ETV Bharat / state

ಬಿಜೆಪಿ ಕೆಳಗಿಳಿಸಿ ಕಾಂಗ್ರೆಸ್​ ಆಡಳಿತಕ್ಕೆ ತರಲು ನಿರ್ಧರಿಸಿರುವ ಜನ..ಎಂ ಬಿ ಪಾಟೀಲ್​

author img

By

Published : Aug 19, 2022, 1:01 PM IST

Congress Campaign Committee President M B Patil
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್

ಅಭಿವೃದ್ಧಿ, ಸಾಧನೆ ಇಲ್ಲದೇ ಹಿಂದೂ ಮುಸ್ಲಿಮರನ್ನು ವಿಭಜನೆ ಮಾಡಿ ಲಾಭ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ. ಅದಕ್ಕೆ ಜನ ಈ ಸರ್ಕಾರವನ್ನು ಕಿತ್ತೊಗೆಯೋಕೆ ತೀರ್ಮಾನಿಸಿದ್ದಾರೆ. ಚುನಾವಣೆಯಲ್ಲಿ 40 ರಿಂದ 50 ಸೀಟ್​ಗೆ ಬಿಜೆಪಿ ಸೀಮಿತವಾಗಲಿದೆ ಎಂದು ಎಂ ಬಿ ಪಾಟೀಲ್​ ಹೇಳಿದ್ದಾರೆ.

ಕಲಬುರಗಿ: ಬಿಜೆಪಿ ದುರಾಡಳಿತದಿಂದ ಜನ ಬೆಸತ್ತಿದ್ದಾರೆ. ನಮಗೆ ಅಚ್ಚೆದಿನ್ ಬೇಡಾ ಹಳೆಯ ದಿನಗಳೇ ಸಾಕು ಎಂದು ಜನ ಹೇಳ್ತಿದ್ದಾರೆ.‌ ಬಿಜೆಪಿ ಆಡಳಿತದಿಂದ ರೋಸಿಹೋದ ಜನರು, ಎಲ್ಲ ಜನಾಂಗದವರು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತರಲು ನಿರ್ಧರಿಸಿದ್ದಾರೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯಿಂದಲೇ ಪ್ರಚಾರ ಆರಂಭಿಸಲು ನಿರ್ಧರಿಸಿದ ಪಾಟೀಲ್, ಇಂದು ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ‌. ಈ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಚ್ಚೆ ದಿನ್ ಎಂದು ಗ್ಯಾಸ್ ಬೆಲೆ, ಅಡುಗೆ ಎಣ್ಣೆ ಬೆಲೆ ಸೇರಿ ಪ್ರತಿಯೊಂದರ ಬೆಲೆ ಗಗಣಕ್ಕೇರಿಸಿ ಕುಳಿತಿದ್ದಾರೆ. ಚುನಾವಣೆ ಯಾವಾಗ ಬರುತ್ತೆ, ಯಾವಾಗ ಇವರನ್ನು ಆಡಳಿತದಿಂದ ಇಳಿಸಬೇಕು ಎಂದು ಜನ ಪರಿತಪಿಸಿಕೊಂಡು ಕುಳಿತಿದ್ದಾರೆ. ಹೀಗಾಗಿ ನೀರಿಕ್ಷೆಗೂ ಮೀರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮತಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದ ಎಂ ಬಿ ಪಾಟೀಲ್​

ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯವಾಗಿ ದಾಳಿಗಳನ್ನು ನಡೆಸುವ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಲ್ಲಿರುವ ಭ್ರಷ್ಟ ಸಚಿವರ ಮೇಲೆ‌ ಯಾಕೆ ಐಟಿ, ಸಿಬಿಐ ದಾಳಿ ಮಾಡುವುದಿಲ್ಲ. ಸಚಿವರಾಗಿ ಮಾಧುಸ್ವಾಮಿ ರಾಜ್ಯದಲ್ಲಿ ಸರ್ಕಾರ ಇಲ್ಲ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದು ಬಿಜೆಪಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎರಡೂವರೆ ಲಕ್ಷ ಕೋಟಿ ಇದ್ದ ಸಾಲ ಐದು ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದರು.

ಲಾಭಕ್ಕಾಗಿ ಬಿಎಸ್​​​ವೈಗೆ ಸ್ಥಾನ: ಅಭಿವೃದ್ಧಿ, ಸಾಧನೆ ಇಲ್ಲದೆ ಹಿಂದೂ ಮುಸ್ಲಿಮರನ್ನು ವಿಭಜನೆ ಮಾಡಿ ಲಾಭ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ. ಅದಕ್ಕೆ ಜನ ಈ ಸರ್ಕಾರವನ್ನು ಕಿತ್ತೊಗೆಯೋಕೆ ತೀರ್ಮಾನಿಸಿದ್ದಾರೆ. ಚುನಾವಣೆಯಲ್ಲಿ 40 ರಿಂದ 50 ಸೀಟ್​ಗೆ ಬಿಜೆಪಿ ಸೀಮಿತವಾಗಲಿದೆ. 2023ರಲ್ಲಿ ರಾಜ್ಯದಲ್ಲಿ 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಪಾಟೀಲ್ ಭವಿಷ್ಯ ನುಡಿದರು.

