ETV Bharat / state

'ಹುನಗುಂದ ತಾಲೂಕನ್ನು ಕಲ್ಯಾಣ ಕರ್ನಾಟಕ 371(ಜೆ) ವ್ಯಾಪ್ತಿಗೆ ಸೇರಿಸಲಿ'

author img

By

Published : Nov 7, 2021, 11:02 PM IST

basavajaya-mritunjaya-swamiji
ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮಾಜ ದೊಡ್ಡ ಸಮಾಜ. ಈ ಸಮಾಜವನ್ನು ಕಳೆದುಕೊಳ್ಳಬಾರದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಮಗೆ ನ್ಯಾಯಕೊಡಿಸಲಿದ್ದಾರೆ ಎಂಬುದರ ಬಗ್ಗೆ ನಂಬಿಕೆ, ವಿಶ್ವಾಸವಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಕುಷ್ಟಗಿ (ಕೊಪ್ಪಳ): ಹುನಗುಂದ ತಾಲೂಕು ತುಂಬಾ ಹಿಂದುಳಿದಿದೆ. 2023ರಲ್ಲಿ ವಿಜಯಾನಂದ ಕಾಶಪ್ಪನವರ್ ಶಾಸಕರಾದ ಮೇಲೆ ತಾಲೂಕನ್ನು ಕಲ್ಯಾಣ ಕರ್ನಾಟಕ 371 (ಜೆ) ಕಲಂ ವ್ಯಾಪ್ತಿಗೆ ಸೇರಿಸಲು ಯತ್ನಿಸಲಿ ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಜಗದ್ಗುರು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಒತ್ತಾಯಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ

ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ 243ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯ ಹರಪಹಳ್ಳಿ ತಾಲೂಕನ್ನು ಹಿಂದಿನ ಶಾಸಕ ಎಂ. ಪಿ ರವೀಂದ್ರ ಅವರು ಹೋರಾಟದಿಂದ 371 (ಜೆ) ಕಲಂ ವ್ಯಾಪ್ತಿಗೆ ಸೇರಿಸಿದರು. ಅದೇ ರೀತಿಯಾಗಿ ವಿಜಯಾನಂದ ಕಾಶಪ್ಪನವರ್ ಪ್ರಯತ್ನಿಸಲಿ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಬಿಸಿ: 2021ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಬೆಳಗಾವಿ ಅಧಿವೇಶನ ಶುರುವಾಗುವ ಹೊತ್ತಿಗೆ ಸರ್ಕಾರಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಲು ಸನ್ನದ್ದರಾಗಬೇಕಿದೆ. ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಯಾರು ಹೇಗೆ ಬಿಸಿ ಮುಟ್ಟಿಸಿದ್ದಾರೆಂಬುದು ಅರಿವಾಗಿದೆ. ಪಂಚಮಸಾಲಿ ಸಮಾಜ ದೊಡ್ಡ ಸಮಾಜ. ಈ ಸಮಾಜವನ್ನು ಕಳೆದುಕೊಳ್ಳಬಾರದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಮಗೆ ನ್ಯಾಯಕೊಡಿಸಲಿದ್ದಾರೆ ಎಂಬುದರ ಬಗ್ಗೆ ನಂಬಿಕೆ, ವಿಶ್ವಾಸವಿದೆ ಎಂದು ತಿಳಿಸಿದರು.

ಪಂಚಮಸಾಲಿ ಮತಗಳಿಂದಲೇ ಬೊಮ್ಮಾಯಿ ಗೆಲುವು: ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಮತಕ್ಷೇತ್ರದಲ್ಲಿ 3 ಬಾರಿ ಗೆದ್ದಿರುವುದು ಪಂಚಮಸಾಲಿ ಮತಗಳಿಂದ. ಕಳೆದ ಸೆ.15ರಲ್ಲಿ ಸರ್ಕಾರಕ್ಕೆ ನೀಡಿದ್ದ ಗಡುವು ಮೀರಿದೆ. ಮತ್ತೊಂದು ಹೋರಾಟದ ಬಗ್ಗೆ ಸಿಎಂ ಬೊಮ್ಮಾಯಿ ಅವರು 3 ತಿಂಗಳ ಗಡುವು ತೆಗೆದುಕೊಂಡಿದ್ದಾರೆ. ಅವರ ಮನವಿ ಮೀರದಂತೆ ಸತ್ಯಾಗ್ರಹ ಮುಂದೂಡಿದ್ದೇವೆ ಹೊರತು ರದ್ದುಗೊಳಿಸಿಲ್ಲ. ಈ ಮೂರು ತಿಂಗಳಲ್ಲಿ ಮಾಡದೇ ಇದ್ದಲ್ಲಿ ಇನ್ಮುಂದೆ ಮಕ್ಕಳೊಂದಿಗೆ ಅಂತಿಮ ಹೋರಾಟಕ್ಕೆ ಅಣಿಯಾಗಲಿದ್ದೇವೆ ಎಂದು ಎಚ್ಚರಿಸಿದರು.

ಪ್ರತಿಜ್ಞಾ ಪಂಚಾಯತಿಯಿಂದ ಶುರುವಾಗಿದೆ ಹೋರಾಟದ ಕಿಚ್ಚು: ನಮ್ಮ ಸಮಾಜಕ್ಕೆ ಮೀಸಲಾತಿ ಪಾಲು ಪಡೆಯುವವರೆಗೂ ಯಾವುದೇ ಕಾರಣಕ್ಕೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ಪಂಚಾಯತಿ ಮೂಲಕ ಹೋರಾಟಕ್ಕೆ ಕಿಚ್ಚು ನೀಡಲಾಗುವುದು. ಹೀಗಾಗಿ, ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ಅದರಲ್ಲಿನ ಉಳಿಕೆ ಹಣದಲ್ಲಿ 2ಎ ಮೀಸಲಾತಿ ಹೋರಾಟಕ್ಕೆ ಅಣಿಯಾಗಬೇಕು. ಇನ್ನು ಮುಂದಿನ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಯಾರು ಪಂಚಮಸಾಲಿ 2ಎ ಮೀಸಲಾತಿಗೆ ಬೆಂಬಲಿಸುತ್ತಾರೋ ಅಂತವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ಓದಿ: ಭುಗಿಲೆದ್ದ ಸಿರಿಗೆರೆ ಶ್ರೀ ಪೀಠ ತ್ಯಾಗ ವಿಚಾರ: ಉತ್ತರಾಧಿಕಾರಿ ನೇಮಕಕ್ಕೆ ಒಂದು ಬಣ ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.