ETV Bharat / state

ಕೊರತೆಗಳ ಪಾಠ ಶಾಲೆಯಾದ ಬ್ಯಾಡಗಿಯ ಎಸ್​ಜೆಜೆಎಂ ಪಬ್ಲಿಕ್ ಸ್ಕೂಲ್​.. ಜಗತ್ತು ಬೆಳಗುವ ಮಕ್ಕಳಿಗೆ ಕತ್ತಲಲ್ಲೇ ಪಾಠ

author img

By

Published : Jul 22, 2023, 2:52 PM IST

ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ ಪಬ್ಲಿಕ್ ಸ್ಕೂಲ್
ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ ಪಬ್ಲಿಕ್ ಸ್ಕೂಲ್

ಬ್ಯಾಡಗಿ ಪಟ್ಟಣದ ಪ್ರತಿಷ್ಠಿತ ಎಸ್​ಜೆಜೆ ಎಂ ಪಬ್ಲಿಕ್ ಶಾಲೆಯಲ್ಲಿ ಸೌಲಭ್ಯ ಕೊರತೆ ಕುರಿತು ಪೋಷಕರು ಆರೋಪಿಸಿದ್ದಾರೆ.

ಕೊರತೆಗಳ ಪಾಠ ಶಾಲೆಯಾದ ಬ್ಯಾಡಗಿಯ ಎಸ್​ಜೆಜೆಎಂ ಪಬ್ಲಿಕ್ ಸ್ಕೂಲ್​.. ಜಗತ್ತು ಬೆಳಗುವ ಮಕ್ಕಳಿಗೆ ಕತ್ತಲಲ್ಲೇ ಪಾಠ

ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಹಲವು ದಶಕಗಳನ್ನು ಕಂಡ ಶಾಲೆ. ಈ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಡಗಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಅಜ್ಞಾನದ ಕತ್ತಲೆ ಓಡಿಸಿ ಬೆಳಕು ನೀಡಬೇಕಾದ ಶಾಲೆಯಲ್ಲಿ ವಿದ್ಯುತ್ ಇಲ್ಲ. ಇಲ್ಲಿಯ ಮಕ್ಕಳು ಕತ್ತಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮೂಲೆ ಮೂಲೆಯಲ್ಲಿ ಅಸ್ವಚ್ಚತೆ ಮನೆ ಮಾಡಿದ್ದು ಎಲ್ಲೆಂದರಲ್ಲಿ ಧೂಳು ಕಣ್ಣಿಗೆ ರಾಚುತ್ತದೆ. ಇನ್ನು ಶಾಲೆಯಲ್ಲಿ 1350 ವಿದ್ಯಾರ್ಥಿಗಳು ಓದುತ್ತಿದ್ದು ಶಾಲೆಗೆ ಸುಸಜ್ಜಿತ ಶೌಚಾಲಯ ಇಲ್ಲ.

ಮಳೆ ಬಂದರೆ ಸಾಕು ಶಾಲೆಯ ಎಲ್ಲೆಂದರಲ್ಲಿ ಸೋರುತ್ತದೆ. ಮಳೆಗಾಲದಲ್ಲಿ ಒಡೆದ ಹಂಚುಗಳ ನಡುವೆ ಸೋರುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಸಮರ್ಪಕ ಸಿಬ್ಬಂದಿ ಇಲ್ಲ. ಬೆರಳೆಣಿಕೆಯಷ್ಟು ಶಿಕ್ಷಕರಿದ್ದು, ಅವರೇ ಎಲ್ಲ ತರಗತಿಗಳನ್ನು ನಿಭಾಯಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಸಿಪಾಯಿಗಳು ಇಲ್ಲದ ಕಾರಣ ಕಸ ಗುಡಿಸುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳೇ ಬೇಗನೆ ಬಂದು ಶಾಲೆಯಲ್ಲಿ ಕಸಗುಡಿಸಬೇಕಾಗುತ್ತದೆ.

ಶಾಲೆಯಲ್ಲಿ ಪೀಠೋಪಕರಣಗಳು ಇಲ್ಲದ ಕಾರಣ ಮಕ್ಕಳು ಮನೆಯಿಂದ ಚಾಪೆ ಸೇರಿದಂತೆ ತಟ್ಟೆಗಳನ್ನು ತೆಗೆದುಕೊಂಡು ಶಾಲೆಯಲ್ಲಿ ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಮೇಲ್ಚಾವಣೆ ಮಂಗಳೂರು ಹಂಚಿನಿಂದ ಮಾಡಿದ್ದು ಎಲ್ಲೆಂದರಲ್ಲಿ ಒಡೆದು ಹಾಳಾಗಿವೆ. ಬೇಸಿಗೆಯಲ್ಲಿ ಬಿಸಿಲಿನ ಕಿರಣಗಳು ಬಂದರೆ ಮಳೆಗಾಲದಲ್ಲಿ ಮಳೆಯ ಹನಿಗಳು ಬೀಳುತ್ತವೆ.

ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ ಪಬ್ಲಿಕ್ ಸ್ಕೂಲ್
ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ ಪಬ್ಲಿಕ್ ಸ್ಕೂಲ್

ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು ಅದರಲ್ಲಿಯೂ ಬ್ಲಾಕ್ ಬೋರ್ಡ್‌ಗಳು ಸೀಳುಬಿಟ್ಟಿವೆ. ಇನ್ನು ವಿದ್ಯಾರ್ಥಿಗಳಿಗೆ ನೀಡುವ ಆಹಾರ ಸಹ ಕಳಪೆಯಾಗಿರುತ್ತದೆ ಎನ್ನುತ್ತಾರೆ ಪೋಷಕರು. ಮಕ್ಕಳಿಗೆ ನೀಡುವ ಆಹಾರದಲ್ಲಿ ಹುಳು ಉಪ್ಪಟಿಗಳು ಕಲ್ಲುಗಳು ಬರುತ್ತವೆ ಎನ್ನುತ್ತಾರೆ ಪೋಷಕರು. ಮನೆಯಿಂದ ಮಕ್ಕಳಿಗೆ ಊಟ ಕಳಿಸಿದರೆ ಶಾಲೆಯ ಶಿಕ್ಷಕರು ಬೇಡ ಎನ್ನುತ್ತಾರೆ.

ಆದರೆ ಅವರು ನೀಡುವ ಆಹಾರ ಮಾತ್ರ ಕಳಪೆಯದ್ದಾಗಿರುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಶಾಲೆಯಲ್ಲಿ ಬರುವ ಮಕ್ಕಳಿಗೆ ಭದ್ರತೆ ಇಲ್ಲ ಶಾಲೆಗೆ ಜವಾನ ಸಹ ಇಲ್ಲ. ಹೀಗಾಗಿ ಶಾಲೆಗೆ ಮಕ್ಕಳನ್ನು ಕಳಿಸಿದರೆ ನಾವು ಮಕ್ಕಳು ಶಾಲೆಯಿಂದ ಮನೆಗೆ ಬರುವವರೆಗೆ ಆತಂಕದಲ್ಲಿರಬೇಕಾಗುತ್ತದೆ ಎನ್ನುತ್ತಾರೆ ಪೋಷಕರು.

ಇನ್ನು ಈ ಕುರಿತಂತೆ ವಾರದಲ್ಲಿ ಒಮ್ಮೆಯಾದರೂ ಪೋಷಕರು ಶಾಲೆಗೆ ಬರಲೇಬೇಕಾದ ಅನಿವಾರ್ಯತೆ ಇದೆ. ಶಾಲೆಯ ಸಮಸ್ಯೆಗಳ ಬಗ್ಗೆ ಶಿಕ್ಷಕರಿಗೆ ಮುಖ್ಯೋಪಾದ್ಯಾಯರ ಗಮನಕ್ಕೆ ತರಲಾಗಿದೆ. ಆದರೆ ಸಮಸ್ಯೆ ಆಲಿಸಿದ್ದು ಬಿಟ್ಟರೆ ಯಾವ ಸಮಸ್ಯೆಗೆ ಸಹ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಪೋಷಕರು.

ಇನ್ನು ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಸಹ ಕೆಲ ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಶಾಸಕರು ಬಂದಾಗ ಎಲ್ಲ ಸರಿಮಾಡುವ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಈ ಕಡೆ ಮುಖ ಮಾಡುವದಿಲ್ಲ. ನಮ್ಮ ಮಕ್ಕಳಿಗೆ ಸುಸಜ್ಜಿತ ಶಾಲೆ ಬೇಕು ಅಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ ಶಾಲೆಯಲ್ಲಿರುವ ಅವ್ಯವಸ್ಥೆಯನ್ನು ಸರಿಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: 6 ವರ್ಷದಲ್ಲಿ 13 ಕನ್ನಡ ಶಾಲೆಗಳಿಗೆ ಬೀಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.