ಇನ್ನು ಯಡಿಯೂರಪ್ಪಗೆ ರಾಷ್ಟ್ರೀಯ ಸಂಸದೀಯ ಸ್ಥಾನ‌ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಾಟೀಲ್, ಯಡಿಯೂರಪ್ಪ ಹಿರಿಯರು, ದೇವರು ಅವರಿಗೆ ಆರೋಗ್ಯ ಆಯುಷ್ಯ ನೀಡಲಿ, ಈಗ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಮೇಲೆ ವಿಶೇಷ ಪ್ರೀತಿ ಬಂದಿದೆ. ನಿನ್ನೆಯವರೆಗೂ ಯಡಿಯೂರಪ್ಪ ಮನೆಯಲ್ಲಿ ಯಾರು ಇರುತ್ತಿರಲಿಲ್ಲ. ಯಡಿಯೂರಪ್ಪ ಅವರಿಗೆ ಯಾವತ್ತು ಪೂರ್ಣ ಅವಧಿಗೆ ಅಧಿಕಾರ ಕೊಟ್ಟಿಲ್ಲ. ಕೇವಲ ಮತ ಸೆಳೆಯಲು ಇಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇಂತವರು ನಾಳೆ ಯಡಿಯೂರಪ್ಪ ಅವರನ್ನು ಚುನಾವಣೆ ನಿಲ್ಲೋಕೆ ಬಿಡ್ತಾರ? ಮುಖ್ಯಮಂತ್ರಿ ಮಾಡ್ತಾರಾ? ಇದರಿಂದ ಯಡಿಯೂರಪ್ಪ ಅವರಿಗೆ ಏನು ಉಪಯೋಗ ಇಲ್ಲ. ಯಡಿಯೂರಪ್ಪ ಅರವನ್ನು ಉಪಯೋಗಿಸಿಕೊಳ್ಳೋದಕ್ಕೆ ಬಿಜೆಪಿ ಮುಂದಾಗಿದೆ. ಬಿಜೆಪಿ ಪಕ್ಷ ಐಸಿಯುನಲ್ಲಿ ಆಕ್ಸಿಜನ್ ಮೇಲಿದೆ. ಯಡಿಯೂರಪ್ಪ ಮೂಲಕ ಆಕ್ಸಿಜನ್ ಕೋಡೊದಕ್ಕೆ ಮುಂದಾಗಿದೆ ಎಂದರು.

ಇದು ಬಿಜೆಪಿ ಪ್ರಾಯೋಜಕತ್ವದ ಪ್ರಕರಣ: ಇದೆ ವೇಳೆ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿದ ಎಂ ಬಿ ಪಾಟೀಲ್, ಇದೊಂದು ಬಿಜೆಪಿ ಪ್ರಾಯೋಜಕತ್ವದಿಂದ ಆಗಿರುವ ಪ್ರಕರಣ, ಇತ್ತೀಚಿನ ಕಾಂಗ್ರೆಸ್ ಶಕ್ತಿ ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಮೊಟ್ಟೆ ಒಡೆಯುವುದು ದೊಡ್ಡ ಕೆಲಸ ಅಲ್ಲ. ನಮಗೆ ಮಾಡೋಕೆ ಬರೋದಿಲ್ವಾ, ಆದ್ರೆ ನಾವು ಮಾಡೋದಿಲ್ಲ. ಇದು ಚಿಲ್ಲರೆ ಕೆಲಸ, ಯಾರೂ ಮಾಡೋದಕ್ಕೆ ಹೋಗಬಾರದು ಎಂದರು.‌

ಪ್ರತ್ಯೇಕ ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಚುನಾವಣೆ ಮುಗಿದ ಮೇಲೆ ಎರಡು ಕಡೆಯ ಸ್ವಾಮೀಜಿಗಳು ಹಿರಿಯರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ. ಚುನಾವಣೆ ಸಂದರ್ಭದಲ್ಲಿ ಅರ್ಥಕ್ಕೆ ಅನರ್ಥ ಸೃಷ್ಟಿಯಾಗುತ್ತೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅದರದ್ದೇ ಆದ ಟೈಮ್ ಬೇಕಾಗುತ್ತದೆ. ಒಂದು ವರ್ಷ ಎರಡು ವರ್ಷ ಐದು ವರ್ಷ ಆಗಬಹುದು ಎಂದು ಎಂ ಬಿ ಪಾಟೀಲ್ ಹೇಳಿದರು.

ಇದನ್ನೂ ಓದಿ : ಅಷ್ಟೊಂದು ಪ್ರೀತಿ ಇದ್ರೆ ಬಿಎಸ್​ವೈ ಅವ್ರನ್ನು ಸಿಎಂ ಮಾಡ್ತೀವಿ ಎಂದು ಬಿಜೆಪಿ ಘೋಷಿಸಲಿ: ಎಂಬಿಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.