ETV Bharat / state

ಜನಾರ್ದನ್​ ರೆಡ್ಡಿಯ ಭರ್ಜರಿ ರೋಡ್​ ಶೋ ಬೆನ್ನಲ್ಲೇ ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ

author img

By

Published : Mar 21, 2023, 9:53 PM IST

ಕೊಪ್ಪಳ ಜಿಲ್ಲಾಮಟ್ಟದ ಯುವ ಮೋರ್ಚಾ ಸಮಾವೇಶದಲ್ಲಿ ಬಿಜೆಪಿಯತ್ತ ಮತದಾರರನ್ನು ಸೆಳೆಯುವ ಯತ್ನ ನಡೆಯಿತು.

Big bike rally by BJP
ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ

ಗಂಗಾವತಿ (ಕೊಪ್ಪಳ) : ವಿಧಾನಸಭಾ ಚುನಾವಣೆಯ ಕಾವು ಮೆಲ್ಲಗೆ ಏರುತ್ತಿರುವ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಸ್ಪರ್ಧೆಯಿಂದಾಗಿ ಇದೀಗ ರಾಜ್ಯ ರಾಜಕೀಯದ ಗಮನ ಸೆಳೆದಿರುವ ಗಂಗಾವತಿಯಲ್ಲಿ ಬಿಜೆಪಿ ಮತ್ತು ಕೆಆರ್​ಪಿ ಮಧ್ಯೆ ಭಾರಿ ಪೈಪೋಟಿ ಕಂಡುರುತ್ತಿದೆ. ಜೆಡಿಎಸ್ ಇನ್ನೂ ಅಭ್ಯರ್ಥಿಯನ್ನು ಈ ಕ್ಷೇತ್ರಕ್ಕೆ ಅಂತಿಮ ಮಾಡಿಲ್ಲ. ಜೊತೆಗೆ ಪ್ರಚಾರದಿಂದಲೂ ದೂರವೇ ಉಳಿದಿದೆ. ಇತ್ತ ಕಾಂಗ್ರೆಸ್​ನಲ್ಲಿ ಟಿಕೆಟ್ ಗೊಂದಲ ಮುಂದುವರೆದಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮಗೇ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಪರಣ್ಣ ಮುನವಳ್ಳಿ ಮತ್ತು ಕೆಆರ್​ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜನಾರ್ದನರೆಡ್ಡಿ ಮಧ್ಯ ಪೈಪೋಟಿ ಕಂಡು ಬರುತ್ತಿದೆ. ರೆಡ್ಡಿ ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ದೊಡ್ಡಮಟ್ಟದಲ್ಲಿ ಪಕ್ಷದ ಪ್ರಚಾರ ನಡೆಸಿ ಗಮನ ಸೆಳೆದಿದ್ದರು. ಒಂದೇ ದಿನದಲ್ಲಿ ನಗರದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಗಮನ ಸೆಳೆಯಲು ಯತ್ನಿಸಿದ್ದರು. ಅಲ್ಲದೇ ನಾಲ್ಕು ಕಾರ್ಯಕ್ರಮ ಆಯೋಜಿಸಿ ನೂರಾರು ಜನ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.

ಇದೀಗ ರೆಡ್ಡಿಗೆ ಸೆಡ್ಡು ಹೊಡೆಯುವಂತೆ ಬಿಜೆಪಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ 20 ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಭೇಟಿ ನೀಡಿ ಹೋದ ಬೆನ್ನಲ್ಲೇ, ಸಿಎಂ ಆಗಮಿಸಿ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ನಗರಕ್ಕೆ ಆಗಮಿಸಿ ಯುವ ಮೋರ್ಚಾ ಕೊಪ್ಪಳ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿಯತ್ತ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ನಗರದಲ್ಲಿ ಬೃಹತ್​ ಬೈಕ್ ರ್ಯಾಲಿ : ನಗರದಲ್ಲಿ ಉಂಟಾಗಿರುವ ರೆಡ್ಡಿ ಅಬ್ಬರಕ್ಕೆ ಪರ್ಯಾಯವಾಗಿ ಬಿಜೆಪಿ ಇಂದು ದೊಡ್ಡ ಪ್ರಮಾಣದಲ್ಲಿ ಬೈಕ್ ರ್ಯಾಲಿ ಆಯೋಜಿಸುವ ಮೂಲಕ ಗಮನ ಸೆಳೆದಿದೆ. ಸಂಸದ ತೇಜಸ್ವಿಸೂರ್ಯ ನೇತೃತ್ವದಲ್ಲಿ ದೊಡ್ಡ ಬೈಕ್ ರ್ಯಾಲಿ ನಡೆಸಲಾಯಿತು. ಆನೆಗೊಂದಿ ರಸ್ತೆಯಲ್ಲಿರುವ ಸಾಯಿನಾಥ ದೇವಸ್ಥಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಬೈಕ್​ಗಳಲ್ಲಿ ಯುವಕರು ಭಾಗಿಯಾಗಿದ್ದರು. ನಗರದಲ್ಲಿ ಸುಮಾರು ಏಳು ಕಿಲೋ ಮೀಟರ್ ವರೆಗೆ ಬೈಕ್ ರ್ಯಾಲಿ ಸಾಗಿತ್ತು. ಈ ಸಂದರ್ಭದಲ್ಲಿ ಕೆಲ ಮಾರ್ಗದಲ್ಲಿ ಸಂಚಾರಿ ಪೊಲೀಸರು ವಾಹನಗಳನ್ನು ತಡೆದ ಪರಿಣಾಮ ವಾಹನ ದಟ್ಟಣೆ ಅಧಿಕವಾಗಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿತ್ತು.

ಬೈಕ್​ಗಳಿಗೆ ಪೆಟ್ರೋಲ್ ಉಚಿತ : ರ್ಯಾಲಿಯಲ್ಲಿ ಭಾಗಿಯಾಗಿದ್ದ ಸುಮಾರು 300ಕ್ಕೂ ಹೆಚ್ಚು ಬೈಕ್​ಗಳಿಗೆ ನಗರದ ಹೊರವಲಯ ಆನೆಗೊಂದಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಪಕ್ಷದಿಂದಲೇ ಉಚಿತ ಪೆಟ್ರೋಲ್ ಹಾಕಿಸುವ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಉಸ್ತುವಾರಿಗಳನ್ನು ಕೂಡ ನಿಯೋಜಿಸಲಾಗಿತ್ತು. ಒಂದೊಂದು ಬೈಕಿಗೆ ತಲಾ ಇನ್ನೂರು ರೂಪಾಯಿ ಮೊತ್ತದ ಪೆಟ್ರೋಲ್ ಹಾಕಿಸಲಾಗಿತ್ತು. ಇದಕ್ಕಾಗಿ ನಿಯೋಜಿತ ವ್ಯಕ್ತಿಗಳು ಬೈಕ್​ಗಳ ನಂಬರ್, ವಾಹನ ಮಾಲಿಕರ ಹೆಸರು ಸಮೇತ ದಾಖಲಿಸಿಕೊಂಡು ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಕಂಡು ಬಂತು.

ಇದನ್ನೂ ಓದಿ :0ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.