತಪಟ್ಟಿದ್ದರು. ತಮ್ಮ ಮನೆಯ ಕಾರ್ಯಕ್ರಮವೊಂದಕ್ಕೆ ಬಂಧುಗಳನ್ನು ಆಹ್ವಾನಿಸಿ ಬರುವಾಗ ವಿಶ್ವೇಶ್ವರಯ್ಯ ಕಾಲುವೆಗೆ ಕಾರು ಬಿದ್ದಿದೆ ಎಂದು ಮಂಡ್ಯ ಎಸ್​ಪಿ ಎನ್ ಯತೀಶ್ ಮಾಹಿತಿ ನೀಡಿದ್ದರು.

ಅಪಘಾತದಲ್ಲಿ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕು ಗೊರವನಹಳ್ಳಿಯ ಬಸವರಾಜು ಎಂಬವರ ಪತ್ನಿ ರೇಖಾ (35) ಮತ್ತು ಅವರ ಪುತ್ರಿ ಸಂಜನಾ (18), ಮಲ್ಲೇಶ್ ಎಂಬವರ ಪತ್ನಿ ಮಮತಾ (40) ಹಾಗೂ ಗಾಮನಹಳ್ಳಿ ಗ್ರಾಮದ ಮಹದೇವಮ್ಮ(55) ಅವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು ತಲಾ 50,000 ರೂ ವೈಯಕ್ತಿಕ ಪರಿಹಾರ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, "ಗಾಮನಹಳ್ಳಿ ಹೊರ ವಲಯದಲ್ಲಿ ತಡೆಗೋಡೆ ಇದ್ದರೂ ಕಾರು ನಾಲೆಗೆ ಉರುಳಿ ದುರಂತ ಸಂಭವಿಸಿದೆ. ಇದೊಂದು ದುರದೃಷ್ಟಕರ ಘಟನೆ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ. ಮುಖ್ಯಮಂತ್ರಿ ಅವರ ಜೊತೆ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ದೊರಕಿಸಿಕೊಡುತ್ತೇನೆ" ಎಂದು ಭರವಸೆ ನೀಡಿದರು.

"ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಲು ಸರ್ವೆ ಮಾಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇವೆ. ಅವರು ವರದಿ ನೀಡಿದ ನಂತರ ಅಪಘಾತ ತಡೆಗೆ ಸೂಕ್ತ ಕ್ರಮ ವಹಿಸುತ್ತೇವೆ. ಪ್ರಾಣ ಹಾನಿ ತಡೆಗೆ ಮೊದಲ ಆದ್ಯತೆ ನೀಡಿ ಕ್ರಮ ವಹಿಸುತ್ತೇವೆ ಎಂದರು.ಮೊಬೈಲ್​​ನಲ್ಲಿ ಮಾತನಾಡಿಕೊಂಡು ಕಾರು ಚಾಲನೆ ಮಾಡುತ್ತಿದ್ದರಿಂದ ತಿಬ್ಬನಹಳ್ಳಿ ನಾಲೆಗೆ ಕಾರು ಉರುಳಿ ಬಿದ್ದಿದೆ. ಅಲ್ಲಿ ನಾಲೆಗೆ ತಡೆಗೋಡೆ ಇರಲಿಲ್ಲ. ಆದರೆ ಗಾಮನಹಳ್ಳಿ ಬಳಿ ತಡೆಗೋಡೆ ಇದ್ದರೂ ಅನಾಹುತ ಸಂಭವಿಸಿದೆ. ವಾಹನ ಸವಾರರು ಮುನ್ನೆಚ್ಚರಿಕೆ ವಹಿಸಬೇಕು" ಎಂದು ಮನವಿ ಮಾಡಿದರು.

ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, "ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದು ದುಃಖದ ಸಂಗತಿ. ಘಟನೆ ನಡೆದ ತಕ್ಷಣವೇ ಶಾಸಕರು ಜಿಲ್ಲಾಡಳಿತ ಕ್ರಮ ವಹಿಸಿದ್ದಾರೆ. ತಲಾ 2 ಲಕ್ಷ ಪರಿಹಾರ ಘೋಷಿಸಲಾಗುತ್ತದೆ ಎಂದರು. ಅಪಘಾತದಲ್ಲಿ ಮಂಡ್ಯ ಹಾಗೂ ಮೈಸೂರಿನವರು ಸಾವನ್ನಪ್ಪಿದ್ದಾರೆ. ನಾಳೆಯೇ ಪರಿಹಾರ ವಿತರಣೆ ಮಾಡಲಾಗುತ್ತದೆ" ಎಂದು ಹೇಳಿದರು.

ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರು ಇದ್ದರು.

ಇದನ್ನೂ ಓದಿ : Mandya Accident: ಮಂಡ್ಯದಲ್ಲಿ ನಾಲೆಗೆ ಉರುಳಿದ ಕಾರು; ಬಾಲಕಿ ಸೇರಿ ನಾಲ್ವರು ಸಾವು

Last Updated :Jul 30, 2023, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.