ETV Bharat / state

ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಯ ಅಭಿಮಾನಿಯಿಂದ 20 ಕಿ.ಮೀ ದೀರ್ಘ ದಂಡ ನಮಸ್ಕಾರ

author img

By

Published : Apr 10, 2023, 3:48 PM IST

ದೀರ್ಘ ದಂಡ ನಮಸ್ಕಾರ
ದೀರ್ಘ ದಂಡ ನಮಸ್ಕಾರ

ಅಫಜಲಪುರ ವಿಧನಾಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿತೀನ್ ಗುತ್ತೇದಾರ್ ಅವರಿಗೆ ಟಿಕೆಟ್ ಸಿಗಬೇಕೆಂದು ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಅಭಿಮಾನಿಯೊಬ್ಬರು ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ದೀರ್ಘ ದಂಡ ನಮಸ್ಕಾರ

ಕಲಬುರಗಿ : ವಿಧಾನಸಭಾ ಚುನಾವಣೆಯ ಅಖಾಡ ಕಾವೇರುತ್ತಿದೆ. ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳು ಪಕ್ಷದ ಮುಖಂಡರಿಗೆ ದುಂಬಾಲು ಬೀಳುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ನಿತಿನ್ ಗುತ್ತೆದಾರ್ ಅವರಿ​ಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರ ಮೊರೆ ಹೋಗಿದ್ದಾರೆ. ಸುಮಾರು 20 ಕಿಲೋ ಮೀಟರ್ ದೂರದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ.

ಜಿಲ್ಲೆಯ ಫರಹತಾಬಾದ್​ದಿಂದ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಅಭಿಮಾನಿ ರವಿ ಮಡಿವಾಳ ಎಂಬವರು ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ. ಅಫಜಲಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ನಿತೀನ್ ಗುತ್ತೇದಾರ್‌ರಿಗೆ ಟಿಕೆಟ್ ಸಿಗಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಸಿಲು ಲೆಕ್ಕಿಸದ ಇವರು ಸುಮಾರು 20 ಕಿ.ಮೀ ದೂರ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಗಮನ ಸೆಳೆಯುತ್ತಿದ್ದಾರೆ.

ಟಿಕೆಟ್​ಗಾಗಿ ಗುತ್ತೇದಾರ್ ಕಸರತ್ತು: ಅಫಜಲಪುರ ಮತ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​​ಗಾಗಿ ಸಹೋದರರ ಮಧ್ಯೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ಇವರ ಸಹೋದರ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ್ ಕೂಡ ಇದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಅಣ್ಣನ ವಿರುದ್ಧವೇ ಪೈಪೋಟಿ: ಕಳೆದ ಬಾರಿಯ ಚುನಾವಣೆಯಲ್ಲಿ, "ಇದು ನನ್ನ ಕೊನೆಯ ಸ್ಪರ್ಧೆ. ಇನ್ನು ಮುಂದೆ ಸಹೋದರನಿಗೆ ಅವಕಾಶ ಮಾಡಿ ಕೊಡುವೆ" ಎಂದು ಮಾಲೀಕಯ್ಯ ಗುತ್ತೇದಾರ್ ಸಹೋದರ ನಿತಿನ್‌ಗೆ ಮಾತು ಕೊಟ್ಟಿದ್ದರಂತೆ. ಆದ್ರೆ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಇದೊಂದು ಬಾರಿ ಸ್ಪರ್ಧೆ ಮಾಡುವುದಾಗಿ ಮಾಲಿಕಯ್ಯ ಗುತ್ತೇದಾರ್ ಹೇಳುತ್ತಿದ್ದಾರೆ. ಅಣ್ಣನ ನಡೆಯಿಂದ ಅಸಮಾಧಾನಗೊಂಡಿರುವ ನಿತಿನ್ ಗುತ್ತೇದಾರ್ ಅಣ್ಣನ ವಿರುದ್ಧವೇ ಸೆಡ್ಡು ಹೊಡೆದು ನಿಂತಿದ್ದಾರೆ. ಬಿಜೆಪಿ ಟಿಕೆಟ್ ಪಡೆಯಲು ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.

ನಿತಿನ್ ಗುತ್ತೇದಾರ್ ತಮ್ಮ ತಂಡ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಹೋದರರನ್ನು ಹೊರತುಪಡಿಸಿ ಇತರರೂ ಸಹ ಬಿಜೆಪಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.

ಮತ ಜಾಗೃತಿ ಸಿಬ್ಬಂದಿಗೆ ತರಾಟೆ: ಮತದಾನ ಜಾಗೃತಿಗೆ ಬಂದಿರುವ ಸಿಬ್ಬಂದಿಯನ್ನೇ ಮತದಾರರು ತರಾಟೆಗೆ ತೆಗೆದುಕೊಂಡ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಕಸ ತೆಗೆಯುವ ವಾಹನದಲ್ಲಿ ಮತದಾರರಿಗೆ ಮತದಾನ ಜಾಗೃತಿ ಮೂಡಿಸಲು ಅಲ್ಲಪುರ ಗ್ರಾಮಕ್ಕೆ ಆಗಮಿಸಿದಾಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಸ ಸ್ವಚ್ಚಗೊಳಿಸಲು ಒಂದೂ ದಿನವೂ ನಮ್ಮ ಊರಿಗೆ ಬಂದಿಲ್ಲ. ಇವಾಗ ಮತ ಹಾಕಿ ಎಂದು ಹೇಳಲು ಬಂದಿದ್ದಿರಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಎಲೆಕ್ಷನ್ ಆದ ಮೇಲೆ ಶಾಸಕರು ಒಂದು ದಿನವೂ ನಮ್ಮೂರಿಗೆ ಬಂದಿಲ್ಲ. ಏನೂ ಕೆಲಸ ಕೂಡ ಮಾಡಿಲ್ಲ. ಮತ ಹಾಕಿ ಏನ್ ಪ್ರಯೋಜನ ಎಂದು ಶಾಸಕ ಅಜಯ್ ಸಿಂಗ್ ಕಾರ್ಯವೈಖರಿ ಬಗ್ಗೆಯೂ ಅಲ್ಲಾಪುರ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ: ಹೆಚ್​​​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.