ಗಂಗಾವತಿ: ಮರಳಿ ಪಂಚಾಯಿತಿ ವ್ಯಾಪ್ತಿಯ ಆಚಾರ ನರಸಾಪುರ ಎಂಬ ಸಣ್ಣ ಗ್ರಾಮದಲ್ಲಿ ಏಕಕಾಲಕ್ಕೆ ಹತ್ತಾರು ಕುಟುಂಬಗಳಿಗೆ ಸಾಮೂಹಿಕವಾಗಿ ಜ್ವರ ಕಾಣಿಸಿಕೊಂಡಿದ್ದು, ಇಡೀ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಜ್ವರ ಯಾವ ಕಾರಣಕ್ಕೆ ಬಂದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿಲ್ಲ. ಮಾಹಿತಿ ತಿಳಿಯುತ್ತಿದ್ದಂತಯೇ ತಾಲೂಕು ಪಂಚಾಯಿತಿ ಇಒ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೆ ಜ್ವರ ಪೀಡಿತರನ್ನು ಶ್ರೀರಾಮನಗರದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ. ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ಇಒ ಮಾಹಿತಿ ನೀಡಿದ್ದಾರೆ.
ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗಿದ್ದು, ಜ್ವರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಶ್ರೀರಾಮನಗರದ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಿ ಈಗಾಗಲೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವೈದ್ಯರು ಜ್ವರ ಪೀಡಿತ ಕುಟುಂಬದ ಮೇಲೆ ನಿಗಾ ಇಟ್ಟಿದ್ದಾರೆ. ಜ್ವರ ಯಾವ ಕಾರಣಕ್ಕೆ ಬಂದಿರಬಹುದು ಎಂಬ ನಿಖರ ಮಾಹಿತಿ ಹುಡುಕಾಟದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ತೊಡಗಿದ್ದಾರೆ.