ETV Bharat / state

ಕಲಬುರಗಿ ಜಿಲ್ಲೆಯಲ್ಲಿ ಮಹಿಳಾ ಮತಬೇಟೆಗಿಳಿದ ಕೇಂದ್ರ ಸಚಿವೆ ಸೀತಾರಾಮನ್

author img

By

Published : Apr 26, 2023, 6:29 PM IST

union-minster-nirmala-sitharaman-campaigning-in-kalaburagi
ಕಲಬುರಗಿ: ಜಿಲ್ಲೆಯಲ್ಲಿ ಮಹಿಳಾ ಮತಬೇಟೆಗೆ ಇಳಿದ ವಿತ್ತ ಸಚಿವೆ ಸೀತಾರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದು ಕಲಬುರಗಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಮತಬೇಟೆಗೆ ಇಳಿದಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸಂವಾದ, ಮಹಿಳಾ ಸಮಾವೇಶದ ಮೂಲಕ ಮಹಿಳಾ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಮುಂದಾಗಿದ್ದಾರೆ. ಆಳಂದ ಪಟ್ಟಣದ ಎ.ಬಿ. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ ಸಚಿವೆ ಸೀತಾರಾಮನ್‌‌ ಅವರಿಗೆ ಆರತಿ ಬೆಳಗಿ, ಪುಷ್ಪವೃಷ್ಟಿ ಸುರಿಸುವ ಮೂಲಕ ಮಹಿಳೆಯರು ಸ್ವಾಗತ ಕೋರಿದರು.

ಕನ್ನಡದಲ್ಲಿ ನಮಸ್ಕಾರ ಎಂದು ಹೇಳಿ ಭಾಷಣ ಪ್ರಾರಂಭಿಸಿದ ಅವರು, ಕಾಂಗ್ರೆಸ್ ಪಕ್ಷ ಉಚಿತ ವಿದ್ಯುತ್, ಗೃಹಿಣಿಯರಿಗೆ ತಿಂಗಳಿಗೆ 2000, ನಿರುದ್ಯೋಗಿ ಯುವಕರಿಗೆ 1500 ರೂಪಾಯಿ ಕೊಡುತ್ತೇವೆ ಎಂದು ಭರವಸೆ ಕೊಡುತ್ತಿದೆ. ಕಾಂಗ್ರೆಸ್​​ನ ಇಂತಹ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ. ರಾಜಸ್ಥಾನ, ಛತ್ತಿಸಗಢನಲ್ಲಿ ಕೊಟ್ಟಿರುವ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿಲ್ಲ. ಕಾಂಗ್ರೆಸ್ ಸುಳ್ಳು ಭರವಸೆ ನೀಡುವುದರಲ್ಲಿ ಎತ್ತಿದ ಕೈ ಎಂದು ಕುಟುಕಿದರು.

ಮೋದಿ ಸರ್ಕಾರ, ರಾಜ್ಯದ ಬೊಮ್ಮಾಯಿ ಸರ್ಕಾರ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಹಿಳಾ ಸಶಕ್ತಿಕರಣಕ್ಕಾಗಿ ಯೋಜನೆಗಳನ್ನು ತರಲಾಗಿದೆ. ಪ್ರತಿಯೊಂದು ಯೋಜನೆಗಳಲ್ಲೂ ಮಹಿಳೆಯರಿಗಾಗಿ ಏನಿದೆ ಎಂದು ಮೋದಿ ನೋಡುತ್ತಾರೆ. ನಾನು ಬಜೆಟ್​ನಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗಾಗಿ ಹಣ ಮೀಸಲಿಟ್ಟಿದ್ದೇನೆ. ಮಹಿಳೆಯರು ಸ್ವಯಂ ಉದ್ಯೋಗ ಮಾಡಬಹುದು ಎಂದು ಬಿಜೆಪಿ ಪರ ಮತಯಾಚಣೆ ಮಾಡಿದರು.‌

ಕರ್ನಾಟಕ ಭವಿಷ್ಯಕ್ಕಾಗಿ, ಕಲ್ಯಾಣ ಕರ್ನಾಟಕ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಕೊಡಿ ಎಂದು ಮಹಿಳಾ ಮತದಾರರಲ್ಲಿ ಕೈ ಮುಗಿದು ಮನವಿ ಮಾಡಿದರು. ಆಳಂದ ಬಳಿಕ ಕಲಬುರಗಿಯಲ್ಲಿ ಮಹಿಳಾ ಸಮಾವೇಶದ ಮೂಲಕ ಮಹಿಳಾ ಮತಬೇಟೆ ಹಾಗೂ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಸಚಿವರು ಮತಯಾಚಿಸಿದರು.

ಕರ್ನಾಟಕದಲ್ಲೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಇದಕ್ಕೂ ಮುಂಚೆ ಕಲಬುರಗಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವ ಪೂರ್ಣದ್ದಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಗುರಿ ನಮ್ಮದಿದೆ. ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಯೊಂದಿಗೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲೂ ಇದೇ ರೀತಿ ವಿಕಾಸ್ ಮಾಡಬೇಕಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಬಿಎಸ್‌ವೈಗೆ ಗೌರವ, ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲ್​ಗೆ ಅವಮಾನ: ಬಿ ಎಸ್‌ ಯಡಿಯೂರಪ್ಪ ಅವರಿಗೆ ಕೊಡಬೇಕಾದ ಗೌರವವನ್ನು ನಾವು ಕೊಡುತ್ತಿದ್ದೇವೆ. ಒಳ್ಳೆ ಸ್ಥಾನಮಾನ ಕೊಟ್ಟು ಹಿರಿಯರಿಗೆ ಕೊಡಬೇಕಾದ ಗೌರವ ಕೊಟ್ಟಿರುವ ತೃಪ್ತಿ ಇದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಿಎಂ ವೀರೇಂದ್ರ ಪಾಟೀಲ್​ರನ್ನ ಅವಮಾನಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಿದರು. ಒಂದು ಕುಟುಂಬದ ಗುಲಾಮರಾಗಿರುವ ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಮೋದಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವಾಗ ಅವರ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳೋಳ್ಳುವುದರಲ್ಲಿ ತಪ್ಪೇನಿದೆ ಎಂದು ಸೀತಾರಾಮನ್​ ಪ್ರಶ್ನಿಸಿದರು.

ಇದನ್ನು ಓದಿ: ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.