ETV Bharat / state

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸಚಿವ ಮನೋಹರ್ ತಹಶೀಲ್ದಾರ್: ಕಣ್ಣೀರು ಹಾಕಬೇಡಿ ಎಂದ ಬೆಂಬಲಿಗರು

author img

By

Published : Apr 8, 2023, 9:34 AM IST

Updated : Apr 8, 2023, 2:36 PM IST

manohar tahsildar
ಮನೋಹರ್ ತಹಶೀಲ್ದಾರ್

ಪಕ್ಷಕ್ಕಾಗಿ 50 ವರ್ಷ ದುಡಿದ ನನ್ನನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹಾನಗಲ್‌ನಲ್ಲಿ ನಡೆದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ವೇದಿಕೆ ಮೇಲೆ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಕಣ್ಣೀರು ಹಾಕಿದರು.

ವೇದಿಕೆ ಮೇಲೆ ಭಾವುಕರಾದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್

ಹಾವೇರಿ : ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಸಾರ್ವಜನಿಕ ಸಭೆಯ ವೇದಿಕೆ ಮೇಲೆ ಕಣ್ಣೀರಿಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದಿದೆ. ಶುಕ್ರವಾರ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಹಾನಗಲ್​ಗೆ ಆಗಮಿಸಿತು. ಈ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ರೋಡ್ ಶೋ ಮೂಲಕ ಕರೆ ತರಲಾಯಿತು. ನಗರದ ಕುಮಾರೇಶ್ವರ ಮಠದಿಂದ ಆರಂಭವಾದ ರೋಡ್ ಶೋ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹಳೇ ಬಸ್ ನಿಲ್ದಾಣದ ಹತ್ತಿರದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದು ತಲುಪಿತು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್ ಧ್ವಜ ನೀಡುವ ಮೂಲಕ ಮಾಜಿ ಸಚಿವ ಮನೋಹರ್ ತಹಶೀಲ್ದಾರ್‌ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ನಂತರ ಮಾತನಾಡಲು ಮುಂದಾದ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ಪಕ್ಷ ನಡೆದುಕೊಂಡ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ನಾನು ಹಾಲಿ ಶಾಸಕನಾಗಿದ್ದರೂ ಸಹ ನನ್ನ ಬಿಟ್ಟು ಶ್ರೀನಿವಾಸ್ ಮಾನೆಗೆ ಹಾನಗಲ್ ಕ್ಷೇತ್ರದ ಟಿಕೆಟ್ ನೀಡಿದರು. ನನಗೆ ಎಂಎಲ್​ಸಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೂ ಯಾವುದೇ ಸ್ಥಾನಮಾನ ನೀಡಲಿಲ್ಲ. 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಹ ನನಗೆ ಟಿಕೆಟ್ ನೀಡಲಿಲ್ಲ. ಪಕ್ಷಕ್ಕಾಗಿ 50 ವರ್ಷ ದುಡಿದ ನನ್ನನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೊಂದು ಬಾರಿ ನನಗೆ ಕೊನೆಯ ಅವಕಾಶ ನೀಡಿ ಎಂದು ಮನವಿ ಮಾಡಿದ್ದೆ. ಬಳಿಕ, ಕಾಂಗ್ರೆಸ್​ ನಾಯಕರು ನನ್ನ ಕಡೆ ನೋಡಲಿಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದರು. ಮಾಜಿ ಸಚಿವರು ಕಣ್ಣೀರು ಹಾಕುತ್ತಿದ್ದಂತೆ ಬೆಂಬಲಿಗರು ನೀವು ಕಣ್ಣೀರು ಹಾಕಬೇಡಿ ನಿಮ್ಮೆ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಇದನ್ನೂ ಓದಿ : 'ನಾನು ಯಾರ ಹತ್ತಿರವೂ ಸೂಟ್‌ಕೇಸ್ ಪಡೆದಿಲ್ಲ': ಮಾಜಿ ಸಚಿವ ಮನೋಹರ್ ತಹಶೀಲ್ದಾರ್

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ "ಕಾಂಗ್ರೆಸ್ ಮನೋಹರ್ ತಹಶೀಲ್ದಾರ್​ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ತಿಳಿಸಿದರು. ನಾನು ಎರಡು ಬಾರಿ ಹಾನಗಲ್ ಕ್ಷೇತ್ರಕ್ಕೆ ಬಂದು ಮನೋಹರ್ ಪರ ಪ್ರಚಾರ ಮಾಡುತ್ತೇನೆ. ರೈತರಿಗೆ ಮಾತು ಕೊಟ್ಟಿದ್ದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ. ಆದರೆ, ಸಂಪೂರ್ಣ ಬಹುಮತ ಸಿಗದ ಕಾರಣ ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡಲಾಗಲಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿದಾಗ ಬಡತನ ಎದ್ದು ಕಾಣುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ ರಾಜ್ಯದ ಬಡತನ ನೀಗಿಸಲು ಮತ್ತು ಉದ್ಯೋಗ ನೀಡಲು ಸಾಧ್ಯವಾಗಿಲ್ಲ" ಎಂದು ಆರೋಪಿಸಿದರು.

ಇದನ್ನೂ ಓದಿ : ಜೆಡಿಎಸ್ ಅಭ್ಯರ್ಥಿ - ಪೊಲೀಸ್ ಕಮಿಷನರ್ ನಡುವೆ ವಾಗ್ವಾದ: 8 ಮಂದಿ ವಿರುದ್ಧ ಪ್ರಕರಣ

ಪಂಚರತ್ನ ಯಾತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನ ನೀಡುವ ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಸರಿಯಾದ ಶೌಚಾಲಯವಿಲ್ಲ, ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಹಾನಗಲ್ ಮಹಾಜನತೆಯ ಬದುಕು ಹಸನಾಗಬೇಕಾದರೆ, ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಮನೋಹರ್ ತಹಶೀಲ್ದಾರ್ ಆಯ್ಕೆ ಮಾಡಿ ಎಂದು ಹೆಚ್​ ಡಿ ಕೆ ಮನವಿ ಮಾಡಿದರು.

Last Updated :Apr 8, 2023, 2:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.