ETV Bharat / state

ಹಾವೇರಿ: ಮಹಿಳೆಗೆ ಕೊರೊನಾ ರೂಪಾಂತರಿ JN.1 ದೃಢ

author img

By ETV Bharat Karnataka Team

Published : Dec 30, 2023, 10:39 PM IST

ಹಾವೇರಿ ಜಿಲ್ಲೆಯಲ್ಲಿ 59 ವರ್ಷದ ಮಹಿಳೆಯಲ್ಲಿ ಕೊರೊನಾ ರೂಪಾಂತರಿ ತಳಿ ವೈರಸ್ ಕಾಣಿಸಿಕೊಂಡಿದೆ.​

59 ವರ್ಷದ ಮಹಿಳೆಗೆ ಕೊರೊನಾ ಧೃಡ
59 ವರ್ಷದ ಮಹಿಳೆಗೆ ಕೊರೊನಾ ಧೃಡ

ಹಾವೇರಿ: ಜಿಲ್ಲೆಯಲ್ಲಿ ಮೊದಲ JN.1 ವೈರಸ್ ಪತ್ತೆಯಾಗಿದೆ. 59 ವರ್ಷದ ಮಹಿಳೆ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ಕೊರೊನಾ ಇರುವುದು ದೃಢಪಟ್ಟಿದೆ. ಸದ್ಯ ಮಹಿಳೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದಾರೆ. ಕೊರೊನಾ ಕೇಸ್ ಪ್ರಕರಣ ಇರುವುದನ್ನು ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ಖಚಿತಪಡಿಸಿದ್ದಾರೆ. ಈಗಾಗಲೇ ಹಾವೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಕೊರೊನಾ ನೂತನ ವೈರಸ್ ಕಾಣಿಸಿಕೊಂಡರೆ ತೆಗೆದುಕೊಳ್ಳಬೇಕಾದ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆ ಮಾಡಲಾಗಿದೆ. 24 ಬೆಡ್ ಇರುವ ವಾರ್ಡ್ ತೆರೆಯಲಾಗಿದ್ದು, ಆಕ್ಸಿಜನ್ ಪ್ಲ್ಯಾಂಟ್, ಆಕ್ಸಿಜನ್ ಸಿಲಿಂಡರ್, 136 ಜಂಬೋ ಸಿಲಿಂಡರ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ 8 ತಾಲೂಕು ಆಸ್ಪತ್ರೆಗಳಲ್ಲಿ ವಾರ್ಡ್ ತೆರೆಯಲಾಗಿದೆ. ಐಸಿಯೂ ಎನ್ ಸಿಯೂ ಕೋವಿಡ್ ವಾರ್ಡ್​ಗಳಲ್ಲಿ ಸರಿಯಾಗಿ ಅಕ್ಸಿಜನ್ ಸರಬರಾಜು ಆಗುತ್ತದೆಯೋ ಇಲ್ಲವೋ ಎಂದು ಪರೀಕ್ಷೆ ಕೂಡ ಮಾಡಲಾಗಿದೆ.

ಹಾಸನದಲ್ಲಿ ಮೊದಲ ಸಾವು: ಹಾಸನ ಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ತಳಿಗೆ ಡಿ.26ರಂದು ಮೊದಲ ಸಾವು ಸಂಭವಿಸಿತ್ತು. ಕೊರೊನಾ ಜೆಎನ್​​.1 ರೂಪಾಂತರಿ ತಳಿಗೆ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ಮೂಲದ ವ್ಯಕ್ತಿ ಮೃತಪಟ್ಟಿದ್ದು, ಮೃತರು ಈ ಮೊದಲೇ ಇತರ ರೋಗಗಳಿಂದ ಬಾಧಿತನಾಗಿದ್ದ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.

ವ್ಯಕ್ತಿಯ ಸಾವಿನ ನಂತರ ಪರೀಕ್ಷೆಗಾಗಿ ಗಂಟಲು ದ್ರವವನ್ನು ತಳಿ ಪತ್ತೆ ಟೆಸ್ಟ್​​ಗೆ ಒಳಪಡಿಸಿದಾಗ ಆತನಲ್ಲಿ ಕೊರೊನಾ ರೂಪಾಂತರಿ ತಳಿ ವೈರಸ್​​ ಪತ್ತೆಯಾಗಿತ್ತು. ಇದಲ್ಲದೇ ಜಿಲ್ಲೆಯಲ್ಲಿ ಶೀತ, ಜ್ವರ ಬಾಧಿತರಾಗಿರುವ ಐವರು ರೋಗಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಸದ್ಯ ಒಬ್ಬ ಮೃತಪಟ್ಟಿದ್ದು ನಾಲ್ವರು ಹೋಂ ಐಸೋಲೇಷನ್​ನಲ್ಲಿದ್ದಾರೆ. ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು.

ಮಂಗಳೂರಿನಲ್ಲೂ ಸಾವು: ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರು ನಗರದಲ್ಲಿ ಕಳೆದ ವಾರ ನಡೆದಿತ್ತು. ಉತ್ತರ ಭಾರತದ 40 ವರ್ಷದ ಕೂಲಿ ಕಾರ್ಮಿಕ ಮೃತ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಇವರು ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಇತರೆ ಕಾಯಿಲೆಗಳಿಂದಲೂ ಬಳಲುತ್ತಿದ್ದ ಇವರಿಗೆ ಕೊರೊನಾ ತಗುಲಿತ್ತು.

ಇದನ್ನೂ ಓದಿ: ಕೊಪ್ಪಳ: ಸಾಲಬಾಧೆಯಿಂದ ಒಂದೇ ವಾರದಲ್ಲಿ ಮೂವರು ಅನ್ನದಾತರ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.