ಮಡಿಕೇರಿ(ಕೊಡಗು): ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು, ಸೇರಿದಂತೆ ಹಲವು ಗ್ರಾಮಗಳಲ್ಲಿ, ಸ್ವಂತ ಮನೆ ಇಲ್ಲದೆ ಕಾಫಿ ಎಸ್ಟೇಟ್ಗಳಲ್ಲಿ ಕೂಲಿ ಮಾಡುತ್ತ, ಅಲ್ಲೇ ಸಣ್ಣ ಪ್ರದೇಶಗಳಲ್ಲಿ ಗುಡಿಸಲು ಕಟ್ಟಿಕೊಂಡು ಬದುಕು ಸಾಗುಸುತ್ತಿದ್ದಾರೆ. ಸರ್ಕಾರದ ಖಾಲಿ ಜಾಗಕ್ಕೆ ಬಂದು ನೆಲಯೂರಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕಾಗಿರುವ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಜಾಗವನ್ನು ಕಬಳಿಸಿರುವ ಜಮೀನ್ದಾರರ ಪರವಾಗಿ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ವಸತಿ ರಹಿತರು ಆರೋಪಿಸುತ್ತಿದ್ದಾರೆ. ಯಾವುದೇ ದಾಖಲೆಗಳನ್ನು ಮಾಡಿಕೊಡದೆ ನೀವಿರುವ ಜಾಗ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಗುರುತಿನ ಚೀಟಿ ಸೇರಿದಂತೆ ಯಾವುದೇ ದಾಖಲೆಗಳನ್ನು ಮಾಡಿಕೊಡುತ್ತಿಲ್ಲವಂತೆ. ಹೀಗಾಗಿ ಕಳೆದ ಐದು ವರ್ಷಗಳಿಂದ ಕನಿಷ್ಠ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಗುವ ಪಡಿತರ ಕೂಡ ಸಿಗುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸರಿಯಾದ ದಾಖಲೆಗಳು ಇಲ್ಲದೆ ತಾವು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವಂತಹ ಸ್ಥಿತಿಯಲ್ಲಿ ಬದುಕುಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡಿ: ಹೈಸೊಡ್ಲೂರಿನಲ್ಲಿ ಮುಕ್ಕಾಲು ಎಕರೆ ಭೂಮಿಯಲ್ಲಿ 74 ಕುಟುಂಬಗಳು ಶೆಡ್ ಕಟ್ಟಿಕೊಂಡು ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಹೀನಾಯ ಬದುಕು ಸಾಗುಸಿತ್ತಿದ್ದೇವೆ. ನಾವು ಕೂಡ ಒಂದು ಸ್ವಂತ ಮನೆ ನಿರ್ಮಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದು ತಪ್ಪಾ ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ದೂರು: ನಮಗೆ ವಿವಿಧ ದಾಖಲೆಗಳನ್ನು ಮಾಡಿಕೊಡುವಂತೆ ಶಾಸಕರು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬೇಸತ್ತು ಜಿಲ್ಲಾಧಿಕಾರಿ ಮತ್ತು ತಹಶಿಲ್ದಾರ್ ಅವರ ವಿರುದ್ಧ ಕುಟುಂಬಗಳು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿವೆ. ತಮಗೆ ದಾಖಲೆಗಳನ್ನು ಮಾಡಿಕೊಡುವಂತೆ ಮನವಿಗಳನ್ನು ಕೊಟ್ಟರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ದಲಿತ ಹೋರಾಟಗಾರ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೊಡಗಿನಲ್ಲಿ ಲೈನ್ಮನೆಗಳಲ್ಲಿ ಬದುಕುತ್ತಿರುವ ಸಾವಿರಾರು ಆದಿವಾಸಿ, ದಲಿತ ಕುಟುಂಬಗಳು ಸ್ವಂತ ಸೂರು ಹೊಂದುವ ಕನಸು ಕಾಣಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿವೆ. ಅವರ ನೋವಿಗೆ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಸ್ಪಂದಿಸಿ ಸೂರು ಕಲ್ಪಿಸಬೇಕಿದೆ.
ಇದನ್ನೂ ಓದಿ: ಉತ್ತರ ಕನ್ನಡ: ರಾಜಕೀಯ ದಾಳವಾದ ಅರಣ್ಯ ಅತಿಕ್ರಮಣ ವಿಷಯ; ಆಡಳಿತ-ವಿಪಕ್ಷ ನಾಯಕರ ಜಟಾಪಟಿ