ETV Bharat / state

ಆದಿಮಾನವರು ನೆಲೆಸಿದ್ದ ಗಂಗಾವತಿಯ ಬೆಟ್ಟಕ್ಕೆ ಜಿ.ಪಂ ಸಿಇಒ ಭೇಟಿ: ಸ್ಮಾರಕ ಅಭಿವೃದ್ಧಿ ಭರವಸೆ

author img

By ETV Bharat Karnataka Team

Published : Oct 3, 2023, 10:33 PM IST

jilla-panchayath-ceo-visited-gangavati-hill-primitive-people-lived-promise-of-monument-development
ಆದಿಮಾನವರು ನೆಲೆಸಿದ್ದ ಗಂಗಾವತಿಯ ಬೆಟ್ಟಕ್ಕೆ ಜಿಪಂ ಸಿಇಒ ಭೇಟಿ : ಸ್ಮಾರಕ ಅಭಿವೃದ್ಧಿ ಭರವಸೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೆಟ್ಟವೊಂದರಲ್ಲಿ ಆದಿಮಾನವರು ವಾಸವಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂಪಾಂಡೆ ಭೇಟಿ ನೀಡಿದರು. ಇಲ್ಲಿರುವ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು.

ಗಂಗಾವತಿ (ಕೊಪ್ಪಳ) : ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿರುವ ಎಚ್ಆರ್​ಜಿ ಕ್ಯಾಂಪಿನ ಜನವಸತಿ ಪ್ರದೇಶದ ಅನತಿ ದೂರದ ಬೆಟ್ಟದಲ್ಲಿ ಪತ್ತೆಯಾಗಿರುವ ಆದಿಮಾನವರು ವಾಸವಿದ್ದ ಪ್ರದೇಶಕ್ಕೆ ಇಂದು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ರತ್ನಂಪಾಂಡೆ ಭೇಟಿ ನೀಡಿದರು.

ಇಲ್ಲಿರುವ ಆದಿ ಮಾನವರ ನೆಲೆ ಮತ್ತು ವಾಸ ಸ್ಥಾನದ ಸ್ಮಾರಕಗಳು ನಾಶವಾಗುತ್ತಿರುವ ಬಗ್ಗೆ ಸಿಇಒ ಮಾಹಿತಿ ಪಡೆದುಕೊಂಡರು. ಸ್ಥಳೀಯ ಯುವಕರ ನೆರವಿನಿಂದ ಅತ್ಯಂತ ಕಡಿದಾದ ಮತ್ತು ದುರ್ಗಮ ದಾರಿಯಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ ಸಿಇಒ, ಬೆಟ್ಟದ ತಳಹದಿಯಲ್ಲಿ ಹರಡಿಕೊಂಡಿರುವ ಮೋರೇರ್ ಮನೆ ಎಂದು ಕರೆಯಲಾಗುವ ಸ್ಮಾರಕಗಳನ್ನು ವೀಕ್ಷಿಸಿದರು.

ಈ ಬಗ್ಗೆ ಮಾತನಾಡಿದ ಯುವಕ ಹೊಳೆಯಪ್ಪ, ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನವಾಗಿರುವ ಈ ಸ್ಮಾರಕಗಳನ್ನು ದುಷ್ಕರ್ಮಿಗಳು ನಿಧಿ ಆಸೆಗಾಗಿ ನಾಶ ಮಾಡಿದ್ದಾರೆ. ಕಡಿದಾದ ಪ್ರದೇಶವಾಗಿರುವುದರಿಂದ ಸ್ಮಾರಕ ರಕ್ಷಣೆ ಸಾಧ್ಯವಾಗಿಲ್ಲ. ಬೆಟ್ಟದ ಮೇಲೇರಲು ಸರಿಯಾದ ರಸ್ತೆ ಸೌಕರ್ಯ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ರಸ್ತೆ ನಿರ್ಮಾಣ ಮಾಡಬೇಕು. ಪ್ರಾಚ್ಯವಸ್ತು ಇಲಾಖೆ ಸ್ಮಾರಕಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಬೆಟ್ಟದಲ್ಲಿರುವ ಸ್ಮಾರಕಗಳ ಅಭಿವೃದ್ಧಿಗೆ ಒತ್ತಾಯ: ಈ ಪ್ರದೇಶದಲ್ಲಿ ಕೆಲವು ಗುಹೆಗಳಿವೆ. ಇದರೊಳಗೆ ಆದಿಮಾನವರ ಕಾಲಘಟ್ಟದ ರೇಖಾಚಿತ್ರಗಳು ಇರುವ ಸಾಧ್ಯತೆ ಇದೆ. ಆದರೆ ಗಿಡಗಂಟಿಗಳು ಬೆಳೆದಿರುವ ಕಾರಣ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಸ್ಮಾರಕಗಳಿರುವ ಪ್ರದೇಶವನ್ನು ಮೋರೇರ್ ಬೆಟ್ಟ ಎಂದು ಕರೆಯಲಾಗುತ್ತದೆ. ಇಲ್ಲಿ ಆದಿಮಾನವರು ಮನೆ ಅಥವಾ ಸಮಾಧಿಗಳನ್ನು ಕಟ್ಟಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಯಬೇಕಾದ ಅವಶ್ಯಕತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್​ ಸಿಇಒ ರಾಹುಲ್ ರತ್ನಂ ಪಾಂಡೆ, ಬಹಳ ಹಿಂದಿನಿಂದಲೂ ನಮ್ಮಲ್ಲಿ ಜನವಸತಿ ಇತ್ತು ಎಂಬುವುದಕ್ಕೆ ಇದೊಂದು ಸಾಕ್ಷಿ. ಅತ್ಯಂತ ಪುರಾತನ ಕಾಲದ ಇಂತಹ ಸ್ಮಾರಕಗಳನ್ನು ಸಂರಕ್ಷಣೆ ಮುಖ್ಯ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇವೆ. ನಾಶದ ಹಾದಿಯಲ್ಲಿರುವ ಸ್ಮಾರಕಗಳ ರಕ್ಷಣೆಗೆ ಯೋಜನೆ ರೂಪಿಸಲಾಗುವುದು. ಸ್ಥಳೀಯರು ಈ ಬಗ್ಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ಮಲೆನಾಡು ಗಿಡ್ಡ ಸಾಕಣೆಗೆ ಮುಂದಾದ ಬಯಲುಸೀಮೆ ರೈತರು; ಬಿಜೆಪಿ ಯುವ ಮೋರ್ಚಾದಿಂದ ಉಚಿತವಾಗಿ 101 ರಾಸುಗಳ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.