ETV Bharat / state

ಬಿಜೆಪಿ ರಾಷ್ಟ್ರೀಯ ನಾಯಕರು 40% ಸರ್ಕಾರದ ಕಳಂಕ ತೆಗೆದು ಹಾಕ್ತಾರಾ?: ಸಿದ್ದರಾಮಯ್ಯ

author img

By

Published : Apr 30, 2023, 6:28 PM IST

siddaramaiah-reaction-on-bjp-leaders
ಬಿಜೆಪಿ ರಾಷ್ಟ್ರೀಯ ನಾಯಕರು 40% ಸರ್ಕಾರದ ಕಳಂಕ ತೆಗೆದು ಹಾಕ್ತಾರಾ: ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯದ್ದು ಭ್ರಷ್ಟ ಸರ್ಕಾರ ಎಂದು ಜನರಿಗೆ ಗೊತ್ತಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಜನರ ಸ್ಪಂದನೆ ನಮ್ಮ ನಿರೀಕ್ಷೆಗಿಂತ ಚೆನ್ನಾಗಿದೆ. ಈ ಬಾರಿ ಕಾಂಗ್ರೆಸ್​ ನೂರಕ್ಕೆ ನೂರು ಪ್ರತಿಶತ ಅಧಿಕಾರಕ್ಕೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಜಗಳೂರಿನಲ್ಲಿಂದು ‌ನಡೆಯುವ ಪ್ರಚಾರ ಸಭೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಚಿವ ಸೋಮಣ್ಣ ಜೆಡಿಎಸ್ ಅಭ್ಯರ್ಥಿ ಜೊತೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾತನಾಡಿದ್ದು ನಿಜ. ಆಸೆ, ಆಮಿಷ ತೋರಿಸಿ ಕಣದಿಂದ ಹಿಂದೆ ಸರಿದರೆ ಗೂಟದ ಕಾರು ಕೊಡ್ತೇವೆ ಎಂದು ಹೇಳಿರುವ ಆಡಿಯೋ ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ಚುನಾವಣಾ ಆಯೋಗ ಕ್ರಮ ತೆಗೆದುಕೊಂಡರೆ ಅವರಿಗೆ ಶಿಕ್ಷೆ ಆಗಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ವಾಸ್ತವ್ಯ ಹೂಡಿರುವ ಕುರಿತು ಪ್ರತಿಕ್ರಿಯಿಸಿ, ರಾಷ್ಟ್ರ ನಾಯಕರು ರಾಜ್ಯಕ್ಕೆ ಅಗಮಿಸಿದರೆ ರಾಜ್ಯ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರವನ್ನು ತೆಗೆದುಹಾಕಿ ಬಿಡುತ್ತಾರಾ?, ರಾಷ್ಟ್ರೀಯ ನಾಯಕರು ಬಂದು ಸರ್ಕಾರದ 40% ಕಮೀಷನ್​ ಕಳಂಕ ತೆಗೆದು ಹಾಕ್ತಾರಾ?, ಬಿಜೆಪಿಯದ್ದು ಭ್ರಷ್ಟ ಸರ್ಕಾರ ಎಂದು ಜನರ ಮನಸ್ಸಿಗೆ ಹೋಗಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಡಿ.ಕೆ.ಶಿವಕುಮಾರ್​ ಸಾವಿರಾರು ಕೋಟಿ ರೂ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಮಾತನಾಡಿ, ಅವರು ಜೈಲಿಗೆ ಹೋಗಿ ಬಂದಿದ್ದು ಬೇರೆ ವಿಷಯ. ಅಮಿತ್ ಶಾ ಕೂಡ ಮೂರು ವರ್ಷ ಜೈಲಿನಲ್ಲಿದ್ದರು. ಅವರನ್ನು ಗಡಿಪಾರು ಮಾಡಲಾಗಿತ್ತು. ಬಿಜೆಪಿಯ ಹಲವು ನಾಯಕರು ಬೇಲ್ ಮೇಲೆ ಇದ್ದಾರೆ. ಈಗ ಅವರು ಭಾಷಣ ಮಾಡೋಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದಿರುವ ಕುರಿತು ಮಾತನಾಡಿ, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರು ನಾಲಿಗೆ ಮೇಲೆ ಸುಸಂಸ್ಕೃತಿ ಇಲ್ಲದ ಜನರು. ಇಂತಹ ಹೇಳಿಕೆಯಿಂದ ಜನರಲ್ಲಿ ದ್ವೇಷ ಶುರುವಾಗುತ್ತದೆ. ಸಂಸ್ಕೃತಿ ಇಲ್ಲದವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರು ರಾಜಕೀಯದಲ್ಲಿ ಇರಲು ನಾಲಾಯಕ್‌ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧಿಸಿರುವವರ ಜೊತೆ ಮಾತನಾಡಿದ್ದೀನಿ, ಅವರು ಕಣದಿಂದ ಹಿಂದೆ ಸರಿಯದಿದ್ದರೆ ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದರು. ಈ ಬಾರಿ ನಮ್ಮ ಪಕ್ಷದಿಂದ ಜಗಳೂರು ಕ್ಷೇತ್ರಕ್ಕೆ ದೇವೇಂದ್ರಪ್ಪರನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದೇವೆ. ಸೂಕ್ತ ಅಭ್ಯರ್ಥಿಗಾಗಿ ಎಲ್ಲರ ಅಭಿಪ್ರಾಯ ಹಾಗೂ ಸರ್ವೇ ರಿಪೋರ್ಟ್ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ ರಾಜೇಶ್​ಗೆ ಎರಡು ಬಾರಿ ಟಿಕೆಟ್​ ನೀಡಿದ್ದೆವು. ಆದರೆ ಈಗ ಬಂಡಾಯ ಅಭ್ಯರ್ಥಿ ಸ್ಫರ್ಧಿಸಿದ್ದಾರೆ. ಪಕ್ಷದ ವಿರುದ್ದ ಇರುವ ರಾಜೇಶ್​ನನ್ನು ಉಚ್ಛಾಟನೆ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಭ್ರಷ್ಟಾಚಾರ: ದಾವಣಗೆರೆಯಲ್ಲಿ ಜೆ.ಪಿ.ನಡ್ಡಾ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.