ರಾಣೆಬೆನ್ನೂರು: ದೇಶದಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದ್ದು, ಬಹಳಷ್ಟು ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಆತಂಕ ವ್ಯಕ್ತಪಡಿಸಿದರು.
ಪಿಕೆಕೆ ಇನಿಷಿಯೇಟಿವ್ ಹಾಗೂ ಎಲ್ಸಿಸಿ ಧಾರವಾಡ ಇವರ ವತಿಯಿಂದ ನಡೆದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸದ್ಯ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಮುಚ್ಚುತ್ತಿದ್ದು, ಅಲ್ಲಿರುವ ನೌಕರರು ಬೀದಿಗೆ ಬಂದಿದ್ದಾರೆ. ಅಂತಹ ಒಂದು ದೊಡ್ಡ ಸಮಸ್ಯೆಯಲ್ಲಿ ಪಿಕೆಕೆ ಇನಿಷಿಯೇಟಿವ್ ವತಿಯಿಂದ ಹಲವು ಕಂಪನಿಗಳನ್ನು ನಗರಕ್ಕೆ ಕರೆದುಕೊಂಡು ಬಂದು ಉದ್ಯೋಗ ಮೇಳ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸತತವಾಗಿ ಐದನೇ ಬಾರಿ ಉದ್ಯೋಗ ಮೇಳ ಮಾಡುತ್ತಿರುವ ಪಿಕೆಕೆ ಕಂಪನಿ ಈದುವರೆಗೆ ಸುಮಾರು 4500 ಜನರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಒದಗಿಸಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್, ಒಮೆಗಾ, ಗ್ರೇಟ್ ಟೆಕ್ನಾಲಜಿ, ಹೆಚ್ಜಿಎಸ್, ಡಿಜಿಕಾಲ್, ಓಲಾ, ಏರ್ಟೆಕ್ ಸೇರಿದಂತೆ ವಿವಿಧ ಕಂಪನಿಗಳು ಭಾಗಿಯಾಗಿದ್ದವು.